ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಅವರ ವಿರುದ್ಧವೇ ಒಡ ಹುಟ್ಟಿದ ಸಹೋದರಿಯರು ಸುಪ್ರೀಂಕೋರ್ಟ್ನಲ್ಲಿ ಹೋರಾಡಿ ಗೆದ್ದಿದ್ದಾರೆ.
ಹುಬ್ಬಳ್ಳಿ ನಗರದ ಪಿಂಟೋ ಸರ್ಕಲ್ ಬಳಿಯ 15 ಗುಂಟೆ ಜಾಗ ಕಬಳಿಸಲಾಗಿದೆ ಎಂದು ಆರೋಪಿಸಿ ಸಹೋದರಿಯರಾದ ಹುಬ್ಬಳ್ಳಿ ನಗರದ ಸಾವಕ್ಕ ಸುಳ್ಳದ, ಧಾರವಾಡದ ಜಕ್ಕವ್ವ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಹೆಚ್.ಕೆ. ಪಾಟೀಲ್ ಕುಟುಂಬ ಆಸ್ತಿ ಬಿಟ್ಟುಕೊಡ್ತಿಲ್ಲ ಎಂದು ಆರೋಪಿಸಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಡಿಸೆಂಬರ್- 9ರಂದು ಆದೇಶ ನೀಡಿದ್ದು, 15 ಗುಂಟೆ ಜಾಗ ಸಾವಕ್ಕ ಮತ್ತು ಜಕ್ಕವ್ವ ಸಹೋದರಿಯರಿಗೆ ಸೇರಿದ್ದು ಎಂದಿದೆ.
ಪ್ರಕರಣ ಏನು?
1894ರಲ್ಲಿ ಸಾವಕ್ಕ, ಜಕ್ಕವ್ವ ತಂದೆ ಮರಿತಮ್ಮಪ್ಪ ಅಮರಶೆಟ್ಟಿ ಅವರು ಇಂಡಿಯನ್ ಕಾಟನ್ ಕಂಪನಿಗೆ 5 ಎಕರೆ ಜಾಗವನ್ನು 10 ವರ್ಷಗಳ ಕಾಲ ಲೀಸ್ಗೆ ನೀಡಿದ್ದರು.
ಬಳಿಕ 1941ರಲ್ಲಿ ಸಿದ್ದಲಿಂಗಪ್ಪ ಬುಳ್ಳಾ ಅನ್ನೋರು ಇಂಡಿಯನ್ ಕಾಟನ್ ಕಂಪನಿಯಿಂದ ಲೀಸ್ ಹೋಲ್ಡ್ ರೈಟ್ಸ್ ಖರೀದಿಸಿದ್ದರು. ಅದಾದಮೇಲೆ 1964ರಲ್ಲಿ ಬುಳ್ಳಾರಿಂದ ಹೆಚ್. ಕೆ. ಪಾಟೀಲ್ರ ತಂದೆ ಕೆ. ಹೆಚ್. ಪಾಟೀಲರು ಆ ಪೈಕಿ 15 ಗುಂಟೆ ಜಾಗವನ್ನು ಸಬ್ಲೀಸ್ಗೆ ಪಡೆದಿದ್ದರು. ಬಳಿಕ ಲೀಸ್ಗೆ ಪಡೆದ ಜಾಗವನ್ನು ಬುಳ್ಳಾ ಕುಟುಂಬ ಮತ್ತು ಹೆಚ್. ಕೆ. ಪಾಟೀಲ್ ಕುಟುಂಬ ಬಿಟ್ಟುಕೊಡದ ಕಾರಣ ಸಹೋದರಿಯರು ಕೋರ್ಟ್ ಮೊರೆ ಹೋಗಿದ್ದರು.
2024ರಲ್ಲಿ ಸಾವಕ್ಕ ಮತ್ತು ಜಕ್ಕವ್ವ ಪರ ಸುಪ್ರೀಂಕೋರ್ಟ್ ಆದೇಶವಾಗಿತ್ತು. ಕೋರ್ಟ್ ತನ್ನ ಆದೇಶದಲ್ಲಿ ಮೂಲ ಬಾಡಿಗೆದಾರ ಬುಳ್ಳಾ ಜಾಗದ ಮಾಲೀಕರಲ್ಲಎಂದು ಹೇಳಿದ್ದ ಕಾರಣ, ಅವರ ಕುಟುಂಬ ಕಬ್ಜಾ ಮಾಡಿದ್ದ ಜಾಗವನ್ನು ಮಾಲಿಕರಿಗೆ ಬಿಟ್ಟುಕೊಟ್ಟಿತ್ತು. ಆದರೆ ಹೆಚ್. ಕೆ. ಪಾಟೀಲ್ ಕುಟುಂಬ ಮಾತ್ರ ಇದಕ್ಕೆ ತಕರಾರು ತೆಗೆದ ಕಾರಣ ಸಹೋದರಿಯರು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಈ ಕಾನೂನು ಹೋರಾಟದಲ್ಲಿಯೂ ಸಾವಕ್ಕ ಮತ್ತು ಜಕ್ಕವ್ವ ಸಹೋದರಿಯರಿಗೆ ಜಯವಾಗಿದೆ. ಸುಪ್ರೀಂಕೋರ್ಟ್ ಆದೇಶದಿಂದ ಸಂತಸಗೊಂಡಿರುವ ಇವರು, 135 ವರ್ಷಗಳ ನಂತರ ನಮ್ಮ ಆಸ್ತಿ ನಮಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

