ಕಲ್ಪತರು ನಾಡಿನಲ್ಲಿ ಜ.18, 19ರಂದು ಪತ್ರಕರ್ತರ ರಾಜ್ಯ ಸಮ್ಮೇಳನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲ್ಪತರು ನಾಡು ತುಮಕೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸಂಘಟನೆ ಮಾಡುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಜ.18 ಮತ್ತು 19 ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಜ.18ರಂದು ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದರು.
ಡಿವಿಜಿ ಸಂಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಶತಮಾನೋತ್ಸದತ್ತ ಮುನ್ನಡೆಯುತ್ತಿದ್ದು, ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ಉಳ್ಳ ದೇಶದ ಏಕೈಕ ಬೃಹತ್ ಸಂಘಟನೆಯಾಗಿದೆ ಎಂದರು.
ಪತ್ರಕರ್ತರು ಎದುರಿಸುತ್ತಿರುವ ವೃತ್ತಿ ಪರ ಸಮಸ್ಯೆಗಳು , ಆರೋಗ್ಯ, ಪ್ರೋತ್ಸಾಹಕ ಯೋಜನೆಗಳ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲು ಸಮ್ಮೇಳನಗಳು ಸಮರ್ಥ ವೇದಿಕೆಯಾಗುತ್ತವೆ.

ಈ ಎಲ್ಲಾ ಸಂಘಟನಾತ್ಮಕ ಚಟುವಟಿಕೆಗಳನ್ನು ವಾರ್ಷಿಕ ಸಮ್ಮೇಳನಗಳಲ್ಲಿ ಮಂಥನ ಮಾಡುವ ಅವಕಾಶವನ್ನು ಸೃಷ್ಟಿಕೊಳ್ಳಲಾಗಿದೆ. ಪತ್ರಿಕೋದ್ಯಮ, ಪತ್ರಕರ್ತರು ಸೇರಿದಂತೆ ನ್ಯೂಸ್ ರೂಂ ನ ಎಲ್ಲಾ ಆಯಾಮಗಳ ಕುರಿತು ಚಿಂತನ-ಮಂಥನ ಮಾಡುವುದು , ಈ ಮೂಲಕ ಪತ್ರಿಕೋದ್ಯಮದ ಸಮಗ್ರ ಹಿನ್ನೋಟ, ಮುನ್ನೋಟಗಳನ್ನು ಕಾಣುವುದು ಸಮ್ಮೇಳನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ಜ. 18 ರಂದು ಬೆಳಗ್ಗೆ 8.30ಕ್ಕೆ ತುಮಕೂರಿನ ಟೌನ್ ಹಾಲ್ ಬಿಜಿಎಸ್ ವೃತ್ತದಿಂದ ಪತ್ರಕರ್ತರ ಸಾಂಸ್ಕೃತಿಕ ಮೆರಗಿನ ಮೆರವಣಿಗೆಯನ್ನು ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಉದ್ಘಾಟಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.
ಈ ಸಮಾರಂಭಗಳಲ್ಲಿ ಹಿರೇ ಮಠಾಧೀಕ್ಷರಾದ ಡಾ. ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ
, ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ಶ್ರೀವಿರೇಶಾನಂದ ಸರಸ್ವತಿ ಸ್ವಾಮೀಜಿ, ಸ್ವಾಮಿ ಜಪಾನಂದಜೀ ಸಾನಿಧ್ಯ ವಹಿಸಲಿದ್ದಾರೆ.

ಇದೇ ದಿನ ಬೆಳಗ್ಗೆ 11 ಗಂಟೆಗೆ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲೆಯ ಹಾಲಿ ಶಾಸಕರು, ಮಾಜಿ ಶಾಸಕರು, ಸಂಸದರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಟಿ ವಿ ಶಿವಾನಂದ ತಗಡೂರು ವಹಿಸಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ ಸಚಿವ ಕೆ.ಎನ್ ರಾಜಣ್ಣ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು ಆತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂವಾದ ಗೋಷ್ಟಿಗಳು:
ಎರಡು ದಿನಗಳ ಸಮ್ಮೇಳನದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಮಹತ್ವದ ಸಂವಾದ ಮತ್ತು ಗೋಷ್ಟಿಗಳು ನಡೆಯಲಿವೆ. ಜ. 18 ರಂದು ಮಧ್ಯಾಹ್ನ 2 ಗಂಟೆಗೆ ಸಂವಿಧಾನ ಮತ್ತು ಮಾಧ್ಯಮ ವಿಷಯವಾಗಿ ನಡೆಯುವ ಗೋಷ್ಟಿಯನ್ನು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ ಪಾಟೀಲ್ ಅವರು ಉದ್ಘಾಟಿಸಲಿದ್ದು, ಖ್ಯಾತ ಪತ್ರಕರ್ತ, ಮಾಧ್ಯಮ ತಜ್ಞ ಜಿ.ಎನ್ ಮೋಹನ್ ಅವರು ವಿಷಯ ಮಂಡಿಸಲಿದ್ದು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ ಎಸ್ ಪೊನ್ನಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 4.30ಕ್ಕೆ ಸುದ್ದಿಮನೆ ಮತ್ತು ಪೋಟೋಗ್ರಾಫಿ ಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಉದ್ಘಾಟಿಸಲಿದ್ದು, ಹಿರಿಯ ಪತ್ರಿಕಾ ಛಾಯಾಗ್ರಾಹಕ ಕೆ.ಗೋಪಿನಾಥ್, ಅನುಶಾಂತರಾಜ್, ಶರಣು ಬಸಪ್ಪ ಪಾಲ್ಗೊಳ್ಳಲಿದ್ದಾರೆ.

ಜ. 19 ರಂದು ಬೆಳಗ್ಗೆ 10.30ಕ್ಕೆ ಮಾಧ್ಯಮ ಮತ್ತು ಓದುಗರು /ನೋಡುಗರು /ಕೇಳುಗರು ಗೋಷ್ಟಿಯನ್ನು ವಿಜಯವಾಣಿ ಸಂಪಾದಕ ಕೆ.ಎನ್ ಚನ್ನೆಗೌಡ ಉದ್ಘಾಟಿಸಿದರೆ, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ ಐನಕೈ ಅವರು ಅಧ್ಯಕ್ಷತಗೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಅನಂತಚಿನಿವಾರ, ಮೈಸೂರುವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಎಂ ಎಸ್ ಸ್ವಪ್ನ, ಅವರುಗಳು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12 ಕ್ಕೆ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಗೋಷ್ಟಿಯನ್ನು ಸುವರ್ಣ ನ್ಯೂಸ್ ಸಂಪಾದಕರ ಅಜಿತ್ ಹನುಮಕ್ಕನವರ್ ಉದ್ಘಾಟಿಸಲಿದ್ದು, ವಿಜಯಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ , ಕಸ್ತೂರಿ ಸಂಪಾದಕಿ ಶಾಂತಲಾ ಧರ್ಮರಾಜ್, ದಾವಣಗೆರೆವಿವಿ ಡಾ. ಶಿವಕುಮಾರ ಕಣಸೋಗಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಸ್ಥಳೀಯ ಪತ್ರಿಕೆಗಳು /ಜಾಹೀರಾತು/ವಿತರಕರು ಗೋಷ್ಟಿಯನ್ನು ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್ ಉದ್ಘಾಟಿಸಲಿದ್ದು ಹಿರಿಯ ಪತ್ರಿಕಾ ಸಂಪಾದಕ ಎಸ್.ನಾಗಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಎರಡು ದಿನಗಳ ಗೋಷ್ಟಿಗಳಲ್ಲಿ ಸಂವಾದಕರಾಗಿ ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಶಿವಕುಮಾರ್ ಬೆಳ್ಳಿತಟ್ಟೆ, ಉಗಮ ಶ್ರೀನಿವಾಸ್, ಕುಚ್ಚಂಗಿ ಪ್ರಸನ್ನ, ಮರಿಯಪ್ಪ, ಉಮೇಶ್ ಭಟ್ , ಹರೀಶ್ ರೈ, ಗುರುನಾಥ್, ಬಿ.ಎಂ ಹನೀಫ್, ಟಿ ಎಂ ಸತೀಶ್ ಮೊದಲಾದವರು ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳ ಸಭೆ ಮತ್ತು ಕಲ್ಪತರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಶಾಖೆಯು ಸಮ್ಮೇಳನದ ಆತಿಥ್ಯ ವಹಿಸಿದ್ದು ಜಿಲ್ಲಾ ಘಟಕದ ಅಧ್ಯಕ್ಷ ಚಿ ನಿ ಪುರುಷೋತ್ತಮ, ಪ್ರಧಾನಕಾರ್ಯದರ್ಶಿ ರಘುರಾಮ್ ತಂಡ ಅವಿರತವಾಗಿ ಶ್ರಮಿಸುತ್ತಿದೆ.
ಸಮ್ಮೇಳನವು ಸಾಂಸ್ಕೃತಿಕ ಸಮಾರಂಭಗಳನ್ನು ಒಳಗೊಂಡಿದ್ದು ಖ್ಯಾತ ಗಾಯಕಿ ಶಮಿತ ಮಲ್ನಾಡ್ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಶಿವಾನಂದ ತಗಡೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಖಜಾಂಚಿ ವಾಸುದೇವ ಹೊಳ್ಳ, ರಾಜ್ಯ ಸಮಿತಿ ಸದಸ್ಯರಾದ ದೇವರಾಜು, ಬೆಂಗಳೂರು ಘಟಕದ ಶಿವರಾಜು ಮತ್ತಿತರರು ಹಾಜರದ್ದರು.

 

 

Share This Article
error: Content is protected !!
";