ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರನ್ನು ನಾವುಗಳೆಲ್ಲಾ ನೆನಪು ಮಾಡಿಕೊಳ್ಳುತ್ತೇವೆಯೇ ವಿನಃ ಅವರ ಚಿಂತನೆಗಳನ್ನು ಯಾರು ಪಾಲಿಸುತ್ತಿಲ್ಲ ಎಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ತಿಳಿಸಿದರು.
ರಾಜ್ಯ ಸರ್ಕಾರ ಜಾತಿ ಗಣತಿ ಮರು ಸಮೀಕ್ಷೆ ನಡೆಸಲು ಸದನದಲ್ಲಿ ತೀರ್ಮಾನ ಕೈಗೊಂಡಿರುವುದರಿಂದ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದಿಂದ ಶನಿವಾರ ಏರ್ಪಡಿಸಲಾಗಿದ್ದ ಹಿಂದುಳಿದವರ ಜಾಗೃತಿ ಸಭೆ ಉದ್ಗಾಟಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ರವರ ಆಸೆಯಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಆದರೆ ಶೋಷಿತ ಸಮುದಾಯಗಳು ಶಿಕ್ಷಣದಿಂದ ದೂರ ಉಳಿದಿರುವುದು ನೋವಿನ ಸಂಗತಿ. ಬ್ರಿಟೀಷರು ನಮ್ಮ ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ಪ್ರಾಂಭಿಸಿದಾಗಿನಿಂದ ನಮಗೆ ಶಿಕ್ಷಣ ಸಿಕ್ಕಿದ್ದು, ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಜಾರಿಯಾದಾಗ ಮತ್ತೊಬ್ಬರ ಮನೆ ಕಾಯುವ ಕೆಲಸ ತಪ್ಪುತ್ತದೆಂದರು.
ಶಾಮನೂರು ಶಿವಶಂಕರಪ್ಪನವರಿಗೆ ಕೇವಲ ಲಿಂಗಾಯಿತರಷ್ಟ ಮತಗಳನ್ನು ಹಾಕಿಲ್ಲ. ಶೋಷಿತ ಸಮುದಾಯಗಳ ಮತಗಳಿಂದ ಶಾಸಕರಾಗಿದ್ದಾರೆ. ಅದೇ ರೀತಿ ಸ್ಥಳೀಯ ಶಾಸಕರು ಶೋಷಿತ ಸಮುದಾಯಗಳ ಮತಗಳನ್ನು ಪಡೆದು ಶಾಸಕರಾಗಿದ್ದಾರೆ. ದೇಶದಲ್ಲಿ ಹಿಂದುಳಿದವರಿಗೆ ರಕ್ಷಣೆ ಇಲ್ಲದಂತಾಗಿದೆ. ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸುರವರನ್ನು ಯಾರು ಮರೆಯುವಂತಿಲ್ಲ. ಉಚಿತ ಗ್ಯಾರೆಂಟಿಗಳನ್ನು ನಾವುಗಳ್ಯಾರು ಕೇಳಿರಲಿಲ್ಲ. ನಮಗೆ ಜಾತಿ ಸಂಖ್ಯೆ ಬೇಕಿಲ್ಲ. ನಮ್ಮ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಅವಕಾಶ ಕೊಡಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಜಾತಿ ಗಣತಿ ಮರು ಸಮೀಕ್ಷೆ ಪೂರ್ವದಲ್ಲಿ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ. ಆಧಾರ್ ಕಾರ್ಡ್ ಲಿಂಕ್ ಮಾಡಿ ಜಾತಿ ಗಣತಿ ನಡೆಸುವಂತೆ ರಾಮಚಂದ್ರಪ್ಪನವರು ಸರ್ಕಾರವನ್ನು ಒತ್ತಾಯಿಸಿದರು.
ಮಾನವ ಬಂಧುತ್ವ ವೇದಿಕೆ ಮುಖಂಡ ಅನಂತನಾಯ್ಕ ಮಾತನಾಡಿ ಅಹಿಂದಾ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಸಹಿಸಿಕೊಳ್ಳಲು ಆಗದೆ ಕೋಮುವಾದಿ ಬಿಜೆಪಿ.ಯವರು ಮುಡಾ ಹಗರಣದಲ್ಲಿ ಸಿಲುಕಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ಪಾತ್ರವೇನು ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಎಸ್ಸಿ.ಗಳು ಎನ್ನುವ ಕಾರಣಕ್ಕೆ ದೇವಸ್ಥಾನಗಳಿಗೆ ಹೋಗುವಂತಿಲ್ಲ. ನೀರು ಮುಟ್ಟಬಾರದೆಂಬ ಕಟ್ಟುಪಾಡುಗಳಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳಾಗಿದ್ದರೂ ಇನ್ನು ದೌರ್ಜನ್ಯ, ದಬ್ಬಾಳಿಕೆ ನಿಂತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಬುದ್ದ, ಬಸವ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಇವರುಗಳು ಜಾತಿ ತಾರತಮ್ಯದ ವಿರುದ್ದ ಮಾತನಾಡಿದ್ದಾರೆ. ಆದರೂ ಸಾಮಾಜಿಕ ನ್ಯಾಯ ಇನ್ನು ಸಿಗುತ್ತಿಲ್ಲ. ದೇಶದ ಪ್ರಧಾನಿ ಮೋದಿರವರಿಂದ ಹಿಂದುಳಿದವರಿಗೆ ಯಾವ ಕೊಡುಗೆಯೂ ಇಲ್ಲ. ಸಾಮಾಜಿಕ, ಶೈಕ್ಷಣಿ, ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಕಾಂತರಾಜ್ ನೇತೃತ್ವದಲ್ಲಿ ಸರ್ಕಾರ ಆಯೋಗ ರಚಿಸಿ ಕೋಟ್ಯಾಂತರ ರೂ.ಗಳ ಖರ್ಚು ಮಾಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಇವರುಗಳು ವರದಿ ಸರಿಯಿಲ್ಲವೆಂದು ಸ್ವೀಕಾರ ಮಾಡಲಿಲ್ಲ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸದಾಗಿ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ. ಅವರ ಬೆಂಬಲಕ್ಕೆ ಶೋಷಿತ ಸಮುದಾಯಗಳು ನಿಲ್ಲಬೇಕೆಂದು ಕರೆ ನೀಡಿದರು.
ಮೀಸಲಾತಿ ಪ್ರಮಾಣವನ್ನು ಐವತ್ತಕ್ಕೆ ನಿಲ್ಲಿಸಿ ನಮ್ಮಲ್ಲಿ ಜಗಳ ಹಚ್ಚುತ್ತಿದ್ದಾರೆ. ಸುಪ್ರೀಂಕೋರ್ಟ್ ಮೀಸಲಾತಿ ಪ್ರಮಾಣವನ್ನು ಐವತ್ತಕ್ಕಿಂತ ಹೆಚ್ಚು ಮಾಡಬಹುದೆಂದು ಹೇಳಿದೆ. ಮೀಸಲಾತಿಯನ್ನು ಹೆಚ್ಚಿಸಿದರೆ ನಮಗೆ ಸೌಲಭ್ಯಗಳು ಸಿಗುತ್ತವೆ. ಬ್ರಾಹ್ಮಣರು ಕೇಳದಿದ್ದರು ಕೇಂದ್ರ ಸರ್ಕಾರ ಶೇ.ಹತ್ತರಷ್ಟು ಮೀಸಲಾತಿ ಹೆಚ್ಚಿಸಿದೆ. ಸಂಸತ್ ಮತ್ತು ಕ್ಯಾಬಿನೆಟ್ನಲ್ಲಿ ನಮಗೆ ಸಿಗಬೇಕಾದ ಪಾಲು ಸಿಕ್ಕಿಲ್ಲ. ಹೈಕೋರ್ಟ್, ಸುಪ್ರೀಂಕೋರ್ಟ್ ನೇಮಕಾತಿಯಲ್ಲೂ ನಮಗೆ ಅನ್ಯಾಯವಾಗಿದೆ. ಇನ್ನು ಮೂರು ವರ್ಷಗಳ ಕಾಲ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ. ವೈಮನಸ್ಸುಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಅವರ ಬೆಂಬಲಕ್ಕೆ ನಿಲ್ಲೋಣ ಎಂದು ಕರೆ ನೀಡಿದರು.
ಅಖಿಲ ಕರ್ನಾಟಕ ಶೋಷಿತ ಸಮುದಾಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಸಿ.ಟಿ.ಕೃಷ್ಣಮೂರ್ತಿ ಮಾತನಾಡುತ್ತ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಇನ್ನು ಹಿಂದುಳಿದವರು, ಶೋಷಿತ ಸಮುದಾಯದವರಲ್ಲಿ ಜಾಗೃತಿಯಾಗಿಲ್ಲ. ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿರವರು ಮೊದಲಿನಿಂದಲೂ ಹಿಂದುಳಿದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದರ ಜೊತೆಗೆ ಮೂಢನಂಬಿಕೆ ವಿರುದ್ದ ಶೋಷಿತರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಶ್ಲಾಘಿಸಿದರು.
ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್, ಪರಿಶಿಷ್ಟ ಜಾತಿ, ಪರಿಶಿಷ್ಚ ಪಂಗಡಗಳ ಅಲೆಮಾರಿ ಸಂಘಟನೆಯ ರಾಜ್ಯಾಧ್ಯಕ್ಷ ಆದರ್ಶ ಯಲ್ಲಪ್ಪ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಮಂಜಪ್ಪ, ಹೆಚ್.ಸಿ.ನಿರಂಜನಮೂರ್ತಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ವಿಶ್ವಕರ್ಮ ಸಮಾಜದ ಪ್ರಸನ್ನ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ
ಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್, ವಲಿಖಾದ್ರಿ, ಎಂ.ಡಿ.ರವಿ, ಜೀವೇಶ್ವರ್, ಮಡಿವಾಳ ಸಮಾಜದ ಕೆ.ಆರ್.ಮಂಜುನಾಥ್, ಶ್ರೀನಿವಾಸ, ಎ.ಸಾಧಿಕ್ವುಲ್ಲಾ
ಸಲೋಮನ್ ರಾಜ್ಕುಮಾರ್, ಶ್ಯಾಮಣ್ಣ, ದ್ರಾಕ್ಷಾ ರಸ ಮಂಡಳಿ ರಾಜ್ಯಾಧ್ಯಕ್ಷ ಬಿ.ಯೋಗೇಶ್ಬಾಬು, ಬಂಜಾರ ಸಮಾಜದ ಗಿರೀಶ್ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೃಷ್ಣಮೂರ್ತಿ, ಪ್ರಕಾಶ್ಮೂರ್ತಿ, ಕಂದಿಕೆರೆ ಸುರೇಶ್ಬಾಬು, ಕುಂಬಾರ ಸಮಾಜದ ಬೈಲಮ್ಮ, ಮಾನದ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ್
ಬಚ್ಚಬೋರನಹಟ್ಟಿ, ವದಿಗೆರೆ ರಮೇಶ್, ಹೆಚ್.ಅಂಜಿನಪ್ಪ, ಯರ್ರಿಸ್ವಾಮಿ ಸೇರಿದಂತೆ ಶೋಷಿತ ಸಮುದಾಯಗಳ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು.

