ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ನಗರದ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಮಧ್ಯಾಹ್ನ 1.45 ರ ಸಮಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಮಂಗಳವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಆರಂಭಗೊಂಡಿದ್ದವು. ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿದ್ದ ಶಿವಧನುಸ್ಸನ್ನು ಹೊರತೆಗೆದು ಸಮೀಪದ ವೇದಾವತಿ ನದಿಗೆ ತೆಗೆದುಕೊಂಡು ಹೋಗಿ ಗಂಗಾ ಸ್ನಾನ ಮಾಡಿಸಿ ದೇವಾಲಯಕ್ಕೆ ತರಲಾಯಿತು.
ಅನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವಿವಿಧ ಹೂವುಗಳು, ಬಣ್ಣ ಬಣ್ಣದ ಬಟ್ಟೆ, ಬೃಹತ್ ಗಾತ್ರದ ಹಾರಗಳಿಂದ ಅಲಂಕಾರಗೊಂಡ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ಮುಜರಾಯಿ ಅಧಿಕಾರಿ ಹಾಗೂ ತಹಸೀಲ್ದಾರ್ ಎಂ. ಸಿದ್ದೇಶ್ ಪೂಜೆ ನೇರವೇರಿಸಿದರು.

ನಂತರ ಭಕ್ತರ ಸಮ್ಮುಖದಲ್ಲಿ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ನೂರಾರು ಭಕ್ತಾದಿಗಳು ಹರ ಹರ ಮಹಾದೇವ ಎಂದು ದೇವರನ್ನು ಸ್ಮರಿಸುತ್ತಾ ರಥದ ಹಗ್ಗವನ್ನು ಹಿಡಿದು ಎಳೆಯವ ಮೂಲಕ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಬ್ರಹ್ಮ ರಥೋತ್ಸವ ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ವಾಸವಿ ರಸ್ತೆಯ ಮೂಲಕ ಸಿದ್ದನಾಯಕ ವೃತ್ತದವರೆಗೂ ತಲುಪಿತು.ಸಾವಿರಾರು ಭಕ್ತರು ಭಕ್ತಿಯಿಂದ ತೇರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.
ಬ್ರಹ್ಮರಥೋತ್ಸವದ ನಂತರ ಸಂಜೆ ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ಸ್ವಾಮಿ ರಥೋತ್ಸವವೂ ಸಹ ನಡೆಯಿತು.
ಸುಗಮ ರಥೋತ್ಸವಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಂಬೂಬಜಾರ್ ರಸ್ತೆ, ಟಿಟಿ.ರಸ್ತೆ, ದುರ್ಗಾಂಬಿಕಾ ರಸ್ತೆ, ಆಸ್ಪತ್ರೆ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಾಹನಗಳ ಪ್ರವೇಶ ಇಲ್ಲದಂತೆ ಮಾಡಲಾಗಿತ್ತು. ಬ್ಯಾರೀಕೇಡ್ ಗಳನ್ನು ಅಳವಡಿಸಿ ಭಕ್ತಾದಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಥ ಎಳೆಯುವ ಸಮಯದಲ್ಲಿ ಬಿಗಿ ಪೋಲಿಸ್ ವ್ಯವಸ್ಥೆ ಮಾಡಲಾಗಿತ್ತು.ತೇರು ಸಾಗುವ ರಸ್ತೆಯುದ್ಧಕ್ಕೂ ನೂರಾರು ಯುವಕರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.

ಸಚಿವ ಡಿ ಸುಧಾಕರ್ ರವರನ್ನು ಮುಖ್ಯರಸ್ತೆಯಿಂದ ದೇವಸ್ಥಾನದವರೆಗೆ ಅಲಂಕಾರಗೊಂಡ ಎತ್ತಿನಗಾಡಿಯಲ್ಲಿ ಕರೆತರಲಾಯಿತು.
ಜಾತ್ರೆಗೆ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ತಮ್ಮ ಭಕ್ತಿ ಮೆರೆದರು.
ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ನಡೆಯುವ ಮುಕ್ತಿ ಭಾವುಟ ಹರಾಜು ಎಷ್ಟು ಮೊತ್ತಕ್ಕೆ ಹೋಗಲಿದೆ ಎಂದು ಜನರಲ್ಲಿ ಕುತೂಹಲ ಕೆರಳಿಸಿತು. ಐದು ಲಕ್ಷದಿಂದ ಆರಂಭವಾದ ಹರಾಜು ಪ್ರಕ್ರಿಯೆಯು ಹಂತ ಹoತವಾಗಿ ಏರುತ್ತಾ ಹೋಗಿ ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರಿಗೆ 60 ಲಕ್ಷಕ್ಕೆ ಒಲಿಯಿತು.ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ 55 ಲಕ್ಷದವರೆಗೂ ಕೂಗಿ ಸುಮ್ಮನಾದರು.ಮುಕ್ತಿ ಬಾವುಟ ಪಡೆದರೆ ಉತ್ತಮ ಆರೋಗ್ಯ, ಸಂಪತ್ತು, ವ್ಯಾಪಾರ ವಹಿವಾಟು ವೃದ್ದಿಯಾಗುತ್ತದೆ ಎಂಬ ನಂಬಿಕೆ ಇರುವುದರಿಂದ ರಾಜಕಾರಣಿಗಳು, ಉದ್ಯಮಿಗಳು ಬಾವುಟ ಪಡೆಯಲು ಪೈಪೋಟಿ ನಡೆಸುತ್ತಾರೆ.
ರಥೋತ್ಸವ ಸಾಗಿದ ದಾರಿಯುದ್ದಕ್ಕೂ ಭಕ್ತರು ತಮ್ಮ ಹರಕೆಯ ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.
ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಬಾಳೆಹಣ್ಣುಗಳನ್ನು ರಥಕ್ಕೆ ತೂರುತ್ತಾರೆ.ಹಣ್ಣಿನ ಮೇಲೆ ತಮ್ಮ ಬೇಡಿಕೆ ಬರೆದು ಎಸೆಯುವುದು ವಾಡಿಕೆಯಾಗಿದೆ.
ಬಾಕ್ಸ್ :
ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ಮುಕ್ತಿ ಬಾವುಟವನ್ನು ಮುಸ್ಲಿಂ ಬಾಂಧವರಾದ ಶಕೀಲ್ ನವಾಜ್ 30 ಲಕ್ಷದ ವರೆಗೂ ಹರಾಜ್ ಕೂಗಿ ಪಡೆಯುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಮರೆಯಲಾಯಿತು.
ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹಾಗೂ ತಾಲೂಕಿನ ಜನತೆ ನಗರಸಭೆ ಮಾಜಿ ಅಧ್ಯಕ್ಷರು ಸದಸ್ಯರುಗಳು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರುಗಳು ಮಾಜಿ ಸದಸ್ಯರುಗಳು ಕಾಂಗ್ರೆಸ್ ಮುಖಂಡರು ಅಧ್ಯಕ್ಷರುಗಳು ಬಿಜೆಪಿ ಅಧ್ಯಕ್ಷರು ಮುಖಂಡರು ಜೆಡಿಎಸ್ ಅಧ್ಯಕ್ಷರು ಮುಖಂಡರುಗಳು ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ದೇವಸ್ಥಾನ ಕಮಿಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪೋಲಿಸ್ ಇಲಾಖೆ ಸಿಬ್ಬಂದಿ ವರ್ಗದವರು ನಗರಸಭೆ ಪೌರಕಾರ್ಮಿಕರು ನಗರಸಭೆ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ತಹಶೀಲ್ದಾರ್ ಸಿದ್ದೇಶ ಎಂ ,ರಾಜಸ್ವ ನಿರೀಕ್ಷಕ ಆಡಳಿತಾಧಿಕಾರಿ ಎಂಎನ್.ಸ್ವಾಮಿ, ನಗರ ಸಭೆಯ ಪೌರಾಯುಕ್ತ ಎ.ವಾಸೀಂ, ಅರ್ಚಕರು, ದೇವಸ್ಥಾನದ ಕೈವಾಡಸ್ತರು, ಭಕ್ತಾದಿಗಳು ಸಮಸ್ತ ನಾಗರಿಕರು ಜಾತ್ರೆ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

