ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಬ್ಬದಂತೆ ಆಚರಿಸಬೇಕು-ಜಿಲ್ಲಾಧಿಕಾರಿ ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯು ಇದೇ ಮಾರ್ಚ್ 21 ರಿಂದ  ಏಪ್ರಿಲ್ 04 ರವರೆಗೆ ನಡೆಯಲಿದ್ದು, ಪರೀಕ್ಷೆಯನ್ನು ಹಬ್ಬದಂತೆ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಕರೆ ನೀಡಿದ್ದಾರೆ.

ಪರೀಕ್ಷೆ ಸಮೀಪಿಸಿತೆಂದು ಆತಂಕ ಬೇಡ, ನಿಮ್ಮಗಳ ದಿನನಿತ್ಯ ಕಾರ್ಯಗಳ ಜೊತೆಗೆ ಓದುವ ಅವಧಿ ಹೆಚ್ಚಿಸಿಕೊಳ್ಳಿ. ಶಿಕ್ಷಣ ಇಲಾಖೆ ನಡೆಸಿರುವ ಅನೇಕ ವಿಷಯ ಸಾಮಥ್ರ್ಯ ಬೆಳೆಸಿಕೊಳ್ಳುವ ಕಾರ್ಯಗಾರಗಳು ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳು ನಿಮ್ಮನ್ನು ಸಬಲರನ್ನಾಗಿಸಿವೆ. ನೀವು ಸುಲಭವಾಗಿ ಪರೀಕ್ಷೆಯನ್ನು ಬರೆಯಲು ಸಮರ್ಥರಾಗಿದ್ದೀರಾ ಎಂದು ನಂಬಿದ್ದೇವೆ.

ಸಿ ಸಿ ಟಿವಿ ಮತ್ತು ವೆಬ್ ಕಾಸ್ಟಿಂಗ್ ಬಗ್ಗೆ ಅನಗತ್ಯ ಯೋಚನೆ ಬೇಡ. ನಿಮ್ಮ ಒಳತಿಗಾಗಿ ಸರ್ಕಾರ ವ್ಯವಸ್ಥೆ ಮಾಡಿದೆ. ಅಭ್ಯಾಸದ ಕಡೆ ಹೆಚ್ಚು ಗಮನಹರಿಸಿ ಉಳಿದಂತೆ ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮಕ್ಕಳ ಸ್ನೇಹಿಯಾಗಿ ವ್ಯವಸ್ಥೆ ಮಾಡಿದೆ. ಯಾವುದೇ ಊಹಾಪೋಹ ಗೊಂದಲಗಳಿಗೆ ಕಿವಿಗೊಡಬೇಡಿ. ಪರೀಕ್ಷಾ ಸಮಯದ 30 ನಿಮಿಷ ಮುಂಚೆಯೇ ಕೇಂದ್ರದಲ್ಲಿ ಇರುವುದನ್ನು ಮರೆಯಬೇಡಿ. ಪರೀಕ್ಷೆ ಪ್ರಾರಂಭವಾದ ನಂತರ 30 ನಿಮಿಷ ತಡವಾಗಿ ಬಂದರೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂಬುದು ನಿಮಗೆ ತಿಳಿದಿರಲಿ. ಪ್ರವೇಶ ಪತ್ರ ನಿಮ್ಮೊಂದಿಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರಶ್ನೆ ಪತ್ರಿಕೆಯನ್ನು ಮೊದಲು ಚೆನ್ನಾಗಿ ಓದುವುದನ್ನು ಮರೆಯಬೇಡಿ, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆದು ಉತ್ತಮ ಫಲಿತಾಂಶ ಪಡೆಯುವಂತೆ ಶುಭ ಹಾರೈಸಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆ ಅಂದರೆ ಬರೀ ಮಕ್ಕಳಿಗೆ ಅಲ್ಲ. ಪೋಷಕರಿಗೂ ಒತ್ತಡದ ಕಾಲ. ಪೋಷಕರಾಗಿ ಮಕ್ಕಳ ಒತ್ತಡ ಮತ್ತು ಆತಂಕವನ್ನು ದೂರ ಮಾಡುವುದು ತಮ್ಮ ಜವಾಬ್ದಾರಿಯಾಗಿದೆ. ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ, ಯಶಸ್ಸಿಗೆ ಪರಿಶ್ರಮ ಮತ್ತು ಪ್ರಯತ್ನ ಎಂಬ ನಂಬಿಕೆಯನ್ನು ಮಕ್ಕಳಲ್ಲಿ ಮೂಡಿಸಿ. ಪರೀಕ್ಷಾ ಕಾರ್ಯ ಮುಗಿಯುವವರೆಗೂ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ಹೊರತುಪಡಿಸಿ ಬೇರೆ ಕೆಲಸ ಹೇಳಬೇಡಿ.

ಪೋಷಕಯುಕ್ತ ಆಹಾರ ಮತ್ತು ಹೆಚ್ಚು ಹೆಚ್ಚು ನೀರು ಕುಡಿಯಲು ಸಲಹೆ ನೀಡಿ, ಪರೀಕ್ಷಾ ದಿನ ಶಾಂತವಾಗಿ ಮಕ್ಕಳನ್ನು ಪ್ರೋತ್ಸಾಹಿಸಿ, ವೇಳೆಗೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಎಚ್ಚರವಹಿಸಿ. ಪರೀಕ್ಷೆಗಳು ಮುಗಿಯುವವರೆಗೂ ದೂರದರ್ಶನ ಮತ್ತು ಮೊಬೈಲ್ನಿಂದ ಸಾಧ್ಯವಾದಷ್ಟು ದೂರವಿರಿಸಿ. ವಿದ್ಯಾರ್ಥಿ ಯಶಸ್ಸಿಗೆ ಪೋಷಕರ ಬೆಂಬಲ ಮತ್ತು ಸಹಕಾರ ಅಗತ್ಯ ಎಂಬದನ್ನು ನೆನಪಿನಲ್ಲಿಡಿ. ನಿಮ್ಮ ಪ್ರೀತಿ, ಕಾಳಜಿ, ಬೆಂಬಲ ಮತ್ತು ಧೈರ್ಯ ಪರೀಕ್ಷೆ ಬರೆಯುವ ಮಕ್ಕಳಿಗೆ ಅಗತ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಮನವಿ ಮಾಡಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";