ಚಂದ್ರವಳ್ಳಿ ನ್ಯೂಸ್, ಧಾರವಾಡ:
ಸಾರಿಗೆ ನೌಕರರು ಮಾಡುತ್ತಿರುವ ಹೋರಾಟಕ್ಕೆ ಸಹಮತವಿದೆ. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಹೋರಾಟಗಳು ನಡೆಯುತ್ತವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆ ಕುರಿತು ಸಚಿವ ಲಾಡ್ ಮಾತನಾಡಿದರು. ಸರ್ಕಾರದಲ್ಲಿ ಖಾಲಿ ಇದ್ದ ಹುದ್ದೆಗಳ ಪೈಕಿ ಈಗಾಗಲೇ 50 ಸಾವಿರ ಹುದ್ದೆಗಳನ್ನು ತುಂಬಿದ್ದೇವೆ. ಒಳ ಮೀಸಲಾತಿ ಸೇರಿದಂತೆ ಕೋರ್ಟ್ ವಿಚಾರಗಳು ಬಗೆಹರಿದ ಮೇಲೆ ವಿಚಾರ ಮಾಡುತ್ತೇವೆ. ವಯೋಮಿತಿ ಹೆಚ್ಚಳ ವಿಚಾರ ಸರ್ಕಾರದ ಗಮನದಲ್ಲಿದ್ದು ಒಂದು ಬಾರಿಗೆ ವಯೋಮಿತಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಶಾಸಕರು ಫಾರಿನ್ ಟೂರ್ ಹೋಗಿರುವ ಕುರಿತು ಬಿಜೆಪಿ ಟೀಕೆಗಳಿಗೆ ಪ್ರತಿಕ್ರಿಯಿಸಿದ ಲಾಡ್, ಬಿಜೆಪಿ ಅವರು ಸರ್ಕಾರ ಮಾಡುವಾಗ ಎಲ್ಲಿಗೆ ಹೋಗಿದ್ದರು?. ಅವರ ಟೂರ್ ಬಗ್ಗೆ ಹೇಳಬೇಕಾ ನಿಮಗೆ? ಬೇರೆ ಯಾವುದೇ ವಿಷಯವಿಲ್ಲವೇ ಮಾತನಾಡಲು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಲಾಡ್ ಅವರು ಸರ್ಕಾರ ಅವರನ್ನು ಟೂರ್ಗೆ ಕಳುಹಿಸಿದೆ.
ಅಲ್ಲಿಗೆ ಹೋಗಿ ಅವರೇನು ರಾಜಕಾರಣ ಮಾಡಲು ಸಾಧ್ಯ?. 20ರಿಂದ 30 ಜನ ಅಲ್ಲಿಗೆ ಹೋದರೂ ಸಹ ರಾಜಕಾರಣ ಮಾಡಲು ಆಗೋದಿಲ್ಲ, ಅಲ್ಲಿಗೆ ಹೋಗಿ ವೋಟ್ ಹಾಕುತ್ತಾರಾ?. ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ಹೋಗಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

