ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಿವಮೊಗ್ಗದಲ್ಲಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಕ್ಷರಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಪದ್ಮಲತಾ ಹಾಗೂ ವಿಜಯನಗರ ಜಿಲ್ಲೆಯ ಕೆಲವು ಮಹಿಳೆಯರಿಗೆ ಗಾಂಚಾಲಿ, ನೀನು ಎಂಬ ಶಬ್ದ ಬಳಕೆ ಮಾಡಿ ಏಕ ವಚನದಲ್ಲಿ ನಿಂದಿಸಿರುವ ವಿಡಿಯೋ ನೋಡಿ ಆಶ್ಚರ್ಯ ಹಾಗೂ ದಿಗ್ಭ್ರಮೆ ಉಂಟಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ, ಪ್ರಧಾನ ಕಾರ್ಯದರ್ಶಿ ಕೆ. ಶಶಿಕಲಾ ಹೇಳಿದ್ದಾರೆ.
ಮಹಿಳಾ ನೌಕರರಿಗೆ ಕನಿಷ್ಠ ಗೌರವ ನೀಡದೇ ಅವಮಾನಕಾರಕ ಪದ ಬಳಸಿದ್ದು ಖಂಡನೀಯ. ಲಿಂಗ ಸಮಾನತೆ, ಸಾಮರಸ್ಯ ಗಾಳಿಗೆ ತೂರಿ ಪ್ರಜಾಪ್ರಭುತ್ವಕ್ಕೆ ಹಾಗೂ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ ಇದಾಗಿದೆ.
ಈ ರೀತಿಯ ವರ್ತನೆ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಈ ಬಗ್ಗೆ ಕ್ಷಮೆ ಕೇಳದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.