ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸಭಾ ಕಲಾಪಕ್ಕೆ ಜನ ಪ್ರತಿನಿಧಿಗಳು ಕ್ಷುಲ್ಲಕ ಕಾರಣಕ್ಕಾಗಿ ಗೈರು ಹಾಜರಾಗುವದನ್ನು ತಪ್ಪಿಸಲು, ಭೋಜನದ ಬಳಿಕ ವಿಶ್ರಾಂತಿ ಪಡೆಯಲು ಮೊಗಸಾಲೆಯಲ್ಲಿ ರೀಕ್ಲೈನರ್ ಚೇರ್, ಮಸಾಜ್ ಚೇರ್, ಕಾಫಿ – ಟೀ ಕುಡಿಯುವದಕ್ಕಾಗಿ ಪದೇ ಪದೇ ಹೊರ ಹೋಗುವುದನ್ನು ತಪ್ಪಿಸಲು, ಸದನದ ಒಳಗೆ ಕಾಫಿ/ ಟೀ ವ್ಯವಸ್ಥೆ ಮಾಡಲು ಮುಂದಾಗಿರುವ ಗೌರವಾನ್ವಿತ ಸ್ಪೀಕರ್ ಕ್ರಮವನ್ನು ಮೆಚ್ಚಬೇಕೋ ಅಥವಾ ಅವರ ಅಸಹಾಯಕತೆ ಎಂದು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಎಲ್.ನಾರಾಯಣಾಚಾರ್ ವ್ಯವಸ್ಥೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕ ಮಕ್ಕಳು ಹಠ ಮಾಡಿದಾಗ ಪಾಲಕರು ಸಿಹಿ ತಿನಿಸು, ಆಟಿಕೆ ಕೊಡಿಸುವ ಹಾಗೆ, ಇಲ್ಲಿ ಮಾನ್ಯ ಸ್ಪೀಕರ್ ವರ್ತಿಸಿದ್ದಾರೆ ಅನಿಸುತ್ತದೆ. ಪ್ರಭುತ್ವ ಮೆರೆಯಬೇಕಾದ ಶಾಸಕರಿಗೆ ಶಿಸ್ತಿನ ಪಾಠ ಕಳಿಸುವುದನ್ನು ಬಿಟ್ಟು, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದರಿಂದ ಸದನದ ಗಾಂಭೀರ್ಯ, ಪಾವಿತ್ರ್ಯತೆಯನ್ನು ಹೇಗೆ ಕಾಪಾಡಲು ಸಾಧ್ಯ?
ಸರಳ ಸಜ್ಜನಿಕೆಗೆ ಹೆಸರಾದ ಮಾನ್ಯ ಸ್ಪೀಕರ್ ರವರು ಈ ಬಗ್ಗೆ ಮರು ಪರಿಶೀಲನೆ ಮಾಡದಿದ್ದರೆ ಜನ ಸೇವೆಯೇ ಜನಾರ್ಧನ ಸೇವೆ ಎಂಬುದರ ಬದಲು ಶಾಸಕರ ಸೇವೆ ಸರ್ಕಾರದ ಕರ್ತವ್ಯ ಎಂದು ಹೇಳುವುದು ಸೂಕ್ತ ಎನಿಸುತ್ತದೆ ಎಲ್. ನಾರಾಯಣಾಚಾರ್, ಹಿರಿಯೂರು ಎಚ್ಚರಿಸಿದ್ದಾರೆ.