ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಯಂ ಘೋಷಿತ ‘ದಲಿತರ ಚಾಂಪಿಯನ್‘ ಸಿಎಂ ಸಿದ್ದರಾಮಯ್ಯನವರೇ, ಅಹಿಂದ ಮತಗಳ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿಸುತ್ತಿರುವ ತಾವು ಪರಿಶಿಷ್ಟ ಸಮುದಾಯಗಳಿಗೆ ಈ ಪರಿ ದ್ರೋಹ ಮಾಡುತ್ತಿದ್ದೀರಲ್ಲ, ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದೆಯೇ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
2024-25 ರ ಆರ್ಥಿಕ ವರ್ಷ ಮುಗಿದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯ 9,219.36 ಕೋಟಿ ರೂಪಾಯಿ ವಿವಿಧ ಇಲಾಖೆಗಳಲ್ಲಿ ಇನ್ನೂ ಬಳಕೆಯಾಗದೆ ಉಳಿದಿದೆಯಲ್ಲ, ನಿಮ್ಮ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ? ಎಂದು ಕಟು ಶಬ್ದಗಳಲ್ಲಿ ಅಶೋಕ್ ಟೀಕಿಸಿದ್ದಾರೆ.
ರಾಜಕೀಯ ವೇದಿಕೆಗಳಲ್ಲಿ, ಸದನದಲ್ಲಿ, ಭಾಷಣಗಳಲ್ಲಿ, ದಲಿತರು, ಹಿಂದುಳಿದವರ ಉದ್ಧಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿದರೆ ತಳಸಮುದಾಯಗಳ ಕಲ್ಯಾಣ ಆಗುವುದಿಲ್ಲ ಸಿದ್ದರಾಮಯ್ಯನವರೇ. ಅಧಿಕಾರ ಇದ್ದಾಗ ಪ್ರಾಮಾಣಿಕತೆಯಿಂದ ಪರಿಶಿಷ್ಟ ಸಮುದಾಯಗಳ ಏಳ್ಗೆ ಬಗ್ಗೆ ಬದ್ಧ ತೋರದೆ, ಮೊಸಳೆ ಕಣ್ಣೀರು ಸುರಿಸುವ ನಿಮ್ಮ ಬೂಟಾಟಿಕೆ ಈಗ ಬಯಲಾಗಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.