ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಮಟ್ಟದ ಸಮಾವೇಶ -ಬಸವರಾಜ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಾಸ್ಟೆಲ್ ಹಾಗೂ ವಸತಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳಕ್ಕಾಗಿ
, ಖಾಲಿ ಇರುವ ವಾರ್ಡನ್, ಪ್ರಾಂಶುಪಾಲರು, ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ, ವಸತಿ ನಿಲಯಗಳಿಗೆ ಸ್ವಂತ ಕಟ್ಟಡ, ಕನಿಷ್ಠ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಹಾವೇರಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಹೇಳಿದರು.

ಎಸ್ಎಫ್ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದ ಲೋಗೋವನ್ನು ಚಿತ್ರದುರ್ಗದ ವಿವಿಧ ಹಾಸ್ಟೆಲ್ ಗಳಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, 4-5 ಅಕ್ಟೋಬರ್ 2025 ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ರಾಜ್ಯದಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು, ಮೂಲಸೌಕರ್ಯಗಳ ಕುರಿತು ಚರ್ಚಿಸಲಾಗುವುದು. ಈಗಾಗಲೇ ರಾಜ್ಯದಲ್ಲಿರುವ ಎಸ್ಸಿ 3.5ಲಕ್ಷ ವಿದ್ಯಾರ್ಥಿಗಳು ಪೈಕಿ 2400 ವಸತಿ ನಿಲಯಗಳು, ಎಸ್.ಟಿ 1.5ಲಕ್ಷ ವಿದ್ಯಾರ್ಥಿಗಳು ಪೈಕಿ 1200 ವಸತಿ ನಿಲಯಗಳು, ಒಬಿಸಿ 2.5 ವಿದ್ಯಾರ್ಥಿಗಳು ಪೈಕಿ 2500 ನಿಲಯಗಳು ಒಟ್ಟು 7.5 ವಿದ್ಯಾರ್ಥಿಗಳು ಮತ್ತು 6000ಕ್ಕೂ ಅಧಿಕ ನಿಲಯಗಳಿವೆ.

- Advertisement - 

ನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನೇಮಕಾತಿಗಳು ವಿಳಂಬದ ಕಾರಣದಿಂದಾಗಿ ನಿಲಯ ಪಾಲಕರ, ಸ್ವಚ್ಚತಾ ಸಿಬ್ಬಂದಿ ಕೊರತೆ ಹೆಚ್ಚಿದೆ.  ಟೆಂಡರ್ ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಜೈಲಿನಲ್ಲಿರುವ ಕೈದಿಗಳಿಗಿಂತ ಕಡೆಯಾಗಿ ಕಾಣಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಸಮಾಜ ಕಲ್ಯಾಣ ಇಲಾಖೆ 14 ಕೋಟಿ ಹಣ ಕೇಳಿದೆ ಆದರೆ ಸರ್ಕಾರ ನೀಡುತ್ತಿಲ್ಲ.

  ಅದಕ್ಕಾಗಿ ಎಸ್ಎಫ್ಐ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಮೆಟ್ರಿಕ್ ವಿದ್ಯಾರ್ಥಿಗಳಿಗೆ 1750 ರೂ ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ 1850 ರೂ ಆಹಾರ ಭತ್ಯೆಯನ್ನು ನೀಡಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಪ್ರತಿ ವಿದ್ಯಾರ್ಥಿಗೆ 4.500ರೂ ಆಹಾರ ಭತ್ಯಯನ್ನು ಹೆಚ್ಚಿಸಬೇಕು. ಇದರ ಭಾಗವಾಗಿ ಹಾವೇರಿಯಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಸಮಾವೇಶವನ್ನು ಮಾಡಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ ಎಂದು ಬಸವರಾಜ ಎಸ್ ಹೇಳಿದರು.

- Advertisement - 

ಎಸ್ಎಫ್ಐ ಮುಖಂಡ ಸಂಜುನಾಯ್ಕ ಎಲ್ ಜಿ ಮಾತನಾಡಿ, ಉತ್ತಮ ಶಿಕ್ಷಣಕ್ಕಾಗಿ ಹಾಸ್ಟೆಲ್ ಪ್ರಮುಖ ಪತ್ರವನ್ನು ವಹಿಸಿವೆ ಆದರಿಂದ ಎಸ್ಎಫ್ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ಧಾರವಾಡ-ಹುಬ್ಬಳ್ಳಿ ಸೇರಿದಂತೆ ಇಡೀ ರಾಜ್ಯದ 200ಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡು ಹಾಸ್ಟೆಲ್ ವ್ಯವಸ್ಥೆಯ ಕುರಿತು ಸಮಗ್ರ ಚರ್ಚೆಗಳು, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಸರ್ಕಾರದ ಸಚಿವರು, ನಾಲ್ಕು ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು, ತಜ್ಞರು, ಅಖಿಲ ಭಾರತ ಅಧ್ಯಕ್ಷರು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಾಸ್ಟೆಲ್ ಗಳ ಮಧ್ಯೆ ವಿದ್ಯಾರ್ಥಿ ಚಳುವಳಿ ದೊಡ್ಡ ಆಂದೋಲನ ಪ್ರಾರಂಭಿಸುತ್ತಿದೆ ಎಂದರು.

ಎಸ್ಎಫ್ಐ ಮುಖಂಡರಾದ ರಕ್ಷಿತಾ ಎಸ್ ಎ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಿಯಾದ ಭದ್ರತೆ ಇಲ್ಲ, ಆರೋಗ್ಯ ಪರೀಕ್ಷೆ ನಡೆಯುತ್ತಿಲ್ಲ, ಅಷ್ಟಲ್ಲದೆ ವಿದ್ಯಾರ್ಥಿಗಳ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಪ್ರಶ್ನಿಸಿದರೆ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ವಸತಿ ನಿಲಯವನ್ನು ಬಿಡುವಂತಾಗಿದೆ. ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಕಲ್ಪಿಸಬೇಕು,

ಆದರೆ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ-ಹುಬ್ಬಳ್ಳಿ, ಬೆಂಗಳೂರಿನಂತಹ ನಗರಗಳಲ್ಲಿ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನೀಡಲಾಗುತ್ತದೆ. ಇದನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಪ್ರಾರಂಭದ ಹಂತದಲ್ಲಿರುವ 120 ಹಾಸ್ಟೆಲ್ ಗಳನ್ನು ಕೂಡಲೇ ತೆರೆಯಬೇಕು. ಈ ಶೈಕ್ಷಣಿಕ ಸಾಲಿನಲ್ಲಿ 10 ಹಾಸ್ಟೆಲ್ ಗಳನ್ನು ಕೂಡಲೆ ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಎಸ್ಎಫ್ಐ ಒತ್ತಾಯಿಸುತ್ತದೆ.

ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷೆ ದೀಪಾ, ಕಾರ್ಯದರ್ಶಿ ಪ್ರೀತಿ, ಉಪಾಧ್ಯಕ್ಷೆ ಅಮೃತಾ ಎನ್ ಸಿ, ದೀಪಿಕಾ ಜೆ, ಸಂದ್ಯಾ ಜಿ ಎಸ್, ಸಹ ಕಾರ್ಯದರ್ಶಿ ರಾಧಿಕಾ ಟಿ, ದಿವ್ಯ ಎಸ್, ಅಧ್ಯಕ್ಷ ಯೋಗೆಶ್ ಕಾರ್ಯದರ್ಶಿ ನೌಕೇಶ್, ಉಪಾಧ್ಯಕ್ಷ ಆಕಾಶ ಕಣವೇಶ್ವರ, ತಿಪ್ಪೇಸ್ವಾಮಿ ಎಸ್, ರಾಜಶೇಖರ ಹಿರೇಮಠ, ಸುದರ್ಶನ ಕೆ ವಿ, ಸಹ ಕಾರ್ಯದರ್ಶಿ ರಾಜು ಬಿ, ಕಾರ್ತಿಕ ಬಿ ಎಸ್, ಕುಶಾಲ , ಮಹಾಲಕ್ಷ್ಮಿ, ದಿವ್ಯಾ ಎಸ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 

 

Share This Article
error: Content is protected !!
";