ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಿಂದು ಧರ್ಮದ ಮೇಲೆ ಆಗುತ್ತಿರುವ ದಾಳಿ ಬಗ್ಗೆ ಜಾಗೃತಿ ಹಾಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹಿಂದು ಸಮುದಾಯದ ಸಂಘಟನೆ, ಹಿಂದೂಗಳ ಸಂಘಟನೆಗಳ ಹಿತ ದೃಷ್ಟಿಯಿಂದ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆ ಮತ್ತು ಶ್ರೀ ರಾಮ ರಥಯಾತ್ರೆ ಕಾರ್ಯಕ್ರಮ ಮಾ.27 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮಾ.29 ರಂದು ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಲಿದೆ ಎಂದು ಬಜರಂಗದಳದ ಪ್ರಾಂತ ಬಲೋಪಾಸನ ಪ್ರಮುಖ್ ನರೇಶ್ ರೆಡ್ಡಿ ತಿಳಿಸಿದ್ದಾರೆ.
ನಗರದ ಮುತ್ಯಾಲಮ್ಮ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ನಡೆದ ಶ್ರೀರಾಮ ಶೋಭಾಯಾತ್ರೆಯ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 11 ವರ್ಷಗಳಿಂದ ಶ್ರೀರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆಯನ್ನು ಬೃಹತ್ ಕೇಸರಿ ಹಬ್ಬವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಬೃಹತ್ ಉತ್ಸವವಾಗಿ ನಡೆಯುತ್ತಿದೆ. ಕಾರ್ಯಕ್ರಮದ ಅಂಗವಾಗಿ ಬೃಹತ್ ವಾಹನ ಜಾಥಾ, ಉಚಿತ ಸಂಜೀವಿನಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸೆ, ದೀಪ ಲಕ್ಷ್ಮಿ ಪೂಜೆ, ಹೋಮ ಹವನಾದಿಗಳು, ವಿವಿಧ ದೇವರುಗಳ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಶ್ರೀ ರಾಮ ರಥಯಾತ್ರೆ ಆಗಮಿಸಲಿದೆ. ಮಾ.27 ರಂದು ಸಂಜೆ 4 ಗಂಟೆಗೆ ನಗರದ ಹೊರವಲಯದ ಪಾಲನಜೋಗಹಳ್ಳಿಯ ವಿನಾಯಕ ದೇವಾಲಯದ ಮುಂಭಾಗದಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಮಾ.28 ರಂದು ಬೆಳಿಗ್ಗೆ 9.30ಕ್ಕೆ ಗಣಪತಿ ಹೋಮ, ಉಚಿತ ಸಂಜೀವಿನಿ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಲಿದೆ. ಸಂಜೆ 5ಗಂಟೆಗೆ ಆನಂದ ಗುರೂಜಿ ನೇತೃತ್ವದಲ್ಲಿ ದೀಪ ಲಕ್ಷ್ಮಿ ಪೂಜೆ ನಡೆಯಲಿದ್ದು, ಪೂಜೆಯಲ್ಲಿ ಭಾಗವಹಿಸುವ ಮಹಿಳೆಯರು ಆಯೋಜಕರಲ್ಲಿ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ.
ಮಾ.29ರಂದು ಮಧ್ಯಾಹ್ನ 11.30ಕ್ಕೆ ಭಗತ್ಸಿಂಗ್ ಕ್ರೀಡಾಂಗಣದಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಅಂಬೇಡ್ಕರ್, ಇಮ್ಮಡಿ ಪುಲಿಕೇಶಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ನಂತರ ದಕ್ಷಿಣ ಪ್ರಾಂತ ಬಜರಂಗ ದಳ ಸಂಯೋಜಕ್ ಬೌದ್ದಿಕ್ ಪ್ರಭಂಜನ್ ಸೂರ್ಯ ಅವರಿಂದ ದಿಕ್ಸೂಚಿ ಭಾಷಣವಿದೆ.
ಸಂಜೆ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್ಯಕ್ರಮಗಳಿವೆ. ಹಿಂದೂ ಸಮಾಜದ ಪ್ರತೀಕವಾಗಿ ಶಕ್ತಿ ತೋರಿಸುವ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜೊ.ನ.ಮಲ್ಲಿಕಾರ್ಜುನ್, ರಾಮ ಕಿಟ್ಟಿ, ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ್ ಭಾಸ್ಕರ್ ಭಗತ್, ಕೋಲಾರ ವಿಭಾಗದ ಸಹ ಕಾರ್ಯದರ್ಶಿ ರವಿಕುಮಾರ್, ಮಾತೃಶ್ರೀ ಪ್ರಮುಖ ಮುಖಂಡರಾದ ಮೇಘನಾ,ದುರ್ಗಾ ವಾಹಿನಿ ಮೊದಲಾದವರು ಹಾಜರಿದ್ದರು.

