ಪ್ರಚೋದನಕಾರಿ ವಿಡಿಯೋ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಮುಖಂಡನ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಅಜ್ಮೀರ್(ರಾಜಸ್ಥಾನ):
ಕಾನೂನಿನ ವಿರುದ್ಧ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿರುವ ಆರೋಪದಡಿ ಕರ್ನಾಟಕದ ಕಾಂಗ್ರೆಸ್​ ಮುಖಂಡ ಮತ್ತು ಮಾಜಿ ಪುರಸಭಾ ಸದಸ್ಯ​​ನನ್ನು ರಾಜಸ್ಥಾನದ ಅಜ್ಮೀರ್​ನಲ್ಲಿ ಪೊಲೀಸರು ಮಂಗಳವಾರ ಬಂಧಿಸಿ ಅಲ್ಲಿನ ಪೊಲೀಸರು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಬೀರ್ ಖಾನ್ ಬಂಧಿತ ಕಾಂಗ್ರೆಸ್ ಮುಖಂಡ. ದಾವಣಗೆರೆ ಜಿಲ್ಲೆಯ ಮಾಜಿ ಪುರಸಭೆ ಸದಸ್ಯ. ಸಾಮಾಜಿಕ ಮಾಧ್ಯಮದಲ್ಲಿ ವಕ್ಫ್​ ಕಾಯ್ದೆಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ಕರೆ ನೀಡಿದ್ದ ಆರೋಪ ಇವರ ಮೇಲಿದೆ. ಇವರು ಬಿಡುಗಡೆ ಮಾಡಿರುವ ವಿಡಿಯೋ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಬಂಧನ ಭೀತಿ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ಪೊಲೀಸರು, ತಂಡ ರಚಿಸಿ ರಾಜಸ್ಥಾನಕ್ಕೆ ತೆರಳಿ ಅಲ್ಲಿನ ಪೊಲೀಸರ ಸಹಾಯ ಪಡೆದು ಶೋಧ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿವಾದಿತ ವಿಡಿಯೋದಲ್ಲೇನಿದೆ?:
ಮುಸ್ಲಿಂ ಸಮುದಾಯವು ಈ ಕಾನೂನಿನ ವಿರುದ್ಧ ಬೀದಿಗಿಳಿದು ಹೋರಾಡಬೇಕು. ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡಬೇಕು. ಪೋಸ್ಟರ್​ಗಳು, ಅರ್ಜಿಗಳು ಸಲ್ಲಿಸುವುದರಿಂದ ಏನೂ ಪ್ರಯೋಜನವಿಲ್ಲ. ಅದಕ್ಕೂ ಮೀರಿ, ಬೇರೊಬ್ಬರ ಪ್ರಾಣ ಬಲಿಕೊಡಲೂ ಸಿದ್ಧವಾಗಿರಬೇಕು ಎಂದು ಹಿಂಸೆ ಸೃಷ್ಟಿಸುವ ಹೇಳಿಕೆಯನ್ನು ಕಬೀರ್ ಖಾನ್ ವಿಡಿಯೋದಲ್ಲಿ ಹರಿಬಿಟ್ಟ ಆರೋಪವಿದೆ.

ಕಾನೂನಿನ ವಿರುದ್ಧ ವಿನಾಶದಿಂದಲೇ ಹೋರಾಟ ನಡೆಸಿದಲ್ಲಿ ಗೆಲುವು ಸಾಧ್ಯ. ಇನ್ನೊಬ್ಬರ ಪ್ರಾಣ ಹರಣಕ್ಕೂ ಸಜ್ಜಾಗಿ” ಎಂದು ಮುಸ್ಲಿಂ ಸಮುದಾಯವನ್ನು ಪ್ರಚೋದಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್​​ ಮುಖಂಡ ಕಬೀರ್ ಖಾನ್ ಅಜ್ಮೀರ್​​ನಲ್ಲಿ ಇರುವುದನ್ನು ಕರ್ನಾಟಕ ಪೊಲೀಸರು ಪತ್ತೆ ಮಾಡಿದ್ದರು. ಸ್ಥಳೀಯ ಪೊಲೀಸರು ಕರ್ನಾಟಕ ಪೊಲೀಸರಿಗೆ ನೆರವು ನೀಡಿ, ವಕ್ಫ್​ ಕಾನೂನಿನ ವಿರುದ್ಧ ಪ್ರಚೋದನೆ ನೀಡಿದ ಆರೋಪಿಯನ್ನು ಬಂಧಿಸಿದ್ದಾರೆ. ಕಬೀರ್ ಖಾನ್​ನನ್ನು ಬಂಧಿಸಿ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ಅಜ್ಮೀರ್ ನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಜಂಗಿದ್ ಮಾಹಿತಿ ನೀಡಿದ್ದಾರೆ.

 

Share This Article
error: Content is protected !!
";