ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗೃಹೋಪಯೋಗಿ ವಸ್ತುಗಳು ಹಾಗೂ ಪೀಠೋಪಕರಣಗಳ ಸಾಗಾಣಿಕೆಗೆ ಗ್ರಾಹಕ ಓರ್ವರಿಂದ ರೂ.14,000 ಹಣ ಪಡೆದು ಸಾಗಾಣಿಕೆ ವೇಳೆ ನಿರ್ಲಕ್ಷ್ಯ ವಹಿಸಿ, ಬೆಲೆಬಾಳುವ ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿ ಮಾಡಿ, ಗ್ರಾಹಕರಿಗೆ ನಷ್ಟ ಪರಿಹಾರ ನೀಡಿದ ದಾವಣಗೆರೆ ಮೂಲದ ಶ್ರೀರಾಮ್ ಪ್ಯಾಕರ್ಸ್ ಆಂಡ್ ಮೂವರ್ಸ್ ಸಂಸ್ಥೆಗೆ ರೂ.1 ಲಕ್ಷ ದಂಡ ವಿಧಿಸಿ ಚಿತ್ರದುರ್ಗ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.
2024ರ ಅಕ್ಟೋಬರ್ 20ರಂದು ಗ್ರಾಹಕರ ಗೃಹೋಪಯೋಗಿ ವಸ್ತುಗಳನ್ನು ಚಿತ್ರದುರ್ಗದಿಂದ ದಾವಣಗೆರೆ ನಿವಾಸಕ್ಕೆ ಸಾಗಿಸುವ ವೇಳೆ ಶ್ರೀರಾಮ್ ಪ್ಯಾಕರ್ಸ್ ಆಂಡ್ ಮೂವರ್ಸ್ ಸಂಸ್ಥೆ ನಿರ್ಲಕ್ಷ ತೋರಿ ಪೀಠೋಪಕರಣಗಳಿಗೆ ಹಾನಿ ಉಂಟುಮಾಡಿತ್ತು. ಸಂಸ್ಥೆ ಉಂಟುಮಾಡಿದ ಸೇವಾ ನ್ಯೂನ್ಯತೆಗೆ ಪರಿಹಾರ ಕೋರಿ ನೊಂದ ಗ್ರಾಹಕರು 2025ರ ಏಪ್ರಿಲ್ 8 ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಹೆಚ್.ಎನ್.ಮೀನಾ ಮತ್ತು ಸದಸ್ಯೆ ಬಿ.ಹೆಚ್.ಯಶೋಧ ಅವರು, ಶ್ರೀರಾಮ್ ಪ್ಯಾಕರ್ಸ್ ಆಂಡ್ ಮೂವರ್ಸ್ ಸಂಸ್ಥೆಗೆ 30 ದಿನಗಳ ಒಳಗಾಗಿ ರೂ.1 ಲಕ್ಷ ಪರಿಹಾರವನ್ನು ಶೇ.9 ರಷ್ಟು ಬಡ್ಡಿಯೊಂದಿಗೆ ಗ್ರಾಹಕರಿಗೆ ನೀಡಬೇಕು.
ಸೇವಾ ನ್ಯೂನ್ಯತೆ ಮಾನಸಿಕ ಹಾಗೂ ದೈಹಿಕ ಹಿಂಸಿಗೆ ದಂಡರೂಪವಾಗಿ ರೂ.15,000 ಪಾವತಿಸುವಂತೆ ಆದೇಶಿಸಿದೆ.

