ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಭಾಗವಹಿಸುತ್ತಿರುವ ಮಾಹಿತಿ ಇದ್ದು ಈ ಬಗ್ಗೆ ವರದಿ ಕೇಳಿದ್ದು, ಅಂಥವರನ್ನು ಅಮಾನತು ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸ ಮಾಡುತ್ತಾರೆ ಅಂದುಕೊಂಡಿದ್ದೇವೆ. ಆದರೆ, ಅವರು ನಮಗಿಂತಲೂ ಹೆಚ್ಚು ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಚಿವರು ದೂರಿದರು.
ಸರ್ಕಾರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದಲ್ಲದೆ, ಬೇರೆ ರೀತಿಯಲ್ಲೂ ಪಾಲ್ಗೊಂಡಿದ್ದಾರೆ. ಇದರಲ್ಲಿ ನಮ್ಮ ಇಲಾಖೆಯ ಕೆಲವರಿದ್ದಾರೆ. ಈ ಸಂಬಂಧ ವರದಿ ತರಿಸಿಕೊಳ್ಳುತ್ತಿದ್ದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಖರ್ಗೆ ತಿಳಿಸಿದರು.
2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಬಾರದು ಎಂಬ ಸುತ್ತೋಲೆ ಹೊರಡಿಸಿದ್ದರು. ಹಲವು ಇಲಾಖೆಗಳು ಈ ಹಿಂದೆ ಈ ನಿಟ್ಟಿನಲ್ಲಿ ಆರ್ಡರ್ ಮಾಡಿವೆ. ಹಾಗಾಗಿ ಅವರು ಆರ್ಎಸ್ಎಸ್ ವಿರೋಧಿಗಳಾ?. ಇವತ್ತು ಹಲವು ಲೋಪಗಳಿವೆ, ಅದಕ್ಕಾಗಿಯೇ ಇವರೆಲ್ಲರೂ ಬೆಳೆದಿದ್ದಾರೆ.
ಸರ್ದಾರ್ ಪಟೇಲ್, ಇಂದಿರಾ ಗಾಂಧಿ ಆರ್ಎಸ್ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ ಅಂತಾರೆ.ಹೌದು ಆವತ್ತು ನಿಷೇಧ ವಾಪಸ್ ಪಡೆದಿದ್ದು ಸರಿಯಲ್ಲ ಅಂತ ನಾವು ಹೇಳುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಹಿಂದುತ್ವ ತಂದಿದ್ದು ಸಾವರ್ಕರ್ ತಾನೇ. ಮೊದಲು ಎಲ್ಲರೂ ಹಿಂದೂ ಅಂತಾನೇ ಇತ್ತು.
ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದುತ್ವ ತಂದರು. ಸಿದ್ದರಾಮಯ್ಯ ಅದನ್ನು ನಂಬದಿರಬಹುದು. ಆದರೆ ಡಿಸಿಎಂ ಬಹಳ ನಂಬುತ್ತಾರೆ. ಕೆಲವು ವಿಚಾರಗಳಲ್ಲಿ ನಾನು ನಂಬಲ್ಲ. ನಮ್ಮ ತಾಯಿ ನಂಬುತ್ತಾರೆ. ನನ್ನ ನಂಬಿಕೆ ಬೇರೆಯವರಿಗೆ ತೊಂದರೆ ಕೊಡಬಾರದು. ಸಂವಿಧಾನದ ಆಶಯಗಳಿಗೆ ಧಕ್ಕೆ ಬರಬಾರದು ಎಂದು ತಿಳಿಸಿದರು.

