ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.
ಬರೀ ಶಬ್ದ ಮಾಡುವವರು ಸಂಸತ್ ನಲ್ಲಿ ಮಾತನಾಡಿ, ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹತ್ತು ರೂಪಾಯಿಯಾದರೂ ಅನುದಾನ ತೆಗೆದುಕೊಂಡು ಬರಲಿ. ಪ್ರಧಾನಿಯವರ ಮಾತಿನ ಮೇಲೆ ಭರವಸೆಯಿದೆ
ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಪ್ರಧಾನಿಯವರ ಬಳಿ ಮಾತನಾಡಿದೆ ಎಂದು ಶಿವಕುಮಾರ್ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಮನವಿಯನ್ನು ಗಮನಿಸುವುದಾಗಿ ತಿಳಿಸಿದ್ದಾರೆ. ಅವರು ಮಾತನಾಡಿದ ಶೈಲಿ ನೋಡಿದರೆ ನನಗೆ ಅವರ ಮಾತಿನ ಮೇಲೆ ಭರವಸೆಯಿದೆ ಎಂದು ಡಿಸಿಎಂ ಹೇಳಿದರು.
ಬೆಂಗಳೂರು ಜಾಗತಿಕ ನಗರ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಬೆಂಗಳೂರು ಭಾರತವನ್ನು ಪ್ರತಿನಿಧಿಸುತ್ತದೆ. ಬೆಂಗಳೂರು ಅಭಿವೃದ್ಧಿಗೆ ಎಲ್ಲಾ ಪಕ್ಷಗಳು ಕೊಡುಗೆ ನೀಡಿವೆ. ನಾನು ಒಬ್ಬನೇ ಅಥವಾ ನಮ್ಮ ಸರ್ಕಾರದಿಂದಲೇ ಎಲ್ಲಾ ಆಗಿದೆ ಎಂದು ಹೇಳುವುದಿಲ್ಲ.
ಬೆಂಗಳೂರು ದೇಶದಲ್ಲಿಯೇ ಪ್ರಮುಖ ನಗರವಾಗಿದೆ. ಇದನ್ನು ಇನ್ನೂ ಅತ್ಯುತ್ತಮ ನಗರವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇಲ್ಲಿ ರಾಜಕೀಯಕ್ಕಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.

