ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಐಮಂಗಳ ಸಮೀಪದ ಭರಂಪುರ ಗ್ರಾಮದಲ್ಲಿ ಯುಗಾದಿಯ ನಂತರದ ಶ್ರೀ ರಾಮನವಮಿಯ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಕೆಂಡಾರ್ಚನೆಯ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಹಾಗೂ ವಾಡಿಕೆಯಂತೆ ಹಲವಾರು ದಶಕಗಳಿಂದ ಪಾರಂಪರಿಕವಾಗಿ ನಡೆದುಕೊಂಡು ಬಂದಂತೆ ಶ್ರೀ ಆಂಜನೇಯ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀ ಮಾರುತಿ ಸೀನರಿ, ದೊಡ್ಡ ಚೆಲ್ಲೂರು ಇವರ ಚಮತ್ಕಾರ ಭರಿತ ದೃಶ್ಯ ಸಂಯೋಜನೆ ಮತ್ತು ಡಿಜಿಟಲ್ ಸೌಂಡ್ ಗಳಿಂದ ಅಲಂಕೃತವಾದ ಭವ್ಯರಂಗ ಮಂದಿರದಲ್ಲಿ ಶನಿವಾರ ಶ್ರೀ ಶನಿ ಮಹಾತ್ಮೆ ಅರ್ಥಾತ್ ರಾಜ ವಿಕ್ರಮ ಎಂಬ ಸುಂದರ ಭಕ್ತಿ ಪ್ರಧಾನ ಪೌರಾಣಿಕ ನಾಟಕೋತ್ಸವ ಜರುಗಿತು.
ಅಧಿಕಾರ ಅಹಂಕಾರ ಮದದಿಂದ ಗ್ರಹಗತಿಗಳ ನಿಂದನೆ ಮಾಡಿದರೆ ಮುಂದೊಡಗುವ ದುಷ್ಪರಿಣಾಮಗಳು ಹಾಗೂ ಶನಿ ದೇವರ ಆರಾಧನೆ, ಪೂಜೆ, ಪಠಣೆ ಮಾಡುವುದರಿಂದ ಬರುವಂತಹ ಕಷ್ಟಗಳು ಬಹುಬೇಗನೆ ಪರಿಹಾರವಾಗುವುದು ಎಂಬುದು ಈ ನಾಟಕದ ಮೂಲ ವಸ್ತು.
ದಾಸಣ್ಣನ ಮಾಳಿಗೆಯ ಮೂಡಲಗಿರಿಯಪ್ಪ ನವರು ಈ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದರು. ರಾಜ ವಿಕ್ರಮನ ಪಾತ್ರದಲ್ಲಿ ಓ. ಚಂದ್ರಪ್ಪ, ಶನಿ ಪಾತ್ರಧಾರಿ ರಂಗ ಪ್ರವೇಶಿಸುತ್ತಿದ್ದಂತೆಯೇ ಸಾಕ್ಷಾತ್ ಶ್ರೀ ಶನಿ ಮಹಾತ್ಮನ ಪ್ರತ್ಯಕ್ಷವಾದಂತೆ ಪ್ರೇಕ್ಷಕರು ಭಾವಿಸುತ್ತಿದ್ದರು ಅಷ್ಟು ಅತ್ಯದ್ಭುತವಾದ ನಟನೆ ಬಿಎಮ್ ಪರಮೇಶ್ವರಪ್ಪನವರದಾಗಿತ್ತು..
ಸ್ವಗ್ರಾಮದವರು ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಈ ನಾಟಕ ವೀಕ್ಷಣೆ ಮಾಡಿ ಶ್ರೀ ಶನಿ ದೇವರ ಕೃಪೆಗೆ ಪಾತ್ರರಾದರು ಎಂದು ವೇಣುಕುಮಾರ್. ಎಂ ಭರಂಪುರ ಅವರು ತಿಳಿಸಿದ್ದಾರೆ.

