ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿನ್ನೆಯಷ್ಟೇ ವಿದ್ಯುತ್ ಬಿಲ್ ದರ ಏರಿಕೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ವಿದ್ಯುತ್ ಸ್ಮಾರ್ಟ್ ಮೀಟರ್ ಹೆಸರಿನಲ್ಲಿ 15,500 ಕೋಟಿ ಹಗರಣ ನಡೆಸುವ ಮೂಲಕ ಜನರ ಹಣ ಲೂಟಿ ಮಾಡಿರುವುದು ಬಯಲಾಗಿದೆ. ದೇಶದ ಇತರ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ 9,00 ರೂ ಪಾವತಿಸಿದರೆ, ನಮ್ಮ ರಾಜ್ಯದಲ್ಲಿ ಮಾತ್ರ ಬರೋಬ್ಬರಿ 8,510 ರೂ. ದರ ನಿಗದಿ ಮಾಡಿರುವುದು ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಜನಸಾಮಾನ್ಯರ ಮೇಲೆ ಒಂದಿಲ್ಲೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ 400-800 ರಷ್ಟು ದರ ಏರಿಕೆ ಮಾಡಿರುವುದು ಗ್ಯಾರಂಟಿ ನಂಬಿ ಮತ ನೀಡಿದ ನಾಡಿನ ಜನರ ದುರ್ದೈವವೇ ಸರಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದಪ್ಪ ಚರ್ಮದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಲೂಟಿಕೋರತನ ನಿಲ್ಲಿಸಿ ವಿದ್ಯುತ್ ಸ್ಮಾರ್ಟ್ ಮೀಟರ್ ದರವನ್ನು ಈ ಹಿಂದಿನಂತೆಯೇ ನಿಗದಿಪಡಿಸದಿದ್ದರೆ ಕರ್ನಾಟಕ ಬಿಜೆಪಿ ನಾಡಿನ ಜನಸಾಮಾನ್ಯರ ಪರವಾಗಿ ಹೋರಾಟಕ್ಕಿಳಿಯಲಿದೆ ಎಂದು ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.