ವಸತಿ ಸೌಲಭ್ಯಕ್ಕಾಗಿ ಆಗ್ರಹಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷದ ಸಹಯೋಗದೊಂದಿಗೆ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್‌ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

- Advertisement - 

ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಾತಿ ಸುಂದರೇಶ್ ಮಾತನಾಡಿ ಜಿಲ್ಲೆಯಲ್ಲಿ ಐವತ್ತು ಸಾವಿರ ಕುಟುಂಬಗಳಿಗೆ ನಿವೇಶನವಿಲ್ಲ. ಎಲ್ಲೆಲ್ಲಿ ಸರ್ಕಾರಿ ಭೂಮಿ ಇದೆಯೋ ಅದನ್ನು ಬಡವರ ವಸತಿಗಾಗಿ ಮೀಸಲಿಡಬೇಕು. ರಾಜ್ಯದಲ್ಲಿ ಹದಿನೇಳು ಲಕ್ಷ ಎಕರೆ ಗೋಮಾಳ ಜಮೀನಿದೆ. ಹನ್ನೊಂದು ಲಕ್ಷ ಎಕರೆ ಒತ್ತುವರಿಯಾಗಿದ್ದು, ಶ್ರೀಮಂತರ ವಶದಲ್ಲಿದೆ. ಕಮ್ಯನಿಸ್ಟ್ ಪಕ್ಷ ಬಡವರ ಪರವಾಗಿದೆ. ನಿವೇಶನ, ಮನೆಗಾಗಿ ಹೋರಾಡಬೇಕಾಗಿರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಎಂದು ಮನವಿ ಮಾಡಿದರು.

ಆಳುವ ಸರ್ಕಾರಗಳು ಬಡವರ ಪರವಾಗಿಲ್ಲ. ೨೦೦೦ ರಲ್ಲಿ ರಾಜೀವ್‌ಗಾಂಧಿ ವಸತಿ ನಿಗಮ ಸ್ಥಾಪನೆಯಾಯಿತು. ಅಂದಿನಿಂದ ನಿವೇಶನ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವ ಕೆಲಸ ಮಾಡುತ್ತಿದೆ. ನಿವೇಶನಕ್ಕಾಗಿ ಅರ್ಜಿ ಕೊಟ್ಟಿದ್ದೇವೆ. ಇನ್ನು ಕೊಡುತ್ತೇವೆ. ನಿಗಮದ ವೆಬ್‌ಸೈಟ್ ಕಂಪ್ಯುಟರ್‌ನಲ್ಲಿ ಮೊದಲು ನಿವೇಶನ ರಹಿತರ ಹೆಸರುಗಳನ್ನು ಸೇರಿಸಬೇಕು. ಸರ್ಕಾರದಿಂದ ಜಮೀನು ಕೇಳೋಣ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕೆಂದು ನಿವೇಶನ ಮತ್ತು ವಸತಿ ರಹಿತರನ್ನು ಜಾಗೃತಿಗೊಳಿಸಿದರು.

- Advertisement - 

ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಂ.ಜಿ.ಸಿ.ಸುರೇಶ್‌ಬಾಬು ಮಾತನಾಡಿ ಜಿಲ್ಲೆಯಲ್ಲಿ ಒಂದು ಲಕ್ಷ ೨೬ ಸಾವಿರ ನಿವೇಶನರಹಿತರಿದ್ದಾರೆ. ತೆಲಂಗಾಣದಲ್ಲಿ ವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಳ್ಳಲು ಐದು ಲಕ್ಷ ರೂ.ಗಳನ್ನು ನೀಡುತ್ತಿದೆ. ಕೇರಳದಲ್ಲಿ ಆರುವರೆ ಲಕ್ಷ ರೂ.ಗಳನ್ನು ಕೊಡುತ್ತಿದೆ. ನಮ್ಮ ರಾಜ್ಯದಲ್ಲಿ ಒಂದುವರೆ ಲಕ್ಷ ರೂ.ಗಳು ನೀಡುತ್ತಿರುವುದು ಯಾವುದಕ್ಕೂ ಸಾಕಾಗುವುದಿಲ್ಲ. ಅದಕ್ಕಾಗಿ ಐದು ಲಕ್ಷ ರೂ.ಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಿ ವಸತಿ ರಹಿತರಿಗೆ ಹಂಚಿ ಮನೆಗಳನ್ನು ಕಟ್ಟಿಸಿಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ವಸತಿ ರಹಿತರನ್ನು ಗುರುತಿಸಿ ವಸತಿ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದರು.

ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಟಿ.ಆರ್.ಉಮಾಪತಿ, ತಾಲ್ಲೂಕು ಅಧ್ಯಕ್ಷ ಡಾ.ಜಿ.ಹೆಚ್.ಹನುಮಂತಪ್ಪ, ತಾಲ್ಲೂಕು ಕಾರ್ಯದರ್ಶಿ ಕಾಂ.ಈ.ಸತ್ಯಕೀರ್ತಿ, ಕಾಂ.ಬಿ.ಬಸವರಾಜು, ಕಾಂ.ಸಿ.ವೈ.ಶಿವರುದ್ರಪ್ಪ, ಕಾಂ.ಎಂ.ಬಿ.ಜಯದೇವಮೂರ್ತಿ, ಕಾಂ.ಎಸ್.ಬಾಬು, ಕಾಂ.ಶ್ರೀಧರ್‌ಯಾದವ್, ಕಾಂ.ಜಾಫರ್, ಷರೀಫ್, ಕಾಂ.ಡಿ.ಪೆನ್ನಯ್ಯ,

ಕಾಂ. ಮಾರಣ್ಣ, ಕಾಂ.ಎನ್.ಸಿ.ಕುಮಾರಸ್ವಾಮಿ, ಕಾಂ.ಹೆಚ್.ಕೆ.ಸುನಿತಮ್ಮ, ಕಾಂ.ಹೆಚ್.ಎಸ್.ರೇಣುಕಮ್ಮ, ಕಾಂ.ಎಸ್.ಸಿ.ಕುಮಾರ್, ಕಾಂ.ಕೆಂಚಮ್ಮ, ಕಾಂ.ಶಾಜಿಯ, ಕಾಂ.ಅಮೀನಾಭಿ, ಕಾಂ.ಮಹೇಶ್ವರಿ, ಕಾಂ.ಗಂಗಮ್ಮ, ಕಾಂ.ರಾಮಕೃಷ್ಣ, ಕಾಂ.ಶಶಿಧರ ಸೇರಿದಂತೆ ನೂರಾರು ನಿವೇಶನ ಮತ್ತು ವಸತಿ ರಹಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Share This Article
error: Content is protected !!
";