ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ ಶೇ.63.21 ರಷ್ಟು ಫಲಿತಾಂಶ ಲಭಿಸಿದೆ. ಜಿಲ್ಲೆಯಲ್ಲಿ ಒಟ್ಟು 21,481 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, ಈ ಪೈಕಿ 13,579 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10,645 ಬಾಲಕರ ಪೈಕಿ 5,681 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 10,836 ಬಾಲಕಿಯರ ಪೈಕಿ 7,898 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಬಾಲಕಿಯರು ಮೈಲುಗೈ ಸಾಧಿಸಿದ್ದಾರೆ. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.72.85 ಫಲಿತಾಂಶ ದೊರಕಿತ್ತು. ಕಳೆದ ಬಾರಿಗೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಶೇ. 9.64 ರಷ್ಟು ಫಲಿತಾಂಶ ಕುಸಿತ ಕಂಡಿದೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ 23ನೇ ಸ್ಥಾನ ಪಡೆದಿದೆ.
ಜಿಲ್ಲೆಯ ತಾಲ್ಲೂಕುಗಳ ಪೈಕಿ ಹೊಳಲ್ಕೆರೆ ತಾಲ್ಲೂಕು ಶೇ 66.75, ಹಿರಿಯೂರು ಶೇ.65.64, ಚಳ್ಳಕೆರೆ ಶೇ.62.92, ಮೊಳಕಾಲ್ಮೂರು ಶೇ.62.63, ಚಿತ್ರದುರ್ಗ 62.13, ಹೊಸದುರ್ಗ ಶೇ.60.38 ರಷ್ಟು ಫಲಿತಾಂಶ ಪಡೆದಿವೆ.
ಸರ್ಕಾರಿ ಶಾಲೆಗಳು ಶೇ.62.37, ಅನುದಾನಿ ಶಾಲೆಗಳು ಶೇ.55.49 ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಶೇ.75.60 ರಷ್ಟು ಫಲಿತಾಂಶ ದಾಖಲಿಸಿವೆ. ಗ್ರಾಮೀಣ ಪ್ರದೇಶದ ಶಾಲೆಗಳ ಮಕ್ಕಳು ಶೇ.64.67, ನಗರ ಪ್ರದೇಶದ ಮಕ್ಕಳು ಶೇ.59.76 ರಷ್ಟು ಉತ್ತೀರ್ಣಗೊಂಡಿದ್ದು, ನಗರ ಪ್ರದೇಶಕ್ಕೆ ಹೊಲಿಸಿದರೆ ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ.
ಒಟ್ಟು 332 ವಿದ್ಯಾರ್ಥಿಗಳು 625ಕ್ಕೆ 600 ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಾದ ಮೌಲ್ಯ ಡಿ ರಾಜ್ ಹಾಗೂ ನಂದನ್ .ಹೆಚ್.ಓ 625 ಅಂಕ, ಇಂಚರ.ಆರ್ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಪೈಕಿ, ಚಿನ್ಮಯ ಇಂಗ್ಲೀಷ್ ಮೀಡಿಯಂ ಶಾಲೆಯ ಡಿ.ಕವನ 622, ವಿದ್ಯಾ ವಿಕಾಸ ಇಂಗ್ಲೀಷ್ ಮೀಡಿಯಂ ಶಾಲೆಯ ರಾಮ್ ಕುಮಾರ್.ಜಿ 622, ವಾಸವಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಿಂಚನ.ಟಿ 620 ಅಂಕ ಗಳಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಪೈಕಿ ಡಿ.ವಿ.ಎಸ್ ಇಂಗ್ಲೀಷ್ ಮೀಡಿಯಂ ಶಾಲೆಯ ಸೃಷ್ಠಿ.ಕೆ.ಎನ್ 622, ವಿದ್ಯಾವಿಕಾಸ ಇಂಗ್ಲೀಷ್ ಮೀಡಿಯಂ ಶಾಲೆಯ ಕಲ್ಯಾಣ ಬಾಬು 622 ಹಾಗೂ ಇಂದು ಕೆ. 621 ಅಂಕಗಳನ್ನು ಪಡೆದಿದ್ದಾರೆ.
ಹಿರಿಯೂರು ತಾಲ್ಲೂಕಿನ ಪೈಕಿ ಜಿಲ್ಲಾ ಮಟ್ಟದ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಪ್ರಶಾಂತ ಎನ್.ಎಂ. 621, ರಾಷ್ಟ್ರೀಯ ಅಕಾಡೆಮಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿಷೇಶ್.ವಿ.ಜೈನ್ ಹಾಗೂ ನಿಶಾಂತ್.ಆರ್.ಎನ್. ತಲಾ 621 ಅಂಕ ಗಳಿಸಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ಪೈಕಿ ಅಕ್ಷರ ವಿದ್ಯಾ ನಿಕೇತನ ಇಂಗ್ಲೀಷ್ ಮೀಡಿಯಂ ಶಾಲೆಯ ಭಾನು.ಎಸ್.ನ್ 622, ಎಸ್.ಜೆ.ಎಂ.ಇಂಗ್ಲೀಷ್ ಮೀಡಿಯಂ ಶಾಲೆಯ ಶೈಲಜಾ.ಎಸ್ 622 ಹಾಗೂ ನಿಶ್ಚಿತ.ಟಿ.ಆರ್.619 ಅಂಕ ಪಡೆದಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಪೈಕಿ ಗುಡ್ ಶಫರ್ಡ್ ಇಂಗ್ಲೀಷ್ ಮೀಡಿಯಂ ಶಾಲೆಯ ಚಿರಾಕ್ಷಾ.ಬಿ.ಜಿ 621, ಸೈಂಟ್ ಅಂಟೋನಿ ಶಾಲೆಯ ತನು.ಹೆಚ್.ಎನ್, 620, ಗುಡ್ ಶಫರ್ಡ್ ಇಂಗ್ಲೀಷ್ ಮೀಡಿಯಂ ಶಾಲೆಯ ಹರ್ಷಿತಾ.ವಿ 619 ಅಂಕ ಗಳಿಸಿದ್ದಾರೆ.
ಮೊಳಕಾಲ್ಮೂರು ತಾಲ್ಲೂಕಿನ ಪೈಕಿ ಆದರ್ಶ ವಿದ್ಯಾಲಯದ ಗುರುಸ್ವಾಮಿ.ಹೆಚ್.ಸಿ 622, ಶ್ರೀ.ಶಾಂತಿನಿಕೇತನ ಇಂಗ್ಲೀಷ್ ಮೀಡಿಯಂ ಶಾಲೆಯ 620, ಆದರ್ಶ ವಿದ್ಯಾಲಯದ ಮಿಸ್ಬಾ ತೋಹಿದ್ 617 ಅಂಕ ಪಡೆದಿದ್ದಾರೆ.
ಚಿತ್ರದುರ್ಗ ಮೆದೆಹಳ್ಳಿಯ ಶ್ರೀ ಸಿದ್ದೇಶ್ವರ ಪ್ರೌಢಶಾಲೆ, ಹಿರಿಯೂರು ವೇದಾವತಿ ನಗರದ ಎಸ್.ಜೆ.ಆರ್. ಹೈಸ್ಕೂಲ್, ಹೊಸದುರ್ಗ ತಾಲ್ಲೂಕಿನ ಗವಿರಂಗಪುರ ಗ್ರಾಮದ ಶ್ರೀ.ಗವಿರಂಗನಾಥ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪೌಢಶಾಲೆ ವಿಭಾಗ, ಹೊನ್ನೇನಹಳ್ಳಿ ಶ್ರೀ.ಆಂಜನೇಯ ಗ್ರಾಮಾಂತರ ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.
ಜಿಲ್ಲೆಯ ಎಲ್ಲಾ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷಾ ವೇಳೆ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಯಾವುದೇ ಗ್ರೇಸ್ ಮಾರ್ಕ್ಸ್ಗಳನ್ನು ವಿದ್ಯಾರ್ಥಿಗಳಿಗೆ ನೀಡಿಲ್ಲ. ಇದು ನೈಜ ಫಲಿತಾಂಶವಾಗಿದೆ. ಗ್ರಾಮೀಣ ಪ್ರದೇಶ ಹಾಗೂ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ 23ನೇ ಸ್ಥಾನ ಗಳಿಸಿದೆ. 2023-24ನೇ ಸಾಲಿನ ರಾಜ್ಯದ ಒಟ್ಟಾರೆ ಫಲಿತಾಂಶ ಶೇ.73 ರಷ್ಟು ಇತ್ತು. ಈ ಬಾರಿ ಶೇ.66ಕ್ಕೆ ಕುಸಿದಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಫಲಿತಾಂಶ ಕಳೆದ ಬಾರಿ ಶೇ.72 ರಷ್ಟು ಇದ್ದದ್ದು, ಈ ಬಾರಿ ಶೇ.63.21ಕ್ಕೆ ಕುಸಿದಿದೆ. ಬಾರಿ ರಾಜ್ಯದ ಸರಾಸರಿಗಿಂತಲೂ ಜಿಲ್ಲೆಯಲ್ಲಿ ಶೇ.2.79 ಫಲಿತಾಂಶ ದಾಖಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ತಿಳಿಸಿದ್ದಾರೆ.