ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಿರಿಯೂರಿನಲ್ಲಿ ಕಳೆದ ತಿಂಗಳು ನಡೆದ ಶಕ್ತಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಜಪ್ತಿ ಮಾಡಿದ ವಾಹನ(ಸಂ. ಕೆಎ-೫೨ ಬಿ-೦೯೨೭) ಬಿಡಿಸಿಕೊಂಡು ಬರಲು ಠಾಣೆಗೆ ಹೋದಾಗ ಅಲ್ಲಿನ ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ಪೇದೆ ಅಲ್ಲಾಭಕ್ಷಿ ಇವರುಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಗೌರವವಾಗಿ ನಡೆದುಕೊಂಡಿದ್ದಾರೆ.
ಇವರುಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದದಿಂದ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಡಿಜೆ ಮೆರವಣಿಗೆಯಲ್ಲಿ ಸುನಿಲ್ಕುಮಾರ್ರವರಿಗೆ ಸೇರಿದ ವಾಹನ ವಶಕ್ಕೆ ಪಡೆದಿರುವುದನ್ನು ಬಿಡಿಸಿಕೊಂಡು ಬರುವುದಕ್ಕಾಗಿ ಠಾಣೆಗೆ ಹೋದ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ಕೋರ್ಟ್ ಪಿ.ಸಿ. ಅಲ್ಲಾಭಕ್ಷಿ ಇವರುಗಳು ನಮ್ಮನ್ನು ಗದರಿಸಿ ಏಕವಚನದಲ್ಲಿ ಮಾತನಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.
ಪೊಲೀಸ್ ಜನಸ್ನೇಹಿಯಾಗಿರಬೇಕೆ ವಿನಃ ದೌರ್ಜನ್ಯವೆಸಗುವುದು ಸರಿಯಲ್ಲ. ಹಾಗಾಗಿ ಇವರುಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದದ ರಾಜ್ಯ ಸಂಚಾಲಕ ಕೆ.ಮಂಜುನಾಥ ಹೆಗ್ಗೆರೆ ಜಿಲ್ಲಾ ರಕ್ಷಣಾಧಿಕಾರಿಯವರಲ್ಲಿ ವಿನಂತಿಸಿದರು.
ಜಿಲ್ಲಾಧ್ಯಕ್ಷ ಕೋದಂಡರಾಮ, ಉಪಾಧ್ಯಕ್ಷ ಪ್ರಸಾದ್, ಹೆಚ್.ಎನ್.ವೇಣು, ರಾಜ್ಯ ಉಪಾಧ್ಯಕ್ಷ ಚಂದ್ರಪ್ಪ, ನಾಗೇಂದ್ರ, ಭಾಗ್ಯಮ್ಮ ಇವರುಗಳು ಈ ಸಂದರ್ಭದಲ್ಲಿದ್ದರು.

