ಸ್ವಾರ್ಥ ಹಾಗೂ ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ
, ಮೂಲ ಕಾಂಗ್ರೆಸಿಗರಲ್ಲದ ನೀವು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ರಾಜಕಾರಣದ ಹಿನ್ನೆಲೆಯಿಂದ ಬಂದವರು. ಕಾಂಗ್ರೆಸ್ ಪಕ್ಷದ ಪರ ತಾವು ಸಮರ್ಥನೆಗೆ ನಿಂತಿರುವುದು ಸ್ವಾತಂತ್ರ್ಯ ಚಳವಳಿಯ ಸಾರ್ಥಕತೆ ಸಾರಲು, ಪ್ರಜಾಪ್ರಭುತ್ವವನ್ನು ಪುನಃ ಪ್ರತಿಷ್ಠಾಪಿಸಲು 70ರ ದಶಕದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ ಹಲವಾರು ಮಹನೀಯರನ್ನು ಅವಮಾನಿಸಿದಂತೆ, ಸ್ವಾರ್ಥ ಹಾಗೂ ಅಧಿಕಾರ ರಾಜಕಾರಣಕ್ಕಾಗಿ ಕಾಂಗ್ರೆಸ್ ಸೇರಿರುವ ನೀವು ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ಮಾಡಿದರು. 

ಬ್ರಿಟಿಷ್ ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಿದ ಸ್ವಾತಂತ್ರ್ಯ ಸಂಗ್ರಾಮವನ್ನು ಇಂದಿಗೂ ಅಪಮಾನಿಸುತ್ತಿರುವ ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್ ನೆರಳಿನಲ್ಲಿ ನಿಂತು ಮಾತನಾಡುತ್ತಿರುವ ನಿಮಗೆ @RSSorg ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾತನಾಡುವ ಯಾವ ಅರ್ಹತೆಯೂ ನಿಮಗಿಲ್ಲ ಎಂದು ವಿಜಯೇಂದ್ರ ತರಾಟೆ ತೆಗೆದುಕೊಂಡರು.

- Advertisement - 

ಸ್ವಾತಂತ್ರ್ಯೋತ್ಸವದ ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಧನೆಯನ್ನು ಉಲ್ಲೇಖಿಸಿದ್ದು ಸಂವಿಧಾನದ ಅಪಚಾರ ಎಂದು ಹೇಳಿರುವ ಸಿದ್ದರಾಮಯ್ಯನವರೇ ತುರ್ತು ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಅನುಮಾನಿಸಿ, ಸಂವಿಧಾನದ ಆಶಯವನ್ನು ಗಾಳಿ ತೂರಿ, ಪ್ರಜಾಪ್ರಭುತ್ವದ ಕತ್ತು ಹಿಸುಕಿ, ಸರ್ವಾಧಿಕಾರತನ ಮೆರೆದ ಕಾಂಗ್ರೆಸ್ ಪಕ್ಷವೇ ರಾಷ್ಟ್ರ ರಾಜಕೀಯದಲ್ಲಿ ಒಂದು ಬಹುದೊಡ್ಡ ಕಪ್ಪು ಚುಕ್ಕೆಯಾಗಿದೆ. 

ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಜಕೀಯ ಪಕ್ಷವಲ್ಲ, ರಾಷ್ಟ್ರ ನಿರ್ಮಾಣಕ್ಕಾಗಿ ಜನ್ಮತಾಳಿ ಶತಮಾನ ಕಂಡ ವಿಶ್ವದ ಅತಿದೊಡ್ಡ ರಾಜಕೀಯೇತರ ಸಂಘಟನೆಯಾಗಿ ಸೇವೆ, ಸಮಾನತೆಯ ತತ್ವವನ್ನು ಅಳವಡಿಸಿಕೊಂಡು ದೇಶ ಕಟ್ಟುತ್ತಿರುವ ರಾಷ್ಟ್ರಭಕ್ತ ಸಂಘಟನೆ.

- Advertisement - 

ಜಾತಿರಹಿತ ಸಮಾಜಕಟ್ಟುವ ಸಂಘದ ತ್ಯಾಗ, ಸಮರ್ಪಣೆಯ ಅಸಂಖ್ಯಾತ ಕಾರ್ಯಕರ್ತರ ಕ್ರಿಯಾಶೀಲತೆಯನ್ನು ಕಂಡು ಮಹಾತ್ಮ ಗಾಂಧೀಜಿ ಅವರು ಪ್ರಶಂಶಿಸಿದ ಉಲ್ಲೇಖ ಇತಿಹಾಸದ ಪುಟದಲ್ಲಿದೆ‘. ಚೀನಾ ಯುದ್ಧದ ಸಂದರ್ಭದಲ್ಲಿ ದೇಶ ರಕ್ಷಣೆಗೆ ನಿಂತ ವೀರ ಯೋಧರ ಸೇವೆಗಾಗಿ ಸಮರೋಪಾದಿಯಲ್ಲಿ ತನ್ನನು ತೊಡಗಿಸಿಕೊಂಡ ಹೆಮ್ಮೆಯ ಸಂಘಟನೆ, ಈ ಹಿನ್ನಲೆಯಲ್ಲಿಯೇ ಅಂದಿನ ಪ್ರಧಾನಿ ನೆಹರು ಅವರು ಆರ್.ಎಸ್.ಎಸ್ ಸೇವೆಯನ್ನು ಇಡೀ ದೇಶವೇ ಗುರುತಿಸಲಿ ಎಂಬ ಪ್ರಶಂಸೆಯ ಸಂಕೇತವಾಗಿ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಸಂಘವನ್ನು ಭಾಗವಹಿಸಲು ಆಹ್ವಾನಿಸಿದ್ದರು ಎಂದು ಅವರು ತಿಳಿಸಿದರು. 

ಉದಾತ್ತ ಉದ್ದೇಶ, ಧ್ಯೇಯ, ಗುರಿಗಳನ್ನು ಇರಿಸಿಕೊಂಡು ದೇಶದ ಗಡಿಯಾಚೆಗೂ ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸಿ ಭಾರತೀಯತೆಯನ್ನು ಪ್ರತಿನಿಧಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಧನೆ ಹಾಗೂ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಸ್ವಾತಂತ್ರ್ಯ ಚಳುವಳಿಯ ಉದ್ದೇಶವನ್ನು ಸಾರ್ಥಕಗೊಳಿಸಿ ಮುನ್ನಡೆಯುತ್ತಿರುವುದನ್ನು ಪ್ರಶಂಸಿಸಿರುವುದು ಸಮಯೋಚಿತವಾಗಿದೆಯಲ್ಲದೇ ಶತ ಕೋಟಿ ಭಾರತೀಯರ ಭಾವನೆಯ ಸಂಕೇತವಾಗಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕೆ ಇಷ್ಟೊಂದು ವಿಚಲಿತರಾಗಿದ್ದಾರೆ ಎಂಬುದು ಆಶ್ಚರ್ಯ ತಂದಿದೆ ಎಂದು ತೀಕ್ಷ್ಣವಾಗಿ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಸ್ವಾತಂತ್ರ್ಯ ಚಳುವಳಿಯನ್ನು ದೇಶಾದ್ಯಂತ ಪಸರಿಸುವ ಘನ ಉದ್ದೇಶದಿಂದ ಅಂದು ಚಳುವಳಿಯನ್ನು ಕಾಂಗ್ರೆಸ್ ಹೆಸರಿನಲ್ಲಿ ಸಂಘಟಿಸಲಾಯಿತು, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಹೆಸರು ವಿಸರ್ಜಿಸಬೇಕು ಅದನ್ನು ರಾಜಕೀಯ ಪಕ್ಷವಾಗಿ ಬಳಸಿಕೊಳ್ಳಬಾರದು ಎಂಬುದನ್ನು ಸ್ವತಃ ಮಹಾತ್ಮ ಗಾಂಧಿಯವರೂ ಸೇರಿದಂತೆ ಅನೇಕ ಸ್ವಾತಂತ್ರ್ಯ ಸೇನಾನಿಗಳು ಸೂಚಿಸಿದ್ದರು. ಇದನ್ನು ಧಿಕ್ಕರಿಸಿ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಅನ್ನು ಉಳಿಸಿಕೊಂಡು ಇವತ್ತಿಗೂ ಒಂದೇ ಕುಟುಂಬ ಅದನ್ನು ಕಪಿಮುಷ್ಠಿಯಲ್ಲಿ ಇರಿಸಿಕೊಂಡು, ದೇಶದ ಹಿತಾಸಕ್ತಿಯ ವಿರುದ್ಧದ ರಾಜಕೀಯ ನಡೆ-ನುಡಿಯನ್ನು ಪ್ರದರ್ಶಿಸುತ್ತಿರುವುದು ರಾಷ್ಟ್ರದ ಜನತೆಗೆ ತಿಳಿದಿದೆ, ಈ ಕಾರಣದಿಂದಲೇ ಸದ್ಯ ಭಾರತೀಯ ಕಾಂಗ್ರೆಸ್ ಪಕ್ಷವು ರಾಜಕೀಯ ಭೂಪಟದಲ್ಲಿ ಕುಬ್ಜ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಈ ದೇಶದಲ್ಲಿ ಲಕ್ಷಾಂತರ ಜನರ ತ್ಯಾಗ ಹೋರಾಟದ ಫಲವಾಗಿ ಭಾರತ ಗಳಿಸಿಕೊಂಡ ಸ್ವಾತಂತ್ರ್ಯವನ್ನು ದೇಶದ ಅಭಿವೃದ್ಧಿಗೆ, ಭಾರತದ ಸುರಕ್ಷತೆಗೆ ಕಾಂಗ್ರೆಸ್ ಎಂದೂ ಬಳಸಿಕೊಳ್ಳಲಿಲ್ಲ. ತನ್ನ ಆಡಳಿತ ಕಾಲದಲ್ಲಿ ದೇಶದಲ್ಲಿ ಭಯೋತ್ಪಾದಕ ಶಕ್ತಿಗಳು ತಲೆ ಎತ್ತಲು,ಭ್ರಷ್ಟಾಚಾರದ ಹಗರಣಗಳು ಈ ದೇಶವನ್ನು ಕಿತ್ತು ತಿನ್ನುವ ಪರಿಸ್ಥಿತಿಗೆ ತಳ್ಳಿದ್ದು ಕಾಂಗ್ರೆಸ್ ಕೊಡುಗೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.

 

 

 

Share This Article
error: Content is protected !!
";