ಮಾ.21 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆ:
2025-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು  ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ನಡೆಯಲಿದ್ದು ಪರಿಕ್ಷೆ ಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಸಲು ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು  ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.

ಈ ಸಂಬಂಧ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ, ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲಿಸಿದ್ದು, ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷಾ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಕಡಿಮೆ ಶ್ರೇಣಿ ಪಡೆದ ವಿದ್ಯಾರ್ಥಿಗಳು ಮತ್ತು ಸಿ ಶ್ರೇಣಿ ವಿದ್ಯಾರ್ಥಿಗಳು ಸುಮಾರು 4000 ಇದ್ದು, ಈ ಶ್ರೇಣಿ ವಿದ್ಯಾರ್ಥಿಗಳಿಗೆ ಆಧ್ಯತೆ ನೀಡಿ, ಪುನರ್ಬಲದ ಕಲಿಕೆ ಮಾರ್ಗದರ್ಶನ ನೀಡಲು ತಿಳಿಸಿದರು. 

ಪರೀಕ್ಷಾ ದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ಆಗುವಂತೆ, ಸಭೆಯಲ್ಲಿ ಹಾಜರಿದ್ದ ವಿದ್ಯುತ್ ಪ್ರಸರಣ ಅಧಿಕಾರಿಗಳಿಗೆ ತಿಳಿಸಿದರು. ಬೇಸಿಗೆಯ ಬಿಸಿಲಿನಿಂದ ಬಳಲುವ ವಿದ್ಯಾರ್ಥಿಗಳಿಗೆ, ಪರೀಕ್ಷಾ ಆತಂಕದಲ್ಲಿರುವ ವಿದ್ಯಾರ್ಥಿಗಳು ಕಂಡುಬಂದಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಕೈಗೊಳ್ಳಲು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲು ತಿಳಿಸಿದರು. ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರೀಕ್ಷಾ ಕೊಠಡಿಗಳಿಂದ ದೂರವಿಡಲು ಕ್ರಮವಹಿಸುವುದು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಪತ್ರದ ಮೂಲಕ ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ನಿಷೇಧಾಜ್ಞೆಯನ್ನು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್, ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಸಾಗಿಸಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲು ತಿಳಿಸಲಾಗಿದೆ. 

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಪಾಲನೆ ಮಾಡಿ ಅಗತ್ಯ ಸೇವೆ ಪಡೆದುಕೊಳ್ಳಲು ಸೂಚಿಸಿದರು. ಮಂಡಳಿಯು ನೀಡಿರುವ ಪರೀಕ್ಷಾ ಮಾರ್ಗಸೂಚಿ ಸಮಗ್ರವಾಗಿದ್ದು, ಪರೀಕ್ಷಾ ಮುಖ್ಯ ಅಧೀಕ್ಷಕರು 2-3 ಬಾರಿ ಅರ್ಥೈಸಿಕೊಳ್ಳುವುದು. ಕೊಠಡಿ ಮೇಲ್ವಿಚಾರಕರ ಪಾತ್ರ ಬಹುಮುಖ್ಯವಾಗಿದ್ದು, ಗೈರು ಹಾಜರಿ ಬಗ್ಗೆ ತರಬೇತಿಯಲ್ಲಿ ಸ್ಪಷ್ಟವಾಗಿ ತಿಳಿಸಲು ಸೂಚಿಸಿದರು. 

ಪರೀಕ್ಷೆ ಪ್ರಾರಂಭದಲ್ಲಿಯೇ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ನಿಖರವಾಗಿ ಗುರುತಿಸಿ, ತಪಾಸಣೆಗೆ ಒಳಪಡಿಸಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸುವುದು. ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ತರದಂತೆ ನೋಡಿಕೊಳ್ಳುವುದು. ಸಿಸಿಟಿವಿ ಕ್ಯಾಮರಾಗಳು ಸುಸ್ಥಿತಿಯಲ್ಲಿರುವುದನ್ನು ಪ್ರತಿ ಪರೀಕ್ಷಾ ದಿನಗಳಂದು ಬೆಳಗ್ಗೆ 8-30 ಗಂಟೆಗೆ ಖಚಿತಪಡಿಸಕೊಳ್ಳುವುದು. ಯಾವುದೇ ನ್ಯೂನ್ಯತೆ/ಕರ್ತವ್ಯ ಲೋಪ ಕಂಡುಬಂದದಲ್ಲಿ ಉಪನಿರ್ದೇಶಕರ ಮೂಲಕ ಜಿಲ್ಲಾಡಳಿತಕ್ಕೆ ವರದಿ ಮಾಡಲು ತಿಳಿಸಿ ಜಾಗರೂಕತೆಯಿಂದ, ಬದ್ಧತೆಯಿಂದ, ಪಾರದರ್ಶಕವಾಗಿ ನಿಯಮಾನುಸಾರ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 52 ಪರೀಕ್ಷಾ ಕೇಂದ್ರಗಳನ್ನು ರಚಿಸಿದ್ದು, 7567 ಬಾಲಕರು, 7199 ಬಾಲಕಿಯರು ಒಟ್ಟು 14766 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಮಂಡಳಿಯಲ್ಲಿ ನೊಂದಾಯಿಸಿಕೊಂಡಿರುತ್ತಾರೆ. 

       ಪರೀಕ್ಷೆಯು ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕರ ನಿರ್ವಹಣೆ ಮತ್ತು ಜವಾಬ್ಧಾರಿಯಲ್ಲಿ ನಡೆಯಲಿದ್ದು, ಇವರಿಗೆ ಸಹವರ್ತಿಯಾಗಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಅಭಿರಕ್ಷಕರು (ಕಸ್ಟೋಡಿಯನ್), ಸ್ಥಾನಿಕ ಜಾಗೃತ ಅಧಿಕಾರಿ, ಮೊಬೈಲ್  ಸ್ವಾಧೀನಾಧಿಕಾರಿಗಳ ಹಾಗೂ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಜವಾಬ್ಧಾರಿ ನಿರ್ವಹಿಸಲಿದ್ದಾರೆ.  

       ತಾಲ್ಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಂದಾಳತ್ವದಲ್ಲಿ ಗೌಪ್ಯ ಸಾಮಗ್ರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಮತ್ತು ಕೊಂಡೊಯ್ಯಲು ಮಾರ್ಗಾಧಿಕಾರಿಗಳನ್ನು ನೇಮಿಸಿದೆ.

  ಪ್ರಶ್ನೆ ಪತ್ರಿಕೆಗಳನ್ನು ತಾಲ್ಲೂಕು ಖಜಾನೆಗಳಲ್ಲಿ ಸಂರಕ್ಷಿಸಿಡಲು ಹಾಗೂ ಪರೀಕ್ಷಾ ದಿನಗಳಂದು ಬೆಳಗ್ಗೆ 9-00 ಗಂಟೆಗೆ ಖಜಾನೆಯಿಂದ ಗೌಪ್ಯ ಸಾಮಗ್ರಿಗಳನ್ನು ಹೊರತೆಗೆದು ಮಾರ್ಗಾಧಿಕಾರಿಗಳಿಗೆ ಹಸ್ತಾಂತರಿಸಲು ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ಖಜಾನೆ ಅಧಿಕಾರಿಗಳನ್ನೊಳಗೊಂಡ ತ್ರಿ-ಸದಸ್ಯ ಸಮಿತಿಯ ನೇಮಕವಾಗಿರುತ್ತದೆ. ಗೌಪ್ಯ ಸಾಮಗ್ರಿಗಳನ್ನು ಮುಚ್ಚಿದ ವಾಹನದಲ್ಲಿಯೇ ಸಾಗಾಣಿಕೆ ಮಾಡುವುದು.  

ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಎಸ್ಕಾರ್ಟ್ ವ್ಯವಸ್ಥೆಗೆ ಪೊಲೀಸ್ ಅಧಿಕಾರಿಗಳನ್ನು ಕೋರಿದೆ. ನಿರಂತರ ವಿದ್ಯುತ್ ಸರಬರಾಜು ನಿರ್ವಹಣೆಗೆ ಬೆಸ್ಕಾಂ ಅಧಿಕಾರಿಗಳನ್ನು, ವಿದ್ಯಾರ್ಥಿಗಳ ಆರೋಗ್ಯ ಸಂರಕ್ಷಣೆಗೆ ಆರೋಗ್ಯ ಇಲಾಖೆಯನ್ನು ಕೋರಿದೆ ಎಂದು ಉಪನಿರ್ದೇಶಕರು ಮಂಡಿಸಿದರು. 

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕಲಿಕಾ ಸಿದ್ಧತೆಯನ್ನು ಮಾಡಿದ್ದು, ಈಗಾಗಲೇ ಎರಡು ಮೂರು ಹಂತಗಳಲ್ಲಿ ಮುಖ್ಯ ಶಿಕ್ಷಕರ, ತಾಲ್ಲೂಕು ಮತ್ತು ಜಿಲ್ಲಾ ಹಂತದ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನೆ ಮಾಡಿದ್ದು, ಪರೀಕ್ಷೆ ಮುಕ್ತಾಯವಾಗುವವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶನ ನೀಡಿ, ಆತ್ಮ ವಿಶ್ವಾಸವನ್ನು ಮೂಡಿಸಬೇಕು. ಎಲ್ಲಾ 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿಗಳು, ಶಾಲಾ ಆವರಣಾ ಹಾಗೂ ಮುಖ್ಯ ಅಧೀಕ್ಷಕರ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಂಡು, ಡಿ.ವಿ.ಆರ್ ಗಳಲ್ಲಿ ಸಂರಕ್ಷಿಸಿ, ಉಪನಿರ್ದೇಶಕರು(ಅಭಿವೃದ್ಧಿ), ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರಿಗೆ ಸಲ್ಲಿಸಿ ವೀಕ್ಷಣೆಗೆ ಒದಗಿಸುವುದು.

 ಜಿಲ್ಲಾ ಹಂತದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಪ್ರತೀ ಪರೀಕ್ಷಾ ಕೇಂದ್ರಕ್ಕೆ ಒಂದರಂತೆ ಲ್ಯಾಪ್‌ಟಾಪ್ ವ್ಯವಸ್ಥೆ ಮಾಡಿ 3-4 ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಹಂತದ ಜವಾಬ್ಧಾರಿಯನ್ನು ನಿರ್ವಹಿಸಲು ಅಧೀಕಾರಿಗಳನ್ನು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ನಿಯೋಜಿಸುವುದು. ಯಾವುದೇ  ಕಾರಣಕ್ಕೂ ಪರೀಕ್ಷಾ ಕೇಂದ್ರಗಳಲ್ಲಿ  ಸಿಸಿಟಿವಿ ಕ್ಯಾಮರಾಗಳು ಸ್ಥಗಿತಗೊಳ್ಳದಂತೆ ಕ್ರಮವಹಿಸಬೇಕು.

 ಜಿಲ್ಲಾ ಹಂತದಲ್ಲಿ ಸಿದ್ಧ ಮಾಡಲಾದ ವೆಬ್‌ಕಾಸ್ಟಿಂಗ್ ವ್ಯವಸ್ಥೆ  ಮೂಲಕ ಪರೀಕ್ಷೆ ವೀಕ್ಷಣೆ ನಡೆಸಲಾಗುವುದು. ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತಹ ಕ್ರಿಯಾಶೀಲ ಸಿಬ್ಬಂದಿಯನ್ನು ನೇಮಿಸಲಾಗುವುದು. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ 7 ತಂಡಗಳ ಜಾಗೃತ ದಳದ ಜೊತೆಗೆ ಜಿಲ್ಲಾ ಹಂತದ ಇತರೆ ಅಧಿಕಾರಿಗಳ ಜಾಗೃತ ದಳದ ತಂಡಗಳನ್ನು ರಚಿಸಲಾಗುವುದು. ಈ ತಂಡಗಳು ಭೇಟಿ ನೀಡುವ ಪರೀಕ್ಷಾ ಕೇಂದ್ರಗಳ ವೇಳಾ ಪಟ್ಟಿ ಹಂಚಿಕೆಯನ್ನು ಮಾಡಲು ತಿಳಿಸಲಾಯಿತು. 

ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜಿನಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";