ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಪರೇಷನ್ ಸಿಂಧೂರ್ ದಾಳಿ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದ ರಾಜ್ಯದ ಕೆಲ ಡ್ಯಾಂಗಳು, ಮತ್ತು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಡ್ಯಾಂಗಳು, ವಿದ್ಯುತ್ ಘಟಕಗಳು, ರಾಯಚೂರು, ಕೈಗಾ, ಕೆಆರ್ಎಸ್ ಡ್ಯಾಂಗೆ ಭದ್ರತೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಪರಮೇಶ್ವರ್, ರಾಜ್ಯದಲ್ಲಿ ಭದ್ರತೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿ, ಭದ್ರತೆಗೆ ಸ್ಪೆಷಲ್ ಫೋರ್ಸಸ್ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ರಾಯಚೂರು, ಕೈಗಾ, ಕೆ.ಆರ್.ಎಸ್ಗೆ ಭದ್ರತೆ ಹೆಚ್ಚಿಸಲಾಗಿದೆ. ಅದಕ್ಕಾಗಿ ಕೈಗಾರಿಕಾ ಭದ್ರತಾ ಪಡೆ ಬಳಕೆ ಮಾಡಿಕೊಳ್ಳುತ್ತೇವೆ. ಅವರಿಗೆ ಕಮಾಂಡೋ ಟ್ರೈನಿಂಗ್ ಎಲ್ಲಾ ಆಗಿದೆ. ಹೆಚ್ಚುವರಿಯಾಗಿ ಅವರನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಎಲ್ಲಾ ಇಲಾಖೆಯಲ್ಲೂ ಭದ್ರತೆಗೆ ಬೇಕಾದ ಸಿಬ್ಬಂದಿ ವ್ಯವಸ್ಥೆ ಇದೆ. ಅಡಿಷನಲ್ ಆಗಿ ನೇಮಕಾತಿ ಮಾಡಿಕೊಂಡರೆ ಒಂದು ವರ್ಷ ಟ್ರೈನಿಂಗ್ ಆಗಬೇಕು. ಕೇಂದ್ರದಿಂದ ಮೂರು ಜಿಲ್ಲೆಯಲ್ಲಿ ಮಾಕ್ ಡ್ರಿಲ್ ಮಾಡುವಂತೆ ಸೂಚನೆ ಬಂದಿತ್ತು. ಹೆಚ್ಚುವರಿಯಾಗಿ ಮೈಸೂರು ಆಯ್ಕೆ ಮಾಡಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದೇವೆ. ಎಸ್ಪಿಗಳಿಗೆ ಭದ್ರತೆ ಬಗ್ಗೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಕೈಗಾರಿಕೆಗಳು, ಡ್ಯಾಂಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಕಡೆ ಭದ್ರತೆ ಮುಖ್ಯವಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಒಟ್ಟಾಗಿ ಕ್ರಮಕೈಗೊಳುತ್ತವೆ. ರಾಜಕೀಯ, ಪಕ್ಷ ಭೇದ ಬಿಟ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾವು ಕೇಂದ್ರದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.