ಚಂದ್ರವಳ್ಳಿ ನ್ಯೂಸ್, ವಿಜಯಪುರ:
ನೀವೇ ಮುಖ್ಯಮಂತ್ರಿಗಳು, ನಿಮ್ಮದೇ ಲೋಕಾಯುಕ್ತ, ನಿಮ್ಮ ಅಧಿಕಾರಿಗಳು ನಿಮ್ಮನ್ನು ಹೇಗೆ ಅಪರಾಧಿ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಲೋಕಾಯುಕ್ತದಿಂದ ಸಿಎಂ ವಿಚಾರಣೆ ವಿಚಾರವಾಗಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 2013ರಲ್ಲಿ ಲೋಕಾಯುಕ್ತ ಬಂದ್ ಮಾಡಿದ್ಯಾಕೆ? ನಿಮ್ಮ ಮೇಲಿನ ಕೇಸ್ ಮುಚ್ಚಿ ಹಾಕುವ ಸಲುವಾಗಿ ಲೋಕಾಯುಕ್ತ ಮುಚ್ಚಿ ಹಾಕಿದ್ದೀರಿ. ಲೋಕಾಯುಕ್ತದಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ವಿಚಾರಣೆ ಮಾಡುವವರು, ಮಾಹಿತಿ ಪಡೆಯುವವರು ಎಲ್ಲರೂ ನಿಮ್ಮ ಅಧಿಕಾರಿಗಳಲ್ಲವೇ.
ಮುಡಾದ ಮಹತ್ವದ ಕೆಲ ಫೈಲ್ಗಳನ್ನು ಸುಡಲಾಗಿದೆ. ಇನ್ನೂ ಕೆಲ ಫೈಲ್ ಗಳನ್ನು ತಿದ್ದುಪಡಿ ಮಾಡಲಾಗಿದೆ. ಮುಡಾದಲ್ಲಿ ಸಾವಿರ ಕೋಟಿ ರೂ. ಅವ್ಯವಹಾರ ಎಂದು ಮಾಹಿತಿ ಇದೆ. ನಿಮ್ಮದೇ ಲೋಕಾಯುಕ್ತ, ನಿಮ್ಮ ಅಧಿಕಾರಿಗಳು ನಿಮ್ಮನ್ನ ಹೇಗೆ ಅಪರಾಧಿ ಮಾಡೋಕಾಗುತ್ತದೆ ಎಂದು ಸಿಎಂ ವಿರುದ್ಧ ಕೇಂದ್ರ ಸಚಿವೆ ವಾಗ್ದಾಳಿ ಮಾಡಿದರು.
ಸಿಎಂ ಸಿದ್ದರಾಮಯ್ಯನವರೇ ಮೊದಲು ರಾಜೀನಾಮೆ ನೀಡಿ, ರಾಜೀನಾಮೆ ಕೊಟ್ಟು ನೀವು ವಿಚಾರಣೆ ಎದುರಿಸಿ, ಅಧಿಕಾರಿಗಳು ಇಡಿ ಎದುರು ಮುಡಾ ಫೈಲ್ ಕಳೆದು ಹೋಗಿದೆ ಎಂದಿದ್ದಾರೆ. ಇನ್ನೂ ಬೈರತಿ ಮೇಲೆ, ಸಿಎಂ, ಸಿಎಂ ಪತ್ನಿ ಮೇಲೆ ಕ್ರಮವಾಗಬೇಕು. ನೀವು ನಿರಾಪರಾಧಿ ಅಲ್ಲ. ರಾಜೀನಾಮೆ ಕೊಡಿ ಎಂದು ಅವರು ಆಗ್ರಹಿಸಿದರು.
ಮುಡಾದಲ್ಲಿ ಸಾವಿರ ಕೋಟಿ ಅವ್ಯವಹಾರ ಆಗಿರುವ ಆರೋಪಗಳು ಕೇಳಿ ಬಂದಿದ್ ಇಡೀ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಅಪರಾಧಿ ಅಲ್ಲ ಎಂದರೆ ಸತ್ಯ ಹೊರಗೆ ಬರುತ್ತದೆ.
ಸಿಬಿಐ ಎದುರು ವಿಚಾರಣೆ ಎದುರಿಸಿ, ಅದು ವಕ್ಫ್ ನೋಟಿಸ್ ಕೊಟ್ಟಂತೆ ಅಲ್ಲಾ. ಡಿಜಿಟಲೀಕರಣಕ್ಕೆ 300 ಕೋಟಿ ರೂ. ಕೊಟ್ಟಿದ್ದು ಸರಿ ಇದೆ. ಆದರೆ ಆ ಹಣವನ್ನು ವಕ್ಫ್ ಆಸ್ತಿ ಮಾರಾಟ ಮಾಡಿ ಪಡೆದುಕೊಂಡಿದ್ದಾರೆ. ವಕ್ಫ್ ಆಸ್ತಿ ಮುಸ್ಲಿಂ ಮುಖಂಡರ ಪಾಲಾಗಿದೆ. ಖರ್ಗೆ ಕುಟುಂಬ, ಹ್ಯಾರಿಸ್, ಜಮೀರ್ ಕುಟುಂಬದ ಹೆಸರಿದೆ. ಇದೆ ಕಾರಣಕ್ಕೆ ಈ ವಿಚಾರಗಳು ಬರುತ್ತಿವೆ. ವಿಜಯಪುರದಲ್ಲಿ ರೈತರಿಗೆ ನೋಟಿಸ್ ಕೊಟ್ಟಂತೆ ದೇಶದೆಲ್ಲೆಡೆ ಕೊಟ್ಟಿದ್ದೀರಿ. ನಿಮ್ಮ ಟ್ರಿಬ್ಯುನಲ್ ಎದುರು ನಾವು ಕೈಕಟ್ಟಿ ನಿಲ್ಲಬೇಕು. 5 ಲಕ್ಷ ಎಕರೆ ಇದ್ದದ್ದು, 9.5 ಲಕ್ಷ ಎಕರೆ ಆಗಿದೆ, ಅದು ಹೇಗೆ? ಯಾವ ಅಲ್ಲಾನ ಭಕ್ತ ದಾನ ಕೊಟ್ಟ ಹೇಳಿ ಎಂದು ಶೋಭಾ ಕರಂದ್ಲಾಜೆ ಖಾರವಾಗಿ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ತಹಶೀಲ್ದಾರ್ ಕಚೇರಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಾಂಗ್ರೆಸ್ ಸರ್ಕಾರದಲ್ಲಿ ಪದೇ ಪದೇ ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿವೆ. ತಮ್ಮ ಸುತ್ತಮುತ್ತ ಕಮೀಷನ್ ಏಜೆಂಟರನ್ನು ಇಟ್ಟುಕೊಂಡಿದ್ದಾರೆ. ಬಹಳ ಜನ ಅಧಿಕಾರಿಗಳು ಬಲಿಯಾಗಿದ್ದಾರೆ.
ಕೆಲವರು ಸಹವಾಸವೇ ಬೇಡ ಎಂದು ಕೆಲಸವನ್ನೇ ಬಿಟ್ಟು ಹೋಗ್ತಿದ್ದಾರೆ. ರಾಜ್ಯದಲ್ಲಿ ತಹಶೀಲ್ದಾರ್ ಕಚೇರಿಗಳು, ಕಮೀಷನ್ ಏಜೆಂಟರ್ ಕಚೇರಿಯಾಗಿವೆ. ನೀವೇ ಕಚೇರಿಗಳನ್ನ ಕಮೀಷನ್ ಕಚೇರಿ ಮಾಡಿದ್ದೀರಿ. ಹೆಬ್ಬಾಳ್ಕರ್ ತಪ್ಪು ಮಾಡಿ ಹೀಗೆ ಹೇಳಿಕೊಳ್ಳುತ್ತಿದ್ದಾರೆ. ಈಗ ನನಗೆ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಪಿಎ ಮಂಪರು ಪರೀಕ್ಷೆ ಆಗಬೇಕು ಎಂದು ಕೇಂದ್ರ ಸಚಿವೆ ಆಗ್ರಹ ಮಾಡಿದರು.