ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಶಾಮನೂರು ಶಿವಶಂಕರಪ್ಪ ಅವರ ಪಕ್ಷನಿಷ್ಠೆ, ಬದ್ಧತೆ, ಜನಪರ ಕಾಳಜಿ, ಸಾಮಾಜಿಕ ಸೇವೆ ಎಂದಿಗೂ ಸ್ಮರಣಿಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಆಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದಾವಣಗೆರೆ ನಗರವನ್ನು ವಾಣಿಜ್ಯ, ಶಿಕ್ಷಣ, ವೈದ್ಯಕೀಯ ಕ್ಷೇತ್ರ ಸೇರಿ ವಿವಿಧ ಕ್ಷೇತ್ರದಲ್ಲಿ ದೇಶವನ್ನು ಗಮನ ಸೇಳೆಯುವಂತೆ ಕಟ್ಟಿದ್ದಾರೆ. ಶಾಸಕ, ಸಂಸದ, ಸಚಿವರಾಗಿ ಸಾರ್ವಜನಿಕರ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಕೊಡಗೈ ದಾನಿಗಳಾಗಿದ್ದ ಶಿವಶಂಕರಪ್ಪ ದೊಡ್ಡ ಆಲದ ಮರದಂತೆ ಸಮಾಜ ಸೇವೆ ಸಲ್ಲಿಸಿದರು ಎಂದರು.
ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿ ಪಕ್ಷಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಸಕ್ರಿಯ ರಾಜಕಾರಣದ ಜತೆ ತಮ್ಮ ವ್ಯಾಪಾರದ ಉದ್ಯಮಗಳನ್ನು ನಿರ್ವಹಿಸುವ ಶಕ್ತಿ ಹೊಂದಿದ್ದರು. ಅವರ ಸೇವೆ ಎಂದಿಗೂ ಸ್ಮರಣೀಯವಾಗಿ ಎಂದು ತಿಳಿಸಿದರು.
ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಕಾಲದಿಂದಲೂ ನಮ್ಮ ಕುಟುಂಬದ ಒಡನಾಡಿಗಳಾಗಿದ್ದ ಶಿವಶಂಕರಪ್ಪ, ಯಾವುದೇ ಪಕ್ಷದ ನಾಯಕರು ದಾವಣಗೆರೆಗೆ ಬಂದಾಗ ಅವರ ಅತಿತ್ಯ ಸತ್ಕಾರ್ಯ ಕೈಗೊಳ್ಳುತ್ತಿದ್ದ ಅಜಾತಶತ್ರು ಆಗಿದ್ದರು ಎಂದು ಸ್ಮರಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಶಿವಶಂಕರಪ್ಪ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಕ್ಷಣ ಕ್ಷಣ ಯೋಚಿಸದೆ ದಿನೇಶ್ ಗುಂಡೂರಾವ್ ಬರುತ್ತೇನೆಂದು ತಿಳಿಸಿ, ಆಗಮಿಸಿ ಹಿರಿಯ ಜೀವಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದರು.
ಮನುಕುಲದ ಮಾನವತವಾದಿ ಶಾಮನೂರು ಶಿವಶಂಕರಪ್ಪ ಜಾತಿ-ಧರ್ಮ ಎನ್ನದೆ ಜಾತ್ಯತೀತ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಶೋಷಿತರ ಧ್ವನಿಯಾಗಿ ಎಲ್ಲ ಬಡ ಜನರ ಪ್ರಗತಿಗೆ ಶ್ರಮಿಸಿದರು. ನೊಂದ ಜನರ ಪಾಲಿಗೆ ಊರುಗೊಲಾಗಿದ್ದರು. ಉಚಿತ ಶಿಕ್ಷಣ, ಆರೋಗ್ಯ ವ್ಯವಸ್ಥೆಗೆ ಮಾದರಿ ಆಗಿದ್ದರು ಎಂದು ತಿಳಿಸಿದರು.
ಸಿ.ಕೆ.ಜಾಪರ್ ಷರೀಫ್ ಸಹಕಾರದಿಂದ ೧೯೭೨ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕು ಶಾಸಕರಾಗಿ ಆಯ್ಕೆಯಾದರು. ಅಂದಿನಿಂದಲೂ ಜೀವಿತಾವಧಿಯವರೆಗೂ ಪಕ್ಷನಿಷ್ಠರಾಗಿಯೇ ಇದ್ದರು. ಅವರು ಬದುಕು ಮಾದರಿ ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾಧ್ಯಕ್ಷ ಎಂ.ಕೆ.ತಾಜಾಪೀರ್, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಗೀತಾನಂದಿನಿಗೌಡ, ಮಾಜಿ ಸದಸ್ಯರಾದ ಇಂದಿರಾಕಿರಣ್, ಎಂ.ಜಿ.ಲೋಹಿತ್ ಕುಮಾರ್, ಗ್ಯಾರಂಟಿ ಜಿಲ್ಲಾಧ್ಯಕ್ಷ ಶಿವಣ್ಣ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಕೆ.ರುದ್ರಪ್ಪ, ಮಾಜಿ ಅಧ್ಯಕ್ಷ ಕೆ.ಎಂ.ಶಿವಕುಮಾರ್, ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕಾಧ್ಯಕ್ಷ ಮಾಳಿಗೆ ಪ್ರಭಾಕರ್, ಭೋವಿ ನಿಗಮದ ಮಾಜಿ ಸದಸ್ಯ ಹನುಮಂತಪ್ಪ ಗೋಡೆಮನೆ ಮಾತನಾಡಿದರು.
ಭವಿಷ್ಯದ ಸಿಎಂ-
ನಾನು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿದ್ದ ವೇಳೆ ದಿನೇಶ್ ಗುಂಡೂರಾವ್ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದೇವು. ಅವರು ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಜೊತೆಗೆ ವಿವಿಧ ಖಾತೆಗಳ ಮಂತ್ರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾಡಿನ ದೂರೆಯಾಗುವ ಭಾಗ್ಯ ಸಿಗಲಿದೆ.
ಹೆಚ್.ಆಂಜನೇಯ, ಮಾಜಿ ಸಚಿವರು.
ಮುಖಂಡ ಬಿ.ಆರ್.ರವಿವರ್ಮ, ಕೆಡಿಪಿ ಸದಸ್ಯರಾದ ಸುರೇಶ್ ಪಾಡಿಗಟ್ಟೆ, ಕಿರಣ್, ಪುಟ್ಟಣ್ಣ, ದೇವೇಂದ್ರಪ್ಪ, ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಸಿ.ರಮೇಶ್, ಜಗದೀಶ್ ನಾಡಿಗ್, ಮಹಡಿ ಶಿವಮೂರ್ತಿ, ಸಾಸಲು ದೇವರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಬೋರೇನಹಳ್ಳಿ, ಮುಖಂಡರಾದ ರಂಗಸ್ವಾಮಿ, ಪವನ್ ಯಾದವ್ ಇದ್ದರು.

