ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜನವರಿ-25 ರಂದು ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮಕ್ಕೆ ತಮ್ಮ ಕುಲಬಳ್ಳಿಗಳನ್ನು ನೋಡಿ ಕಣ್ತುಂಬಿಕೊಳ್ಳಲು ತಮಿಳು ನಾಡಿನ ಕುಂಚಿಟಿಗ ಬಂಧುಗಳು ಆಗಮಿಸುತ್ತಿದ್ದು ಅವರಿಗೆ ಹರಿಯಬ್ಬೆ ಗ್ರಾಮಸ್ಥರಿಂದ ಗೌರವ ಸತ್ಕಾರ್ಯ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಮೈಸೂರ್ ಶಿವಣ್ಣ ತಿಳಿಸಿದರು.
ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಕುಂಚಿಟಿಗ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹರಿಯಬ್ಬೆ ಗ್ರಾಮದಲ್ಲಿ ಶಿವೈಕ್ಯರಾಗಿರುವ ಕುಂಚಿಟಿಗ ಆವಿನ ಕುಲದ ಆವಿನ ಕಾಮರಾಯರ ಜೀವ ಸಮಾಧಿ, ಏಳು ಮಂದಕ್ಕಗಳ ದೇವಸ್ಥಾನ, ಕರಿಯಮ್ಮ ದೇವಿಯ ದೇವಸ್ಥಾನ ಸೇರಿದಂತೆ ಇತರೆ ಕುಂಚಿಟಿಗ ಕುಲ ದೇವತೆಗಳ ದರ್ಶನಕ್ಕಾಗಿ ತಮಿಳುನಾಡು ಬಂಧು ಆಗಮಿಸುತ್ತಿದ್ದಾರೆಂದು ಶಿವಣ್ಣ ತಿಳಿಸಿದರು.
ಕುಂಚಿಟಿಕ ಸಮಾಜದ ಮಕ್ಕಳ ಶಿಕ್ಷಣ, ಸಂಸ್ಕಾರ, ಮೌಲ್ಯ ಇಂತಹ ದೂರ ದೃಷ್ಟಿಯ ಕಾರಣಕ್ಕಾಗಿ ತಮಿಳುನಾಡು ಕುಂಚಿಟಿಗರು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೂ ಆಗಮಿಸುತ್ತಿದ್ದಾರೆ. ಅದೇ ರೀತಿ ಕರ್ನಾಟಕದ ಕುಂಚಿಟಿಗರು ತಮಿಳು ನಾಡಿನ ಕುಲದೇವತೆಗಳ ಆಶೀರ್ವಾದ ಮತ್ತು ಸಮಾಜ ಬಾಂಧವರ ಜೊತೆ ಸಮ್ಮಿಲನಕ್ಕಾಗಿ ಫೆಬ್ರವರಿ ತಿಂಗಳಲ್ಲಿ ಪ್ರವಾಸ ಹೋಗಲಿದ್ದೇವೆ ಎಂದು ತಿಳಿಸಿದರು.
ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮಕ್ಕೆ ತಮಿಳುನಾಡಿನ 180ಕ್ಕೂ ಹೆಚ್ಚಿನ ಕುಂಚಿಟಿಗರು ಆಗಮಿಸಲಿದ್ದು ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಶಿವಣ್ಣ ತಿಳಿಸಿದರು.
ಕಸವನಹಳ್ಳಿ ರಮೇಶ್ ಮಾತನಾಡಿ ಕುಂಚಿಟಿಗ ಬುದ್ಧಿಜೀವಿಗಳು, ಆರ್ಥಿಕವಾಗಿ ಒಂದಿಷ್ಟು ಸಬಲರಾಗಿರುವವರು ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತಿಲ್ಲ. ತಮ್ಮ ತಮ್ಮ ರಾಜಕಾರಣ ವ್ಯವಹಾರ, ಕೃಷಿ, ವೃತ್ತಿ, ಕುಟುಂಬದ ಅಭಿವೃದ್ಧಿಗೆ ಮಾತ್ರ ಸಮಾಜ ಬಳಸಿಕೊಳ್ಳುತ್ತಾರೆ. ಸಮಾಜದ ಹಿಂದುಳಿದವರ ಬಗ್ಗೆ ತಿರಸ್ಕಾರ ಭಾವದಿಂದ ನೋಡುತ್ತಾರೆ. ಇವರನ್ನು ಮಾತನಾಡಿಸಿದರೆ ಎಲ್ಲಿ ಸಹಾಯ ಕೇಳುತ್ತಾರೋ ಎಂದು ದೂರ ಇಡುತ್ತಾರೆ. ಚುನಾವಣೆ ಬಂದಾಗ ಮಾತ್ರ ನಾವು ನಮ್ಮವರು ಒಗ್ಗಟ್ಟಾಗಿರಬೇಕು ಎಂದು ಭಾವಾನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಾರೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಕೆ ಜಿ ಹನುಮಂತರಾಯ ಮಾತನಾಡಿ ಕುಂಚಿಟಿಗ ಕುಲಬಾಂಧವರಿಗೆ ಉಟೋಪಚಾರಗಳನ್ನು ಜಿಲ್ಲಾ ಕುಂಚಿಟಿಗ ಸಂಘದ ಜಿಲ್ಲಾಧ್ಯಕ್ಷ ಜಿ.ಚಂದ್ರಯ್ಯ, ಪ್ರಧಾನ ಕಾರ್ಯದರ್ಶಿ ಹರಿಯಬ್ಬೆ ಹೆಂಜಾರಪ್ಪ ಸೇರಿದಂತೆ ಮತ್ತಿತರ ಸ್ನೇಹಿತರು ಹೊಣೆ ಹೊತ್ತಿದ್ದಾರೆ ಎಂದು ತಿಳಿಸಿದರು.
ಅಂದಿನ ಹರಿಯಬ್ಬೆ ನಡೆಯಲಿರುವ ಮಹತ್ವದ ಕಾರ್ಯಕ್ರಮದಲ್ಲಿ ಶಾಸಕ ಟಿ.ಬಿ ಜಯಚಂದ್ರ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ಚಿದಾನಂದಗೌಡ ಸೇರಿದಂತೆ ಸಮಾಜದ ಇತರೆ ಗಣ್ಯರನ್ನು ಆಹ್ವಾನಿಸಲಾಗುತ್ತದೆ ಎಂದು ಕೆಜಿ ಹನುಮಂತರಾಯ ತಿಳಿಸಿದರು.
ಸಂಘಟನಾ ಕಾರ್ಯದರ್ಶಿ ದಿಂಡವರ ಚಂದ್ರಗಿರಿ, ಖಜಾಂಚಿ ಕಾತ್ರಿಕೇನಹಳ್ಳಿ ಮಂಜುನಾಥ್, ಉಪಾಧ್ಯಕ್ಷೆ ಭಾರತಿ, ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ, ಕ್ಯಾಲೆಂಡರ್ ಸಮಿತಿ ಅಧ್ಯಕ್ಷ, ಗುಡಿ ಗೌಡ ಚಿಲ್ಲಹಳ್ಳಿ ನಿಜಲಿಂಗಪ್ಪ, ರೈತ ಸಂಘದ ಯುವಾಧ್ಯಕ್ಷ ಯಳನಾಡು ಚೇತನ್, ಗೌರವಾಧ್ಯಕ್ಷ ಗಡಾರಿ ಕೃಷ್ಣಪ್ಪ, ಜಿಲ್ಲಾ ಸಮಿತಿ ಪದಾಧಿಕಾರಿ ದೇವರಾಜ್ ಮೇಷ್ಟ್ರು ಇತರರು ಉಪಸ್ಥಿತರಿದ್ದರು.

