ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿರುವುದು ಸಿದ್ದರಾಮಯ್ಯ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ರಿಯಲ್ ಎಸ್ಟೇಟ್ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅತೀವ ಆಸಕ್ತಿ ತೋರಿ ರಾಮನಗರ ಜಿಲ್ಲೆ ಎಂಬ ಗುರುತನ್ನು ಅಳಿಸಿ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ರಾಜಕೀಯ ಮತ್ತು ರಿಯಲ್ ಎಸ್ಟೇಟ್ ದಂಧೆ ನಡೆಸುವವರಿಗಷ್ಟೇ ಸರ್ಕಾರದ ಈ ನಿರ್ಧಾರ ಉಪಯೋಗವಾಗಲಿದೆ, ಜನಸಾಮಾನ್ಯರಿಗೆ ಯಾವುದೇ ಲಾಭವಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನಿರಂತರವಾಗಿ ವಿರೋಧಿಸುತ್ತಲೇ ಬಂದ ಭಾರತೀಯ ಕಾಂಗ್ರೆಸ್ ಈಗ ರಾಮನ ಹೆಸರಿನಲ್ಲಿರುವ ಊರುಗಳ ಇತಿಹಾಸವನ್ನು ಅಳಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ದೂರಿದೆ.
ರಾಮನಗರದ ಬದಲು ರಹೀಮ್ ನಗರ ಎಂದು ಹೆಸರಿದ್ದಿದ್ದರೆ ಅದನ್ನು ಬದಲಾಯಿಸುವ ಸಾಹಸಕ್ಕೆ ಕರ್ನಾಟಕ ಕಾಂಗ್ರೆಸ್ ಪಕ್ಷ ಮುಂದಾಗುತ್ತಿತ್ತೇ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.