ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇ ಸ್ವತ್ತು ನೀಡಲು ಲಂಚ ಪಡೆದಿದ್ದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹಾದ್ರೀಪುರ ಗ್ರಾಮ ಪಂಚಾಯತಿ ಪಿಡಿಓ ಶಿವಾನಂದ ಮರಕೇರಿ ಅಮಾನತು ಗೊಂಡಿದ್ದಾರೆ.
ಲಂಚ ಸ್ವೀಕರಿಸಿರುವುದನ್ನು ಒಪ್ಪಿಕೊಂಡು ತಪ್ಪಾಯ್ತು ಎಂದು ಕ್ಷಮೆ ಕೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಫುಲ್ ವೈರಲ್ ಆಗಿತ್ತು.
ಹಾದ್ರೀಪುರ ಗ್ರಾಮ ಪಂಚಾಯತಿ ಪಿಡಿಓ ಶಿವಾನಂದ ಮರಕೇರಿ ಅವರು ಇ ಸ್ವತ್ತು ನೀಡಲು ಲಂಚ ಪಡೆದಿರುವ ಕುರಿತು ಈ ಹಿಂದೆ ಪತ್ರಿಕೆಗಳಲ್ಲಿ ವರದಿ ಆಗಿತ್ತು.
ಈ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಡಾ.ಎನ್ ಅನುರಾಧಾ ಅವರು ಪಿಡಿಓ ಶಿವಾನಂದ ಮರಕೇರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆ ಆಗಿದ್ದೇನೆ ಕೂಡಲೇ ಇ ಸ್ವತ್ತು ತೆಗೆದುಕೊಂಡು ಹೋಗಿ ಎಂದು ಹಣಕ್ಕೆ ಬೇಡಿಕೆ ಇಟ್ಟು 10 ಸಾವಿರ ಹಣವನ್ನ ಸ್ನೇಹಿತನಿಗೆ ಫೋನ್ ಪೇ ಮಾಡಿಸಿಕೊಂಡಿರುವುದಾಗಿ ತಿಳಿದುಬಂದಿತ್ತು.
ಸಾಕ್ಷಿ ಸಮೇತ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಪಿಡಿಓ ಅವರಿಗೆ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಪಿಡಿಓ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದರು.
ಈ ಮೊದಲು ಕೂಡ ಪಿಡಿಓ ಅವರು ಇ-ಖಾತಾ ಮಾಡಿಕೊಡಲು ಹಾದ್ರೀಪುರ ಗ್ರಾಮಸ್ಥರಿಂದ ಲಂಚ ಪಡೆದು ಖಾತೆ ಮಾಡಿಕೊಡದೇ ಅಲೆದಾಡಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಈ ಕುರಿತು ಶಾಸಕ ಧೀರಜ್ ಮುನಿರಾಜ್ ಅವರ ಗಮನಕ್ಕೂ ಬಂದಿತ್ತು. ಶಾಸಕರು ಪಿಡಿಓ ಅವರಿಗೆ ಎಚ್ಚರಿಕೆ ಕೂಡ ಮಾಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಈ ಪಿಡಿಓ ಮತ್ತೆ ಲಂಚದ ಹುತ್ತಕ್ಕೆ ಕೈಹಾಕುತ್ತಲೇ ಬಂದಿದ್ದರು. ಪ್ರಸ್ತುತ ಇವರು ಹಾದ್ರೀಪುರ ಪಂಚಾಯ್ತಿಯಿಂದ ಬೇರೆಡೆಗೆ ವರ್ಗಾವಣೆ ಗೊಂಡಿದ್ದರು.

