ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಿರುತೆರೆ ನಟ ಮಡೆನೂರು ಮನು ವಿರುದ್ಧ ಕಿರುತೆರೆ ನಟಿ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದು ಈ ಸಂಬಂಧ ನಟನ ವಿರುದ್ಧ ಎಫ್ಐಆರ್(FIR) ದಾಖಲಾಗಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಿರುತೆರೆ ನಟಿಯೊಬ್ಬರು ಮನು ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ದೂರು ನೀಡಿದ್ದಾರೆ.
ಪ್ರಸ್ತುತ ಪೊಲೀಸರು ಅತ್ಯಾಚಾರಕ್ಕೊಳಗಾದ ಸಂತಸ್ತೆ ನಟಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ನಟ ಮಡೆನೂರು ಮನು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಮನುಗಾಗಿ ಹುಡುಕಾಟ ನಡೆದಿದೆ.
ಸಂತಸ್ತೆ ನಟಿ ಆರೋಪಿಸಿರುವಂತೆ ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಮಡೆನೂರು ಮನುಗೆ ಕಿರುತೆರೆ ನಟಿ ಪರಿಚಯ ಆಗಿದೆ. ಆ ಬಳಿಕ ಇವರ ಮಧ್ಯೆ ಗೆಳೆತನ ಬೆಳೆದಿದೆ. ನನ್ನ ಮೇಲೆ ಮನು ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಬಲವಂತವಾಗಿ ನನ್ನ ನಗ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ನಟಿ ಆರೋಪಿಸಿ ದೂರು ನೀಡಿದ್ದಾರೆ.
ಸಂತಸ್ತೆಗೆ ಮನು ನಾಗರಭಾವಿಯಲ್ಲಿ ಬಾಡಿಗೆ ಮನೆ ಹುಡುಕಿಕೊಟ್ಟಿದ್ದ. 2018ರಿಂದಲೂ ಮನುವಿನ ಪರಿಚಯ ಸಂತ್ರಸ್ತೆಗೆ ಇತ್ತು. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು. ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು. ಒಮ್ಮೆ ಶಿಕಾರಿಪುರಕ್ಕೆ ಹೋದಾಗ ಹೋಟೆಲ್ ರೂಂಗೆ ಮನು ನಟಿಯನ್ನು ಕರೆಸಿಕೊಂಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ. ಈ ವೇಳೆ ಅವರು ಎರಡು ಸಲ ಪ್ರೆಗ್ನೆಂಟ್ ಕೂಡ ಆಗಿದ್ದರು. ಆ ಬಳಿಕ ಮನು ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದರು ಎಂದು ನಟಿ ಆರೋಪಿಸಿದ್ದಾರೆ.
ಕಿರುತೆರೆ ನಟ ಮಡೆನೂರು ಮನುಗೆ ಮೊದಲೇ ವಿವಾಹವಾಗಿತ್ತು ಎನ್ನಲಾಗಿದೆ. ಮನುಗೆ ಮದುವೆ ಆಗಿ ಒಂದು ಮಗು ಕೂಡ ಇದೆ ಎಂದು ಹೇಳಲಾಗಿದೆ.
ನಟ ಮಡೆನೂರು ಮನು ಪ್ರಸ್ತುತ ಕುಲದಲ್ಲಿ ಕೀಳ್ಯಾವುದೋ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು ಸಿನಿಮಾ ರಿಲೀಸ್ ಸಂದರ್ಭದಲ್ಲಿಯೇ ನಟಿ ದೂರು ನೀಡಿರುವುದು ಚಿತ್ರ ಬಿಡುಗಡೆಗೆ ತೀವ್ರ ಹಿನ್ನಡೆಯಾದಂತಾಗಿದೆ.
ಕುಲದಲ್ಲಿ ಕೀಳ್ಯಾವುದೋ ಚಿತ್ರ ಮೇ 23ರಂದು ಬಿಡುಗಡೆ ಆಗುತ್ತಿದೆ. ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ.