ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸೂತಕದವರು….
ಉಪವಾಸ ಚಳುವಳಿ ಸತ್ಯಾಗ್ರಹ
ದಾಖಲೆಗಳು ಗಾಂಧಿ
ಆಂಗ್ಲರ ಬಂಧನ ಕಳಚಿಸಿದ ಮಹಾತ್ಮ
ನಡೆದಾಡುವ ದೈವ ನೀ
ನಮ್ಮಯ ಸಲಾಮುಗಳು ನಿನಗೆ
ಅಲ್ಲಿಂದ ಇಲ್ಲಿಯವರೆಗೆ
ಲೆಕ್ಕವಿಡದಷ್ಟು ಉಪವಾಸಗಳು
ನಿಖರವಾಗಿ ನಡೆಸಿದ ಚಳುವಳಿಗಳು
ನೀರ ಮೇಲಿನ ಹೆಜ್ಜೆಗಳೇ
ಅರೆ ಬೆತ್ತಲೆಯಲಿ ಉರುಳಿದ್ದೇವೆ
ನಮ್ಮಯ ತೊಗಲುಗಳ ತಮಟೆಯಾಗಿಸಿದ್ದೇವೆ
ಇನ್ನೂ ಕತ್ತಲಲ್ಲಿಯೇ ಬಿದ್ದಿದ್ದೇವೆ
ಊರ ಕಸ ಹೇಲು ಹುಚ್ಚೆ ಕೊಚ್ಚೆ
ತುತ್ತಿಗಾಗಿ ಕೊಟ್ಟ ಕೆಲಸಗಳು
ಮುತ್ತು ಕಟ್ಟಿಸಿ ದೇವದಾಸಿ
ಊರಿಗೆ ಮೈ ಹಾಸೋ ಮದುಮಗಳು
ಅಪ್ಪನ ಹೆಸರಿಲ್ಲದ ಅನಾಥ ಹುಟ್ಟುಗಳು
ದಮ್ಮ ದಾರಿಗೆ ಮುಳ್ಳಾದವರ
ನೀನೇಕೆ ಹಿಡಿದಿಡಲಿಲ್ಲ
ದಯೆ ಕರುಣೆಗೂ ಎಟುಕದ
ಕುರಿ ಕೋಳಿಗಳ ಕಥೆಗೆ
ಭಾರತವೇ ಮುನ್ನುಡಿ ಬರೆಯಲಿ
ಗಾಂಧಿ ಇಂದಿಗೂ ನಮ್ಮಯ ಸ್ಥಿತಿ
ಉತ್ತಿ ಬಿತ್ತಲು ಬಳಸಿ
ಸಣಕಲಾದ ಮೇಲೆ
ಮಾಂಸಕ್ಕೆ ಮಾರಾಟವಾಗುವ
ದನಗಳ ಗತಿಯ ಹಾಗೆ
ಕವಿತೆ:ಕುಮಾರ್ ಬಡಪ್ಪ

