ಆಧಾರ್ ಹೊಂದಿರುವ ಒಳನುಸುಳುಕೋರರನ್ನೂ ಮತದಾರರೆಂದು ಪರಿಗಣಿಸಬೇಕೆ?

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶದೊಳಗೆ ನುಸುಳಿ ಆಧಾರ್ ಕಾರ್ಡ್ ಹೊಂದಿರುವ ಒಳ ನುಸುಳುಕೋರರನ್ನೂ ಮತದಾರರೆಂದು ಪರಿಗಣಿಸಬೇಕೆ? ಎಂದು ಸುಪ್ರೀಂಕೋರ್ಟ್ ತೀಕ್ಷ್ಣವಾಗಿ​ ಪ್ರಶ್ನಿಸಿದೆ.

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ವಿರುದ್ಧವಾಗಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್​ ಅಂಗಳದಲ್ಲಿವೆ. ಅದನ್ನು ಸಮರ್ಥಿಸಿಕೊಂಡಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಎಲ್ಲರ ಬಳಿ ಆಧಾರ್ ಕಾರ್ಡ್​ ಇದೆಯಲ್ಲಾ ಅದರಲ್ಲೇ ಜನ್ಮ ದಿನಾಂಕ ಎಲ್ಲವೂ ಇರಲಿದೆ, 18 ವರ್ಷ ಮೇಲ್ಪಟ್ಟವರು ಅಲ್ಲವೋ ಹೌದೋ ಎಂದು ಪರಿಗಣಿಸಲು ಅಷ್ಟು ಸಾಕಲ್ಲವೇ ಎನ್ನುವ ಪ್ರಶ್ನೆಗೆ ಪೀಠವು ಮೇಲಿನಂತೆ ಪ್ರಶ್ನಿಸಿದೆ.
ದೇಶದ ಪ್ರಜೆಯಲ್ಲದವರ ಬಳಿಯೂ ಆಧಾರ್ ಕಾರ್ಡ್ ಇದ್ದು ಅವರನ್ನೂ ಮತದಾರರೆಂದು ಪರಿಗಣಿಸಬೇಕೆ ಎಂದು ಪೀಠವು ಪ್ರಶ್ನೆ ಕೇಳಿದೆ.

- Advertisement - 

ಇತರೆ ದೇಶದಿಂದ ಒಳನುಸುಳುವ ವ್ಯಕ್ತಿಗಳು ಇದ್ದಾರೆ. ನೆರೆಯ ದೇಶಗಳಿಂದ ಭಾರತಕ್ಕೆ ಬರುತ್ತಾರೆ, ಅವರು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ, ಭಾರತದಲ್ಲಿಯೇ ವಾಸಿಸುತ್ತಿದ್ದಾರೆ. ರಿಕ್ಷಾ ಚಲಾಯಿಸುವವರಿದ್ದಾರೆ, ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿದ್ದಾರೆ.

ನೀವು ಅವರಿಗೆ ಆಧಾರ್ ಕಾರ್ಡ್ ನೀಡಿದರೆ ಅವರು ಸಬ್ಸಿಡಿ ಪಡಿತರ ಅಥವಾ ಯಾವುದೇ ಪ್ರಯೋಜನವನ್ನು ಪಡೆಯಬಹುದು, ಅದು ನಮ್ಮ ಸಾಂವಿಧಾನಿಕ ನೀತಿಯ ಭಾಗವಾಗಿದೆ. ಅದು ನಮ್ಮ ಸಾಂವಿಧಾನಿಕ ನೈತಿಕತೆ. ಆದರೆ ಅವರನ್ನು ಮತದಾರರನ್ನಾಗಿ ಮಾಡಬೇಕೆ?. ಸತ್ತ ಮತದಾರರನ್ನು ತೆಗೆದುಹಾಕುವ ಅಗತ್ಯವನ್ನು ನ್ಯಾಯಮೂರ್ತಿ ಬಾಗ್ಚಿ ಒತ್ತಿ ಹೇಳಿದರು. ಪಟ್ಟಿಗಳನ್ನು ಪಂಚಾಯತ್‌ಗಳಲ್ಲಿ ಮತ್ತು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ ಎಂದು ಹೇಳಿದರು.

- Advertisement - 

ದೇಶದ ಹನ್ನೆರಡು ರಾಜ್ಯಗಳಲ್ಲಿ ಬುಧವಾರದಿಂದ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಗ್ಗೆ ಸುಪ್ರೀಂನಲ್ಲಿ ವಿರೋಧ ಪಕ್ಷಗಳು ಭಾರಿ ಹಿನ್ನಡೆ ಅನುಭವಿಸಿವೆ.

‘‘ಎಸ್​ಐಆರ್ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ, ಅಗತ್ಯವಿದ್ದರೆ ನಾವು ನ್ಯೂನತೆಗಳನ್ನು ಸರಿಪಡಿಸುತ್ತೇವೆ’’ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಅಧಿಕಾರವನ್ನು ಅದು ಹೊಂದಿದೆ. ಯಾರೂ ಅದನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಯಾವುದೇ ಸಮಸ್ಯೆಗಳು ಅದರಲ್ಲಿ ಕಂಡು ಬಂದರೆ ನಾವು ಅದನ್ನು ನಿವಾರಿಸುತ್ತೇವೆ ಎಂದು ಪೀಠ ಹೇಳಿದೆ.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿದಾರರ ಪರವಾಗಿ ಚರ್ಚೆ ಆರಂಭಿಸಿ, ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದರು. ಇದಕ್ಕೆ ಪೀಠವು, ಚುನಾವಣಾ ಆಯೋಗವು ಯಾವುದೇ ಪ್ರಶ್ನೆಗಳನ್ನು ಕೇಳದೆ ಫಾರ್ಮ್ 6 ಅನ್ನು ಸ್ವೀಕರಿಸುವ ಅಂಚೆ ಕಚೇರಿಯಲ್ಲ ಎಂದು ಹೇಳಿದೆ. ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಲು ಆಯೋಗವು ಯಾವಾಗಲೂ ಶಾಸನಬದ್ಧ ಅಧಿಕಾರ ಹೊಂದಿರುತ್ತದೆ.

ಈ ಬಾರಿ ನಡೆಯುತ್ತಿರುವ ಘಟನೆಗಳು ದೇಶದಲ್ಲಿ ಹಿಂದೆಂದೂ ನಡೆದಿಲ್ಲ ಎಂದು ಸಿಬಲ್ ಹೇಳಿದರು. ಇದು ಹಿಂದೆಂದೂ ಸಂಭವಿಸಿಲ್ಲ ಎಂಬ ಅಂಶವು ಪ್ರಕ್ರಿಯೆಯ ಸಿಂಧುತ್ವವನ್ನು ನಿರ್ಧರಿಸುವ ಮಾನದಂಡವಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

 

 

 

Share This Article
error: Content is protected !!
";