ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅರ್ಥಪೂರ್ಣವಾಗಿ ನವೆಂಬರ್-8 ರಂದು ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ಹಾಗೂ ಚಿತ್ರದುರ್ಗ ಜಿಲ್ಲಾ ಕುರುಬರ ಸಂಘದ ಸಹಯೋಗದಲ್ಲಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಇತರೆ ಸಮಾಜದ 5 ಮಂದಿ ಸಾಧಕರಿಗೆ ಕನಕಶ್ರೀ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.
ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿ ನ.೮ರ ಬೆಳಗ್ಗೆ ೧೦.೩೦ಕ್ಕೆ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ.
ಸಂಸದರು, ಶಾಸಕರು, ನಾನಾ ನಿಗಮ ಮಂಡಳಿ ಅಧ್ಯಕ್ಷರು, ಅಕಾರಿಗಳು ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ ೧೨ಕ್ಕೆ ನಾನಾ ಕಲಾ ತಂಡಗಳೊಂದಿಗೆ ಜಿಲ್ಲಾ ಕುರುಬ ಸಂಘದ ಕಚೇರಿವರೆಗೆ ಕನಕದಾಸರ ಪುತ್ಥಳಿ, ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಜನ ಸೇವೆ ಮಾಡುತ್ತಿರುವ ಇತರೆ ಸಮಾಜದ 5 ಮಂದಿ ಸಾಧಕರಾದ ಆರ್ಯವೈಶ್ಯ ಸಮಾಜದ ಕಾಶಿವಿಶ್ವನಾಥ ಶ್ರೇಷ್ಠಿ, ವೀರಶೈವ ಸಮಾಜದ ಉದ್ಯಮಿ ಡಿ.ಎಸ್.ಸುರೇಶ್ಬಾಬು, ಸಮಾಜ ಸೇವಕ ಗಂಗಾಮತಸ್ಥ ಈ.ಅಶೋಕ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಲಿಜ ನಾಯ್ಡು ಸಮಾಜದ ಎನ್.ಅಶೋಕ್ ರವರಿಗೆ ಕನಕಶ್ರೀ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುರುಬ ಸಮಾಜದವರಾದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಸರ್ಕಾರಿ ವೈದ್ಯ ಡಾ.ಲೀಲಾ ರಾಘವನ್, ಪೊಲೀಸ್ ನಿರೀಕ್ಷಕ ಶಿವರಾಜ್, ನ್ಯಾಯವಾದಿ ಎಂ.ಎನ್.ಲಕ್ಷ್ಮೀಶ್, ಸಮಾಜ ಸೇವಕ ಟಿ.ಪರಶುರಾಮ್, ನೀಟ್ ಪರೀಕ್ಷೆಯಲ್ಲಿ ಸರಕಾರಿ ಕೋಟಾದಡಿ ವೈದ್ಯಕೀಯ ಪ್ರವೇಶ ಪಡೆದ ಸುದರ್ಶನ್, ರಾಷ್ಟ್ರೀಯ ಟೇಕ್ವಾಂಡೊ ಪಟು ಮುರುಳಿ, ಭಜನೆ ನಿಂಗಪ್ಪ ಹಾಗೂ ಪಾರಂಪರಿಕ ವೈದ್ಯೆ ಗಂಗಮ್ಮ ತಾಳಿಕಟ್ಟೆ ಇವರನ್ನು ಗೌರವಿಸಲಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್, ಗೌರವಾಧ್ಯಕ್ಷ ಎಚ್.ಮಂಜಪ್ಪ, ಖಜಾಂಚಿ ಆರ್.ಮೃತ್ಯುಂಜಯ, ನಿದೇಶಕ ಆರ್.ಸುರೇಶ್ ಉಗ್ರಾಣ, ತಾಲೂಕು ಅಧ್ಯಕ್ಷ ಕೆ.ಓಂಕಾರಪ್ಪ, ಗೌರಾವಾಧ್ಯಕ್ಷ ಡಿ.ಆರ್.ಲೋಕೇಶ್ವರಪ್ಪ ಬೊಮ್ಮಕ್ಕನಹಳ್ಳಿ, ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್ ಮುದ್ದಜ್ಜಿ, ನಿವೃತ್ತ ನೌಕರರ ಸಂಘದ ರಮೇಶ್ ಮದರಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಕೆ.ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.

