ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಣಂತಿಯರ ಪಾಲಿಗೆ ಇದು ಕೊಲೆಗಡುಕ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
ರಾಜ್ಯದಲ್ಲಿ ಬಾಣಂತಿಯರ ಸಾವು 30%ರಷ್ಟು ಇಳಿಕೆಯಾಗಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ,
ರಾಜ್ಯದಲ್ಲಿ ಕಳೆದ 9 ತಿಂಗಳಲ್ಲಿ, ಅಂದರೆ ಏಪ್ರಿಲ್ 2024ರಿಂದ ಡಿಸೆಂಬರ್ 2024ರ ರವರೆಗೆ ರಾಜ್ಯದಲ್ಲಿ 464 ಬಾಣಂತಿಯರ ಸಾವಾಗಿದ್ದು, ಇದರಲ್ಲಿ 70% ಸಾವುಗಳನ್ನು ತಡೆಯಬಹುದಾಗಿತ್ತು ಎಂದು ರಾಜ್ಯ ಮಟ್ಟದ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವಿಶ್ಲೇಷಣಾ ವರದಿ ಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಇವುಗಳಲ್ಲಿ 10 ಪ್ರಕರಣಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೆ ಕಾರಣ ಎಂದು ಹೇಳಲಾಗಿದ್ದರೆ, 68% ಪ್ರಕರಣಗಳಲ್ಲಿ ಬಾಣಂತಿಯರಿಗೆ ಸೋಂಕು ತಗುಲಿರುವುದೇ ಕಾರಣ ಎಂದು ಹೇಳಲಾಗಿದ್ದು, 70% ಅಂದರೆ ಸುಮಾರು 325 ಬಾಣಂತಿ ಮಹಿಳೆಯರ ಸಾವಿಗೆ ಸರ್ಕಾರವೇ ನೇರ ಕಾರಣ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಮಹಿಳೆಯರು ಬಲಿಯಾಗಬೇಕು ಸ್ವಾಮಿ? ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಸುರಕ್ಷತೆಯ ಗ್ಯಾರೆಂಟಿ ಯಾವಾಗ ಕೊಡುತ್ತೀರಿ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.