ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೈರಸಂದ್ರ ಗ್ರಾಮದಲ್ಲಿ ಹಂದಿ ತ್ಯಾಜ್ಯ ವಾಸನೆಯಿಂದ ಗ್ರಾಮಸ್ಥರು ರೋಸಿಹೋಗಿದ್ದು ಗ್ರಾಮಸ್ಥರು ಸಮಸ್ಯೆ ಬಗೆಹರಿಸುವಂತೆ ದೊಡ್ಡತುಮಕೂರು ಗ್ರಾಮಪಂಚಾಯಿತಿ ಕಾರ್ಯಲಯಕ್ಕೆ ಬಹಳಷ್ಟು ಬಾರಿ ಅರ್ಜಿ ಸಲ್ಲಿಸಿದ್ದರು. ಸ್ಥಳೀಯ ಗ್ರಾಮಪಂಚಾಯಿತಿ ಸಹ ಹಂದಿಸಾಕಣೆ ಮಾಡುತ್ತಿರುವ ಮಾಲಿಕರಿಗೆ ವಾಸನೆ ತಡೆಗಟ್ಟಲು ಹಾಗೂ ಸ್ವಚ್ಚತೆ ಕಾಪಾಡುವಂತೆ ಪತ್ರಮುಖೇನ ತಿಳಿಸಿದ್ದರು. ಆದರೇ ಹಂದಿ ಮಾಲಿಕರು ಇದಕ್ಕೆ ಸೊಪ್ಪು ಹಾಕದ ಹಿನ್ನಲೆಯಲ್ಲಿ ತಾಲ್ಲೂಕಿನ ದಂಡಾದಿಕಾರಿಗಳಿಗೆ ಹಾಗೂ ಮುಖ್ಯಕಾರ್ಯನಿರ್ವಹಣಾ ಕಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದ್ದರು.
ಬೈರಸಂದ್ರ ಗ್ರಾಮದ ಬಹಳಷ್ಟು ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ತಾಲ್ಲೂಕು ಕಛೇರಿಯ ಬಳಿ ಸಮಸ್ಯೆ ಬಗೆಹರಿಸುವಂತೆ ಧರಣಿ ಮಾಡಿ ತಾಲ್ಲೂಕು ದಂಡಾದಿಕಾರಿಗಳಿಗೆ ಅರ್ಜಿ ಸಹ ನೀಡಿದ್ದರು. ಸಮಸ್ಯೆಯ ಗಂಭೀರತೆಯನ್ನು ಅರಿತ ತಾಲ್ಲೂಕು ದಂಡಾದಿಕಾರಿಗಳು ಹಾಗೂ ತಾಲ್ಲೂಕು ಮುಖ್ಯಕಾರ್ಯನಿರ್ವಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಅಲ್ಲಿ ಹಂದಿ ತ್ಯಾಜ್ಯದ ದುರ್ನಾತ ತಡೆ ಸ್ವಚ್ಚತೆ ಕಾಪಾಡದ ಹಾಗೂ ವೈಜ್ಞಾನಿಕ ರೀತಿಯಲ್ಲಿ ಹಂದಿಸಾಕಣೆ ಮಾಡದ ಹಂದಿ ಮಾಲಿಕರನ್ನ ತರಾಟೆಗೆ ತಗೆದುಕೊಂಡರು. ಹಂದಿ ಮಾಲಿಕರು ಹಲವಾರು ರೀತಿಯಲ್ಲಿ ಅಲ್ಲಿನ ಪರಿಸ್ಥಿತಿಯನ್ನ ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದರು.
ಈ ವಿಚಾರದ ಬಗ್ಗೆ ಹಂದಿಮಾಲಿಕರು ರಾಜ್ಯ ಹೈ ಕೋರ್ಟಿನಲ್ಲಿ ಪಿಟಿಷನ್ ಹಾಕಿದ್ದು ಮಾನ್ಯಕೋರ್ಟು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಮಸ್ಯೆ ಪರಿಶೀಲಿಸಿ ವರದಿ ನೀಡುವಂತೆ ಆದೇಶ ನೀಡಿರುವ ಕಾರಣ ಸ್ಥಳದಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿ ಪರಿಶೀಲನೆ ಮಾಡಿ ವರದಿ ನೀಡುವಂತೆ ತಿಳಿಸಿದರು.
ತಾಲ್ಲೂಕು ದಂಡಾದಿಕಾರಿಗಳ ಹಾಗೂ ಮುಖ್ಯ ಕಾರ್ಯನಿರ್ವಾಧಿಕಾರಿಗಳ ಭೇಟಿಯಿಂದ ಬೈರಸಂದ್ರ ಗ್ರಾಮಸ್ಥರು ಸಮಸ್ಯೆ ಬಗೆಹರಿಯಬಹುದೆಂದು ವಿಶ್ವಾಸದಲ್ಲಿದ್ದಾರೆ. ಸೋಮವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಲಿದ್ದು ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿದ್ದಾರೆ.

