ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಂಜಾನೆ ನವದೆಹಲಿಗೆ ಪ್ರಯಾಣ ಮಾಡುತ್ತಿದ್ದ ವೇಳೆಯಲ್ಲಿ ವಿಮಾನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜೊತೆ ಕೆಲ ಸಮಯ ಕಳೆಯುವ ಅವಕಾಶ ದೊರೆಯಿತು ಎಂದು ಸಂಸದ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಉತ್ತಮ ಜ್ಞಾನಿಗಳ ಜೊತೆ ಮಾತನಾಡಿದರೆ ಒಂದು ಪುಸ್ತಕ ಓದಿದಂತೆ ಎಂಬ ಮಾತಿದೆ. ಆದರೆ ಸನ್ಮಾನ್ಯ ದೇವೇಗೌಡರಂತಹ ಸುದೀರ್ಘ ಅನುಭವ, ಅಪಾರ ಜ್ಞಾನವಿರುವ ವ್ಯಕ್ತಿಯ ಜೊತೆ ಮಾತನಾಡಿದರೆ ಒಂದು ಗ್ರಂಥಾಲಯವನ್ನೇ ಜೀರ್ಣಿಸಿಕೊಂಡತೆ ಎಂದರೆ ಅದು ಅತಿಶಯೋಕ್ತಿ ಆಗಲಾರದು ಎಂದು ಅವರು ತಿಳಿಸಿದ್ದಾರೆ.
ಆಧ್ಯಾತ್ಮಿಕ ಪುಸ್ತಕವೊಂದನ್ನು ಓದುತ್ತಿದ್ದ ಅವರನ್ನ ನಿಧಾನವಾಗಿ ಮಾತಿಗೆ ಎಳೆದಾಗ ಅವರ ಸ್ಮೃತಿ ಪಟಲದಿಂದ ಜ್ಞಾನಗಂಗೆಯೇ ಹರಿಯಿತು. 1962ರಿಂದ ಇಂದಿನವರೆಗೂ ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಬದುಕಿನಲ್ಲಿ ಅವರು ನಡೆದು ಬಂದ ದಾರಿ, ಕಂಡ ಏಳು-ಬೀಳುಗಳು, ಅವರ ಅನುಭವಕ್ಕೆ ಬಂದ ವ್ಯಕ್ತಿತ್ವಗಳು, ಮರೆಯಲಾಗದ ಘಟನೆಗಳು ಇವೆಲ್ಲವನ್ನೂ ಕೇಳುತ್ತಾ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ದೇವರಾಜು ಅರಸು ಅವರು ಕರ್ನಾಟಕ ಕಂಡಂತಹ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿ ಎಂದು ಅವರು ಬಣ್ಣಿಸಿದ್ದು ಅರಸು ಅವರ ಬಗ್ಗೆ ಇನ್ನಷ್ಟು ಓದಿ, ಕೇಳಿ ತಿಳಿಯುವ ಕುತೂಹಲ ಮೂಡಿಸಿತು ಎಂದು ಸುಧಾಕರ್ ತಿಳಿಸಿದ್ದಾರೆ.
ನೀರಾವರಿ ಬಗ್ಗೆ ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಿದ ರೀತಿಯಂತೂ ನನ್ನನ್ನ ಮಂತ್ರ ಮುಗ್ಧಗೊಳಿಸಿತು. 1969ರ ಬಚಾವತ್ ಆಯೋಗದ ವರದಿಯಿಂದ ಹಿಡಿದು ಅನೇಕ ವಿಚಾರಗಳನ್ನು ಹಲವು ಆಯಾಮಗಳಿಂದ ಎಳೆಎಳೆಯಾಗಿ ಬಿಡಿಸಿ ವಿವರಿಸಿದ ಅವರ ಜ್ಞಾಪಕ ಶಕ್ತಿ, ವಿಷಯಾಸಕ್ತಿ, ಈ ಇಳಿ ವಯಸ್ಸಿನಲ್ಲೂ ನಾಡಿನ ರೈತರು, ಜನಸಾಮಾನ್ಯರ ಬಗ್ಗೆ ಅವರಿಗಿರುವ ಕಾಳಜಿ, ಬದ್ಧತೆ ನಿಜಕ್ಕೂ ಅನುಕರಣೀಯ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆ ತರುವ ನನ್ನ ಹೆಬ್ಬಯಕೆಯನ್ನು ಹಂಚಿಕೊಂಡಾಗ ಸನ್ಮಾನ್ಯ ದೇವೇಗೌಡರು ಅನೇಕ ಸಲಹೆಗಳನ್ನು ನೀಡಿದರು. ಬಯಲುಸೀಮೆ ಭಾಗದ ರೈತಾಪಿ ವರ್ಗ ಹಾಗೂ ಜನಸಾಮಾನ್ಯರ ಈ ಬಹುಕಾಲದ ಬೇಡಿಕೆಯನ್ನು ಸಾಕಾರಗೊಳಿಸಲು ಅವರ ಬೆಂಬಲ, ಮಾರ್ಗದರ್ಶನ ಕೋರಿ ಆಶೀರ್ವಾದ ಪಡೆದೆ.
ವಿಮಾನ ಪ್ರಯಾಣದ ವೇಳೆ ನನ್ನ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಕೊಂಚವೂ ಬೇಸರ ಮಾಡಿಕೊಳ್ಳದೆ ಅತ್ಯಂತ ಪ್ರೀತಿ, ವಿಶ್ವಾಸದಿಂದ ಉತ್ತರಿಸಿ ತಮ್ಮ ಅನುಭವ, ಜ್ಞಾನವನ್ನ ಹಂಚಿಕೊಂಡ ಹಿರಿಯರಾದ ದೇವೇಗೌಡರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ತಮ್ಮಂತಹ ಮುತ್ಸದ್ಧಿಯನ್ನ ಪಡೆದ ನಮ್ಮ ಕನ್ನಡ ನಾಡು ನಿಜಕ್ಕೂ ಧನ್ಯ ಎಂದು ಡಾ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.