ಭಾರತದ ಸಿರಿ ಕಿರೀಟ ಕಾಶ್ಮೀರವನ್ನು ಅಸ್ಥಿರಗೊಳಿಸಿದ್ದು ಯಾರು?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
 ಸಚಿವ ಸಂತೋಷ್ ಲಾಡ್ ಅವರೇ ಭಾರತದ ಸಿರಿ ಕಿರೀಟ ಕಾಶ್ಮೀರವನ್ನು ಅಸ್ಥಿರಗೊಳಿಸಿದ್ದು ಯಾರು? ರಕ್ಷಣೆ ಇಲ್ಲದ ಅಸಹಾಯಕ ಪರಿಸ್ಥಿತಿಯಲ್ಲಿ ಲಕ್ಷಾಂತರ ಮೂಲ ನಿವಾಸಿ ಕಾಶ್ಮೀರಿ ಪಂಡಿತರ ಕುಟುಂಬಗಳು ಕೊಲೆ,ಅತ್ಯಾಚಾರದ ದೌರ್ಜನ್ಯಗಳನ್ನು ಅನುಭವಿಸಿ ಕಾಶ್ಮೀರ ತೊರೆಯುವಂತಾಗಲು ಕಾರಣರಾದವರಾರು? ಎಂದು ಬಿ.ವೈ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಬಿಟ್ಟುಕೊಟ್ಟವರಾರು? ಅವಕಾಶವಿದ್ದರೂ ಪಿಒಕೆ ಆಕ್ರಮಿಸಿಕೊಳ್ಳದೇ ಕೈಚೆಲ್ಲಿದವರಾರು? ಕಾಂಗ್ರೆಸ್ ಹಾಗೂ ಅದರ ಸ್ವಾರ್ಥ ಆಡಳಿತ ಇದಕ್ಕೆಲ್ಲ ಕಾರಣ ಎನ್ನುವುದು ದೇಶದ ಜನತೆಗೆ, ಜಗತ್ತಿಗೇ ತಿಳಿದ ಸತ್ಯ.

ಪ್ರಜಾಪ್ರಭುತ್ವದಲ್ಲಿ ಗುಲಾಮಿ ಪದ್ಧತಿಯನ್ನು ನೆನಪಿಸುವ ರೀತಿಯಲ್ಲಿ ಇಂದಿಗೂ ನೆಹರು ಮನೆತನದವರೇ ಸುಪ್ರೀಂ ಎಂದು ಪ್ರಜಾಪ್ರಭುತ್ವವನ್ನು ಅವಮಾನಿಸುವ ಭಟ್ಟಂಗಿ ಗರಡಿಯಿಂದ ಬಂದ ನೀವು, ಭಾರತದ ಸಾರ್ವಭೌಮತೆಯ ಶಕ್ತಿ ಹಾಗೂ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಲು ಹೊರಟಿರುವ ಪರಿ ಆಕಾಶಕ್ಕೆ ಉಗುಳುವ ಮೂರ್ಖನ ವರ್ತನೆ ನೆನಪಿಸುತ್ತಿದೆ.

ಪಾಕಿಸ್ತಾನದ ಮೇಲೆ ಯುದ್ಧವೇ ಬೇಡ ಎಂದು ಪಾಕಿಸ್ತಾನಿ ಮಾಧ್ಯಮಗಳಿಂದ ಬೆನ್ನು ತಟ್ಟಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಸ್ಥಾನ ವಿದ್ವಾನ್ ರೀತಿ ಮಾತನಾಡುವ ನೀವು ರಾಷ್ಟ್ರ ಪ್ರೇಮ ಪ್ರತಿನಿಧಿಸುವ ತಿರಂಗಾ ಯಾತ್ರೆಯನ್ನು ವ್ಯಂಗ್ಯ ಮಾಡುತ್ತೀರಿ,ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿಸುವ ನೀವು ಯಾವ ಮುಖ ಇಟ್ಟುಕೊಂಡು ತಿರಂಗಾ ಯಾತ್ರೆ ಹಾಗೂ ಯುದ್ಧದ ಕುರಿತು ಮಾತನಾಡುತ್ತೀರಿ?

ಇಂದು ವಿಶ್ವಮಟ್ಟದಲ್ಲಿ ಭಾರತವನ್ನು ಮುಂಚೂಣಿ ಸ್ಥಾನಕ್ಕೆ ತಂದು ನಿಲ್ಲಿಸಿರುವ, ಭಾರತದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ವ್ಯೂಹಗಳನ್ನು ಭೇದಿಸಿ ನಿಂತಿರುವ ಪ್ರಧಾನಿ ಮೋದಿ ಅವರನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ, ಶತಕೋಟಿ ಭಾರತೀಯರು ಒಪ್ಪಿಕೊಂಡು ಅವರ ನಾಯಕತ್ವವನ್ನು ಅಪ್ಪಿಕೊಂಡಿದ್ದಾರೆ.

ಭಾರತವನ್ನು ದುಸ್ಥಿತಿಗೆ ತರಲು ಹೊರಟಿದ್ದ  ಕಾಂಗ್ರೆಸ್ ಅನ್ನು ದೇಶದ ಜನತೆ ಇಂದು ದಯನೀಯ ಸ್ಥಿತಿಗೆ ತಲುಪಿಸಿದ್ದಾರೆ, ಇಷ್ಟಾದರೂ ಬುದ್ಧಿ ಕಲಿಯದ ನೀವು ಕುಯುಕ್ತಿಯ ಮಾತನಾಡುವುದನ್ನು ನಿಲ್ಲಿಸುವುದೇ ಇಲ್ಲ. ಒಗ್ಗಟ್ಟಿನ ಮನೆಯಲ್ಲಿ ಒಡಕು ಮೂಡಿಸುವ, ಮತಬ್ಯಾಂಕ್ ರಾಜಕಾರಣವನ್ನು ಪೋಷಿಸಿಕೊಂಡು ಬರುವ ನಿಮ್ಮಿಂದ ಭಾರತೀಯ ಜನತಾ ಪಾರ್ಟಿ ಹಾಗೂ ಕಾರ್ಯಕರ್ತರು ಪಾಠ ಹೇಳಿಸಿಕೊಳ್ಳುವ ಪರಿಸ್ಥಿತಿ ಈ ಶತಮಾನದಲ್ಲಂತೂ ಬರುವುದಿಲ್ಲ ಎನ್ನುವ ಸತ್ಯ ಪ್ರಚಾರಕ್ಕಾಗಿ ಒಟಗುಟ್ಟುವ ನಿಮಗೆ ತಿಳಿದಿರಲಿ ಎಂದು ತಿಳಿಸಿದ್ದಾರೆ.

 

Share This Article
error: Content is protected !!
";