ಅಕ್ರಮ ನುಸುಳುಕೋರರಿಗೆ ಜಮೀರ್ ಸೆಟಲ್ ಮಾಡಿಸಿದ್ದು ಸಮಗ್ರ ತನಿಖೆ ಆಗಲಿ-ಶೋಭಾ ಕರಂದ್ಲಾಜೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಂಗ್ಲಾದಿಂದ ಬಂದಿದ್ದ ಅಕ್ರಮ ನುಸುಳು ಕೋರರನ್ನು ಸಚಿವ ಜಮೀರ್ ಅವರು ಇಲ್ಲಿ ಸೆಟಲ್ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ನುಸುಳುಕೋರರ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕಿದೆ. ಕರ್ನಾಟಕದಲ್ಲಿ ಯಾರ ಸರ್ಕಾರ ಇದೆ, ಯಾರಿಗಾಗಿ ಸರ್ಕಾರ ನಡೀತಿದೆ?. ಈ ಸರ್ಕಾರದ ಬಾರುಕೋಲು, ಮೂಗುದಾರ ಎಲ್ಲಿದೆ?. ವೇಣುಗೋಪಾಲ್ ಮೂಗು ತೂರಿಸಿ, ಏನು ಮಾಡಬೇಕು ಅಂತ ಹೇಳ್ತಾರೆ.

- Advertisement - 

ವೇಣುಗೋಪಾಲ್ ರಾಜ್ಯದವರೇ ಆದ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸರ್ಕಾರ ಏನು ಮಾಡಬೇಕು ಅಂತ ಹೇಳ್ತಾರೆ ಎಂದು ಸಚಿವರು ಕಿಡಿಕಾರಿದರು. ನೋಟಿಸ್ ಕೊಟ್ಟು ಅಕ್ರಮ ಮನೆಗಳನ್ನು ತೆರವು ಮಾಡಿದ್ದು ಒಳ್ಳೇ ಕೆಲಸ. ಯಾರೋ ಅಕ್ರಮ ವಲಸಿಗರು ಬಂದು ಶೆಡ್ ಹಾಕ್ಕೊಂಡಿದ್ರು. ಸರ್ಕಾರ ಕಾನೂನು ಬದ್ಧವಾಗಿ ತೆರವು ಮಾಡಿದೆ. ಆದ್ರೆ ಇದನ್ನು ವೇಣುಗೋಪಾಲ್, ಪಿಣರಾಯಿ ಪ್ರಶ್ನೆ ಮಾಡ್ತಾರೆ. ಹೀಗಾದ್ರೆ ಹೇಗೆ ಸರ್ಕಾರ ನಡೆಸೋದು ಎಂದು ಶೋಭಾ ಕರಂದ್ಲಾಜೆ ತೀಕ್ಷ್ಣವಾಗಿ ಪ್ರಶ್ನಿಸಿದರು.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ತೀರ್ಮಾನ ಏನು ಮಾಡಬೇಕು ಅಂತ ಇಂಡಿ ಕೂಟದ ಯುಡಿಎಫ್, ಎಲ್‌ಡಿಎಫ್​ನವರು ಹೇಳ್ತಾರೆ. ನಾನು ಹೆಬ್ಬಾಳ ಸಮೀಪ ಅಕ್ರಮ ವಲಸಿಗರ ಸ್ಥಳಕ್ಕೆ ಹೋಗಿದ್ದೆ. ಹೆಬ್ಬಾಳದ ಅಮೀನ್ ಕೆರೆಯ ಜಾಗದಲ್ಲಿ ಬಾಂಗ್ಲಾದಿಂದ ಬಂದವರು ವಾಸ ಇದ್ದಾರೆ. ನಾನು ಸರ್ಕಾರಕ್ಕೆ, ಪೊಲೀಸರಿಗೆ ಪತ್ರ ಬರೆದಿದ್ದೆ. ಸಿಎಂ, ಡಿಸಿಎಂ ಬಹಳ ದಿನಗಳಿಂದ ಒಟ್ಟಿಗೆ ಇಲ್ಲ.

- Advertisement - 

ಆದ್ರೆ ಕೋಗಿಲು ಲೇಔಟ್ ಅಕ್ರಮ‌ವಲಸಿಗರ ಬಗ್ಗೆ ಒಟ್ಟಿಗೆ ಕುಳಿತು ಸಭೆ ಮಾಡ್ತಾರೆ. ಹೈಕಮಾಂಡ್ ಓಲೈಕೆಗೆ, ಕುರ್ಚಿ ಉಳಿಸಿಕೊಳ್ಳಲು ಒಟ್ಟಿಗೆ ಸಭೆ ಮಾಡಿದ್ದಾರೆ. ಅಕ್ರಮ ವಲಸಿಗರಿಗೆ ಯಾಕೆ ಪುನರ್ವಸತಿ?. ಉತ್ತರ ಕರ್ನಾಟಕದಿಂದ ಹಲವರು ಬಂದು ಶೆಡ್ ಹಾಕ್ಕೊಂಡಿದ್ದಾರೆ, ಅವರಿಗೆ ಯಾಕೆ ಪುನರ್ವಸತಿ ಕೊಡಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಹಲವು ಕನ್ನಡಿಗರು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಬಂದು ಬೆಂಗಳೂರಿನಲ್ಲಿ ಕಷ್ಟದಲ್ಲಿದ್ದಾರೆ. ಇವರಿಗೆ ಇಲ್ಲ ಸೌಲಭ್ಯ ಅಕ್ರಮ ವಲಸಿಗರಿಗೆ ಪುನರ್ವಸತಿ ಕಲ್ಪಿಸುತ್ತಾರೆ. ಅಕ್ರಮವಾಗಿ ವಲಸೆ ಬಂದವರಿಗೆ ಕರ್ನಾಟಕದಲ್ಲಿ ಮನೆಗಳು ಸಿಗ್ತವೆ ಅನ್ನೋ ಸಂದೇಶ ಹೋಗಿದೆ. ಹತ್ತಾರು ವರ್ಷಗಳಿಂದ ಇರುವ ಕನ್ನಡಿಗರಿಗೆ ಯಾಕೆ ಕೊಟ್ಟಿಲ್ಲ? ಎಂದು ಕೇಂದ್ರ ಸಚಿವರು ವಾಗ್ದಾಳಿ ಮಾಡಿದರು.

ಜಮೀರ್ ಅವರೇ ಎಷ್ಟು ಜನ ಅಕ್ರಮ ವಲಸಿಗರಿಗೆ ಆಧಾರ್ ಕೊಟ್ಟಿದ್ದೀರಿ, ಎಷ್ಟು ಜನಕ್ಕೆ ವೋಟರ್ ಕಾರ್ಡ್ ಕೊಟ್ಟಿದ್ದೀರಿ ಹೇಳಿ, ಈಗ ಎಷ್ಟು ಜನಕ್ಕೆ ಮನೆ ಕೊಡ್ತಿದ್ದೀರಿ?. ಬೆಂಗಳೂರು, ಕರ್ನಾಟಕದ ಭೌಗೋಳಿಕತೆಯನ್ನೇ ಬದಲಾಯಿಸಲು ಹೊರಟಿದ್ದಾರೆ ಇವರು. ಜಮೀರ್ ಖಾನ್ ಅವರ ನ್ಯಾಷನಲ್ ಬಸ್​​ನಲ್ಲಿ ಎಷ್ಟು ಮಕ್ಕಳನ್ನು ರೈಲ್ವೆ ನಿಲ್ದಾಣದಿಂದ ಕರೆದೊಯ್ದು ಬೆಂಗಳೂರಿನಲ್ಲಿ ಸೆಟಲ್ ಮಾಡಿಸಿದ್ದಾರೆ?. ಇದರ ಬಗ್ಗೆ ಜಮೀರ್ ಸ್ಪಷ್ಟನೆ ಕೊಡಬೇಕು, ಇದರ ತನಿಖೆ ಆಗಬೇಕು. ಕರ್ನಾಟಕದಲ್ಲಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಡೀತಿದೆ? ತುಷ್ಟೀಕರಣ ನಡೀತಿದೆ.

ಕರ್ನಾಟಕ, ಬೆಂಗಳೂರಿನಲ್ಲಿ ಅಕ್ರಮ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಸರ್ಕಾರಿ‌ಮನೆ ಕೊಟ್ರೆ ಏನಾಗುತ್ತೆ ಗೊತ್ತಲ್ಲ. ಅವರನ್ನು ಸರ್ಕಾರವೇ ಇಲ್ಲಿ ಪರ್ಮನೆಂಟ್ ಮಾಡ್ತಿದೆಯಾ?. ಅಕ್ರಮ ವಲಸಿಗರ ಎಲ್ಲ ದಾಖಲೆ ವಶಕ್ಕೆ ಪಡೆಯಬೇಕು. ಪಶ್ಚಿಮ ಬಂಗಾಳಕ್ಕೆ ಹೋಗಿ ನಮ್ಮ ಪೊಲೀಸರು ತನಿಖೆ ಮಾಡಲಿ ಎಂದು ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದರು.

ಕರ್ನಾಟಕವನ್ನು ಮತ್ತೊಂದು ಪಶ್ಚಿಮ ಬಂಗಾಳ‌ಮಾಡಬೇಡಿ. ಈ‌ಜನರ ಹಿನ್ನೆಲೆ ಹುಡುಕಿ ಪಶ್ಚಿಮ ಬಂಗಾಳಕ್ಕೆ ಹೋಗಲಿ. ಅವರು ಎಲ್ಲಿಂದ ಬಂದವರು ಅಂತ ಗೊತ್ತಾಗುತ್ತದೆ. ಇದನ್ನು ಹೀಗೇ ಬಿಡಬೇಡಿ. ಪಶ್ಚಿಮ ಬಂಗಾಳದಲ್ಲಿ ಡೆಮೋಗ್ರಫಿ ಬದಲಾಗಿ ಕೊಲೆ, ಅತ್ಯಾಚಾರ ನಡೀತಿದೆ. ನಿಮ್ಮ ವೋಟ್ ಪಾಲಿಟಿಕ್ಸ್​ಗೆ ಕರ್ನಾಟಕ ಬಲಿ ಕೊಡಬೇಡಿ‌ಎಂದು ಅವರು ಆಗ್ರಹಿಸಿದರು.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಹತ್ತು ವರ್ಷದ ಹಿಂದೆ ಗುಂಪೊಂದು ಬಂದಿತ್ತು. ಇದನ್ನು ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆಗೆ ಮುಂದಾದ್ರು. ಅವರನ್ನು ಜಮೀರ್ ಅವರ ನ್ಯಾಷನಲ್ ಬಸ್​ನಲ್ಲಿ ಕರೆದೊಯ್ದರು. ಹತ್ತು ಇಪ್ಪತ್ತು ವರ್ಷಗಳ‌ಹಿಂದೆಯೇ ಆ ಜಾಗವನ್ನು ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಕೊಡಲಾಗಿತ್ತು. ಆಗ ಸ್ಯಾಟಲೈಟ್ ಇಮೇಜ್ ಹೇಗಿತ್ತು ಪರಿಶೀಲಿಸಲಿ.‌ಇವರಲ್ಲಿ ಎಲ್ಲ ಧರ್ಮದವರೂ ಇರಬಹುದು ಎಂದು ಕೇಂದ್ರ ಸಚಿವೆ ಟೀಕಿಸಿದರು.

ಕೋಗಿಲು ಲೇಔಟ್​​ನಲ್ಲಿದ್ದವರ ಪೈಕಿ ಅರ್ಧ ಜನ ಹೆದರಿ ಹೋಗಿದ್ದಾರೆ ಅನ್ನೋ ಮಾಹಿತಿ ಇದೆ. ಹೋದವರು ಎಲ್ಲಿಗೆ ಹೋದರು ಅನ್ನೋದು ಪರಿಶೀಲನೆ ಆಗಬೇಕು. ಉಳಿದವರು ಯಾರು? ಎನ್‌ಜಿಒದವರು ಯಾಕೆ ಅಲ್ಲಿಗೆ ಬಂದಿದ್ದಾರೆ, ಅವರು ಯಾರು ಅನ್ನೋದು ಗೊತ್ತಾಗಬೇಕು. ಒತ್ತಡದ ರಾಜಕಾರಣ ಮತ್ತು ತುಷ್ಟೀಕರಣದ ರಾಜಕಾರಣ ನಡೀತಿದೆ. ಅಲ್ಲಿನ ಅಲ್ಪಸಂಖ್ಯಾತರ ವೋಟ್ ಯಾರು ಹೆಚ್ಚು ಪಡ್ಕೋತಾರೋ ಅವರು ಗೆಲ್ತಾರೆ ಅಂತ ಅವರ ಮನಸಿಗೆ ಬಂದಿದೆ. ಹಾಗಾಗಿ‌ಈ ವಿಚಾರ ಎತ್ಕೊಂಡಿದ್ದಾರೆ. ಕರ್ನಾಟಕದಲ್ಲೂ ಎಸ್ಐಆರ್ ಬರಬೇಕು.‌ಎಸ್ಐಆರ್ ಬಂದರೆ ಯಾರು ಇಲ್ಲಿಯವರು, ಯಾರು ಅಕ್ರಮ ವಲಸಿಗರು ಅಂತ ಗೊತ್ತಾಗುತ್ತದೆ. ಯಾರು ತಪ್ಪು ಮಾಡಿದ್ರೂ ತಪ್ಪೇ ಎಂದು ಶೋಭಾ ಅವರು ಅಭಿಪ್ರಾಯಪಟ್ಟರು.

ಕೋಗಿಲು ಅಕ್ರಮ ಮನೆಗಳ ತೆರವಿಗೆ ಪಾಕಿಸ್ತಾನ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪಾಕ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಖಂಡಿಸಿದರು. ಬೆಂಗಳೂರಿನಲ್ಲಿ ಯಾರಿಗೆ ಮನೆ ಕೊಡಬೇಕು ಯಾರಿಗೆ ಕೊಡಬಾರದು ಅಂತ ಪಾಕಿಸ್ತಾನ ನಿರ್ಧಾರ ಮಾಡೋದಲ್ಲ. ಪಾಕ್ ವಿದೇಶಾಂಗ ಇಲಾಖೆಯ ತಾಹೀರ್​ಗೂ ಇಲ್ಲಿನ ಅಕ್ರಮ ನಿವಾಸಿಗಳಿಗೂ, ತೆರವು ವಿಚಾರಕ್ಕೂ ಏನು ಸಂಬಂಧ?. ಹಾಗಾದ್ರೆ ಈ ಅಕ್ರಮ ನಿವಾಸಿಗಳನ್ನು ಪಾಕಿಸ್ತಾನದವರು ಕರೆದೊಯ್ಯಲಿ. ಬಾಂಗ್ಲಾ, ಪಾಕ್​ನಿಂದ ಇಲ್ಲಿ ಬಂದು ಅವರೆಲ್ಲ ನೆಲೆಸಿದ್ದಾರೆ. ಇವರನ್ನು ತಕ್ಷಣ ಹೊರಗೆ ಹಾಕಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಹಿತಿ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ರಾಜ್ಯಸಭಾ ಸದಸ್ಯ ಲಹರ್ ಸಿಂಗ್  ಸೇರಿದಂತೆ ಮತ್ತಿತರರು ಇದ್ದರು.

 

Share This Article
error: Content is protected !!
";