ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬಡವರ ಹೊಟ್ಟೆ ತುಂಬಿಸುವುದಕ್ಕಾಗಿ ರಾಜ್ಯ ಸರ್ಕಾರ ಉಚಿತವಾಗಿ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ನ್ಯಾಯಬೆಲೆ ಅಂಗಡಿಗಳ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಜೈಹಿಂದ್ ರಕ್ಷಣಾ ವೇದಿಕೆಯಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಿಗ್ಗೆ ೮ ರಿಂದ ಮಧ್ಯಾಹ್ನ ಒಂದು ಗಂಟೆ ಹಾಗೂ ಸಂಜೆ ನಾಲ್ಕರಿಂದ ಎಂಟು ಗಂಟೆಯತನಕ ಪಡಿತರ ಧಾನ್ಯಗಳನ್ನು ವಿತರಿಸಬೇಕೆಂಬ ನಿಯಮವಿದೆ. ನ್ಯಾಯಬೆಲೆ ಅಂಗಡಿಗಳವರು ಯಾವ ಮಾನದಂಡವನ್ನು ಪಾಲಿಸದಿರುವುದರಿಂದ ಪಡಿತರ ಚೀಟಿದಾರರು ತೊಂದರೆ ಅನುಭವಿಸುವಂತಾಗಿದೆ. ಯಾವ ಸಮಯದಲ್ಲಿ ಅಕ್ಕಿ ನೀಡುತ್ತಾರೆಂಬುದೇ ಗೊತ್ತಾಗುವುದಿಲ್ಲ. ಒಂದು ಪಡಿತರ ಚೀಟಿಗೆ ೨೦ ರಿಂದ ೩೦ ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ತೂಕದಲ್ಲಿಯೂ ವಂಚನೆಯಾಗುತ್ತಿದೆ.
ನ್ಯಾಯಬೆಲೆ ಅಂಗಡಿಯ ಆಡಿಟ್ಗಳನ್ನು ಪರಿಶೀಲಿಸಿ ಅಕ್ರಮ ಎಸಗುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸುವಂತೆ ಜೈಹಿಂದ್ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಸೈಯದ್ ಅಶ್ವಕ್ ಅಹಮದ್ ಒತ್ತಾಯಿಸಿದರು. ತೋಫಿಕ್, ನಿರಂಜನಮೂರ್ತಿ, ರಮೇಶ, ಅನ್ವರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.

