ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವಸ್ಥಾನ ಪ್ರವೇಶ ಟಿಕೆಟ್ ನಲ್ಲಿಯೂ ಲೂಟಿ ಹೊಡೆಯಲು ಹೊರಟಿದೆ ಈ ಕಾಂಗ್ರೆಸ್ ಸರ್ಕಾರ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ದರ್ಶನದ ಪ್ರವೇಶ ಟಿಕೆಟ್ ದರವನ್ನು 100 ರೂಪಾಯಿಗಳಿಂದ ಏಕಾಏಕಿ 500 ರೂಪಾಯಿಗೆ ಹೆಚ್ಚಳ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಿದೆ.
ಸಿಎಂ ಸಿದ್ದರಾಮಯ್ಯನವರೇ, ಹಿಂದೂಗಳು, ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಂದರೆ ನಿಮಗೆ ಯಾಕಿಷ್ಟು ದ್ವೇಷ? ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ಮೂಲಕ ದೇವಾಲಯಗಳು, ಮಠ ಮಾನ್ಯಗಳ ಭೂಮಿ ಕಬಳಿಸಿದ್ದಾಯ್ತು, ದೇವಸ್ಥಾನದ ಹುಂಡಿಗಳಿಗೆ ಕನ್ನ ಹಾಕಿದ್ದಾಯ್ತು, ಈಗ ದೇವಾಲಯಗಳಲ್ಲಿ ಪ್ರವೇಶ ದರ, ಸೇವಾ ಕಾಣಿಕೆ ದರ ಹೆಚ್ಚಿಸುವ ಮೂಲಕ ಮತ್ತೊಮ್ಮೆ ಹಿಂದೂಗಳ ಜೇಬಿಗೆ ಕತ್ತರಿ ಹಾಕುತ್ತಿದ್ದೀರಿ.
ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

