ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ವಿಧವೆಯೊಬ್ಬಳ ಆತ್ಮ ನಿವೇದನೆ
ಸೂಳೆ ನಾನಾಗಲಾರೆ..!
ವಿಧವೆ ನಾನು.
ವೈಧವ್ಯ ನಾ ಬೇಡಿದ್ದಲ್ಲ
ಗಂಡ ಸತ್ತ ನಂತರ
ಸಮಾಜ ಕಟ್ಟಿದ ಹೆಸರು ‘ವಿಧವೆ‘ !
ವೇಶ್ಯೆಯೆಂಬಂತೆ ನೋಡದಿರಿ
ಸುಕ್ಕುಗಟ್ಟದ, ಜಿಡ್ಡು ಮಾಸದ ಅಂದ
ಉಬ್ಬಿದೆದೆಯ ಮೈಮಾಟಕೆ
ಸೂಳೆಯಂತೆ ನೋಡದಿರಿ!
ನಿಮಗೆ ಶುಭವೆನ್ನಿಸಿದ ಕಾರ್ಯದಲ್ಲಿ
ರಂಡೆ ಎದುರಾದರೆ
ಅಶುಭವೆಂದು ಅವಮಾನಿಸದಿರಿ,
ಅವಳ ಮನಸ್ಸು ಸ್ವಚ್ಛವಿದೆ
ಮೀಸೆ ಹೊತ್ತವರಲ್ಲೂ
ವಿಧುರರಿಲ್ಲವೇ ನನ್ನಂತೆ ?!
ನಿಮ್ಮ ಮಂಗಳ ಕಾರ್ಯಗಳಿಗೆ ನನ್ನ ಮಂಗಳ
ಹೃದಯಕ್ಕೆ ಆಹ್ವಾನವಿರಲಿ,
ಬೆನ್ನ ಹಿಂದಾದರೂ ನಿಂತು ಹರಸುವೆ॥
ಬೆನ್ನ ಹಿಂದೆ ನಿಂತ ವಿಟನೆಂಬ ಜೊಲ್ಲುಗ
ಇದೇನು ಕಬ್ಬಡಿ ಮೈದಾನದಂತಿದೆ
ನೋಡಿದರೆ ಇವಳೆಷ್ಟು
‘ಚೆನ್ನ‘
ನನ್ನ ಬೆನ್ನು ವರ್ಣಿಸುವ ಮಿಟಗಾರನಿಗೆ
ಅವನ ಮನೆಯ ಹೆಣ್ಣು ಜೀವ ಕಾಣದು,
ಕಾಮ ಕೇಳಿಗೆ ಕರೆವ ಗಂಡು ಸಮಾಜಕ್ಕೆ
‘ಬಸವಿ ‘
ನಾನಲ್ಲವೆಂದು ಬದುಕಿ ತೋರಿಸಬೇಕಿದೆ.
ಕವಿತೆ-ಅಜ್ಜೇರಿ ತಿಪ್ಪೇಸ್ವಾಮಿ, ಮೊಳಕಾಲ್ಮೂರು.