ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೂ‘ ಬೆಳೆಯುವ ‘ಮಾಲಿ‘ ಸಮುದಾಯದ ಸಾವಿತ್ರಿಬಾಯಿ ಅಕ್ಷರಗಳನ್ನೇ ಪೋಣಿಸಿ ಹೂಮಾಲೆ ಮಾಡಿದಾಕೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ ತಿಪ್ಪೇಸ್ವಾಮಿ ಹೇಳಿದರು
ಚಿತ್ರದುರ್ಗ ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಿಯಿರಿ ಕಲಿಯಿರಿ ವಿದ್ಯೆ ಕಲಿಯಿರಿ, ಆಂಗ್ಲರ ಕಾಲದಲ್ಲಿ ಎಲ್ಲರೂ ಕಲಿಯಲಿ ಮನುವನ್ನು ಕೇಳದಿರಿ ಯಾರೂ ಹಿಂದುಳಿಯದಿರಿ, ವಿದ್ಯೆ ಕಲಿಯೋಣ ಬನ್ನಿ ಜ್ಞಾನ ಪಡೆಯೋಣ ಬನ್ನಿ, ಎಲ್ಲರೂ ಒಂದಾಗಿ ಬನ್ನಿ ಕೂಡಿ ಬಾಳೋಣ ಬನ್ನಿ,ಕೂಡಿ ಕಲಿಯೋಣ ಬನ್ನಿ ಎಂದು ಸಾವಿತ್ರಿಬಾಯಿ ಅವರಿಂದ ಮರಾಠಿ ಭಾಷೆಯ ಪ್ರಥಮ ಬಂಡಾಯ ಕಾವ್ಯ ಪುಣೆಯ ಓಣಿ ಓಣಿಗಳಲ್ಲಿ ಮೊಳಗಿತು. ಹೀಗೆ ಪುಣೆಯ ಬುಧವಾರವಾಡದ ಬಾಲಿಕಾ ಶಾಲೆಯಲ್ಲಿ ಪಾಠ ಮಾಡುತ್ತಾ ಅಕ್ಷರ ದೀಪವನ್ನು ಬೆಳಗುತ್ತಾ ಭಾರತದ ಮೊದಲಶಿಕ್ಷಕಿಯಾಗಿ ಅಕ್ಷರಕ್ರಾಂತಿಗೆ ಕಾರಣರಾದರು ಎಂದರು.
ಹುಡುಗಿಯರಿಗಾಗಿ, ಶೂದ್ರರಿಗಾಗಿ ತೆರೆದ ಶಾಲೆಗಳನ್ನು ನಿಲ್ಲಿಸುವುದಕ್ಕಾಗಿ ಸಂಪ್ರದಾಯಸ್ಥ ಸನಾತನಿ ಬ್ರಾಹ್ಮಣರು ಪ್ರಬಲ ತಡೆಯೊಡ್ಡುತ್ತಾರೆ. ಮೊದಲ ಹುಡುಗಿಯರ ಶಾಲೆಗೆ ಜಾಗ ಕೊಟ್ಟ ಚಿತ್ಪಾವಣ ಬ್ರಾಹ್ಮಣ ತಾತ್ಯಾಸಾಹೇಬ್ ಭಿಡೆ ಅವರಿಗೆ ಜೀವಬೆದರಿಕೆ ಒಡ್ಡಲಾಗುತ್ತದೆ. ಭಿಡೆಯವರು ಈ ಬೆದರಿಕೆಗೆ ಹೆದರದೆ ದೃಢವಾಗಿ ನಿಲ್ಲುತ್ತಾರೆ. ಸಾವಿತ್ರಿಬಾಯಿ ಶಾಲೆಗೆ ಪಾಠಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಸೆಗಣಿ ಎಸೆಯುವುದು, ಕಲ್ಲು ತೂರುವುದು ಮಾಡುತ್ತಾರೆ ಇದನ್ನು ಅರಿತ ಜ್ಯೋತಿಬಾ ಅವರ ಕ್ರಾಂತಿಗುರು ಲಾಹೂಜಿ ಸಾಳ್ವೆ ತಮ್ಮ ಗರಡಿಮನೆಯ ನಾಲ್ಕು ಪೈಲ್ವಾನರನ್ನು ಸಾವಿತ್ರಿಬಾಯಿಗೆ ಅಂಗರಕ್ಷಕರಾಗಿ ನೇಮಿಸುತ್ತಾರೆ.
ಹೀಗೆ ಆರಂಭವಾದ ಶಾಲೆಗಳ ಚಳವಳಿಯ ಪರಿಣಾಮ ೧೮೪೮ ರಿಂದ ೧೮೫೨ರ ಅವಧಿಯಲ್ಲಿ ೧೮ಶಾಲೆಗಳನ್ನು ಆರಂಭಿಸುತ್ತಾರೆ. ಕೇವಲ ೧೪ವರ್ಷದಲ್ಲಿ ೧೮ಶಾಲೆಗಳನ್ನು ತೆರೆದು ಒಂದು ಶಿಕ್ಷಣ ಕ್ರಾಂತಿಯನ್ನೆ ಮಾಡುತ್ತಾರೆ. ಸಾವಿತ್ರಿಬಾಯಿ ಶಿಕ್ಷಣದ ಜೊತೆ ಜೊತೆಗೆ ಸಂಘಟನೆಯನ್ನು ಕಟ್ಟುತ್ತಾರೆ. ಜನವರಿ.೧೪ರ ೧೮೫೨ರಲ್ಲಿ ಪುಣೆಯಲ್ಲಿ ‘ಮಹಿಳಾ ಸೇವಾ ಸಂಘ‘ವನ್ನು ಸ್ಥಾಪಿಸುತ್ತಾರೆ.
ಇದರಲ್ಲಿ ಎಲ್ಲಾ ಜಾತಿ ಧರ್ಮದ ಮಹಿಳೆಯರು ಜಾತಿ ಧರ್ಮದ ಗಡಿದಾಟಿ ಒಂದಾಗಿಸಿ ಮಹಿಳಾ ಶಕ್ತಿಯನ್ನು ಏಕೀಕರಣ ಮಾಡುವ ಕನಸೊತ್ತಿದ್ದರು. ಈ ಸಂದರ್ಭದಲ್ಲಿ ‘ಅರಿಶಿನ ಕುಂಕುಮ‘ ಎನ್ನುವ ಆಚರಣೆಯನ್ನು ಮುನ್ನಲೆಗೆ ತಂದರು. ಸಂಕ್ರಾAತಿಯ ದಿನ ‘ಎಳ್ಳುಬೆಲ್ಲ‘ ಎನ್ನುವ ಮತ್ತೊಂದು ಹೊಸ ಆಚರಣೆಯ ಚಾಲ್ತಿಗೆ ತರಲಾಯಿತು. ಈ ಸಂಘಕ್ಕೆ ಪುಣೆಯ ಜಿಲ್ಲಾಧಿಕಾರಿಯ ಪತ್ನಿ ಈ.ಸಿ.ಜೋನ್ಸ್ ಅಧ್ಯಕ್ಷರಾಗಿದ್ದರು. ಸಾವಿತ್ರಿಬಾಯಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.
ಅಕ್ಷರ ಓದಲು ಬರೆಯಲು ಕಲಿತರಷ್ಟೇ ಸಾಲದು ಆ ಅಕ್ಷರ ಓದಿನ ಮೂಲಕ ಜ್ಞಾನದ ಹುಡುಕಾಟ ಮಾಡಬೇಕೆಂಬುದು ಜ್ಯೋತಿಭಾ ಕನಸಾಗಿತ್ತು. ಇದರ ಪ್ರತಿಫಲವಾಗಿ ೧೮೫೨ರಲ್ಲಿ ‘ಪುಣೆ ಲೈಬ್ರರಿ‘ ಯನ್ನು ಸ್ಥಾಪಿಸುತ್ತಾರೆ. ಇದರ ಫಲವಾಗಿ ೧೮೫೩ರಲ್ಲಿ ಮುಕ್ತಾ ಸಾಳ್ವೆ ಎಂಬ ದಲಿತ ವಿದ್ಯಾರ್ಥಿನಿ ಗ್ರಂಥಾಲಯದ ಓದಿನ ಪರಿಣಾಮ ‘ಅಸ್ಪೃಶ್ಯರ ನೋವು‘ ಎಂಬ ಲೇಖನ ಬರೆಯುತ್ತಾಳೆ. ಈ ಬರಹ ವಿಕ್ಟೋರಿಯಾ ರಾಣಿಯ ಗಮನಸೆಳೆಯುತ್ತದೆ.
ಜ್ಯೋತಿಬಾ ಅವರ ಸಾರ್ವತ್ರಿಕ ಶಿಕ್ಷಣ ಕನಸಿಗೆ ಬೆಂಗಾವಲಾಗಿ ನಿಂತವರನ್ನು ನೆನೆಯಲೇ ಬೇಕಾದವರೆಂದರೆ ಕ್ರಿಸ್ಚಿಯನ್ ಮತಧರ್ಮ ಪ್ರಚಾರಕ ರೆವರೆಂಡ್ ಲಿಂಜಿಟ್ ಸಾಹೇಬ್, ಮುಸ್ಲಿಂ ಮದರಸಾದ ಶಿಕ್ಷಕ ಗಫೂರ್ ಬೇಗ್ ಮುನ್ಷಿ, ಜೋತಿಬಾ ಸಹಪಾಟಿಗಳಾದ ಬ್ರಾಹ್ಮಣರಾದ ಸದಾಶಿವ ಬಲ್ಲಾಳ್ ಗೋವಂಡೆ, ಮೋರೆ ವಿಠ್ಠಲ್ ವಾಳ್ ವಲ್ ಕರ್, ಸಖಾರಾಮ ಯಶವಂತ್ ಪರಾಂಜಪೆ, ತಾತ್ಯಾ ಸಾಹೇಬ್ ಭಿಡೆ ಮೊದಲಾದವರು ಜೋತಿಬಾ ಮತ್ತು ಸಾವಿತ್ರಿಬಾಯಿಗೆ ಹೆಗಲೆಣೆಯಾಗಿ ನಿಂತಿದ್ದರು ಎಂದರು.
ಈ ಸಂದರ್ಭದಲ್ಲಿ ಸಮತಾ ಸೇವಾ ಸಮಿತಿ ಅಧ್ಯಕ್ಷ ಪಿಲ್ಲಳ್ಳಿ ಹರೀಶ್, ಬಿಎಸ್ಐ ಜಿಲ್ಲಾ ಕಾರ್ಯದರ್ಶಿ ನನಿವಾಳ ರವಿಕುಮಾರ್, ಉಪನ್ಯಾಸಕ ಈ.ನಾಗೇಂದ್ರಪ್ಪ, ದ್ರಾಕ್ಷಾಯಿಣಿ, ಗಿರಿಜಾ, ತಿಪ್ಪಮ್ಮ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನಿಕೋಡ್ ರಮೇಶ್ ಇತರರಿದ್ದರು.