ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು, ಪ್ಲಾಸ್ಟಿಕ್ ರಹಿತ ಪರಿಷೆಗೆ ಎಲ್ಲರೂ ಒತ್ತು ನೀಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆಯು ಈ ವರ್ಷ ಹಲವು ವಿಶೇಷತೆಗಳೊಂದಿಗೆ ಜನರನ್ನು ಆಕರ್ಷಿಸುತ್ತಿದೆ ಎಂದು ತಿಳಿಸಿದರು.
ಈ ಬಾರಿ ಆಯೋಜಕರು ಪ್ಲಾಸ್ಟಿಕ್-ರಹಿತ ಪರಿಷೆಗೆ ಒತ್ತು ನೀಡಿದ್ದು, ಪ್ಲಾಸ್ಟಿಕ್ ಬಳಸುವ ಅಂಗಡಿಗಳನ್ನು ಮುಚ್ಚತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ರೈತರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಕಳೆದ ವರ್ಷದಂತೆ ಈ ವರ್ಷವೂ ತೆರಿಗೆ-ರಹಿತ ವ್ಯವಸ್ಥೆ ಜಾರಿಗೆ ತರಲಾಗಿದೆ.
ಹಿಂದೆ ಎರಡು ದಿನಗಳ ಕಾಲ ನಡೆಯುತ್ತಿದ್ದ ಈ ಜಾತ್ರೆಯನ್ನು ಐದು ದಿನಗಳಿಗೆ ವಿಸ್ತರಿಸಲಾಗಿದ್ದು, ಒಟ್ಟಾರೆ ಏಳೆಂಟು ದಿನಗಳ ಕಾಲ ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.
ಕಳೆದ ವರ್ಷ ಸುಮಾರು 4-5 ಲಕ್ಷ ಜನರು ಭಾಗವಹಿಸಿದ್ದು, ಈ ಬಾರಿ 6-8 ಲಕ್ಷ ಜನರ ನಿರೀಕ್ಷೆ ಇದೆ. ಮುಂದಿನ ವರ್ಷ ಪರಿಷೆಯನ್ನು ಇನ್ನೂ ಹೆಚ್ಚು ಭವ್ಯವಾಗಿ ನಡೆಸುವುದಾಗಿ ರಾಮಲಿಂಗರೆಡ್ಡಿ ಅವರು ಭರವಸೆ ನೀಡಿದ್ದಾರೆ.

