ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“2 ವರ್ಷಗಳಲ್ಲಿ ಬ್ಯಾಡ್ ಬೆಂಗಳೂರು ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಸಾಧನೆ” ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿಯಂತೂ ಸಂಪೂರ್ಣ ಕಡೆಗಣಿಸಿದ ಪರಿಣಾಮವಾಗಿ ಮಳೆಬಂದಾಗಲೆಲ್ಲಾ ನಿತ್ಯ ನರಕದ ಪರಿಸ್ಥಿತಿ ಬಂದೊದಗಿಸಿ ಜನಸಾಮಾನ್ಯರು ನಿತ್ಯವೂ ಯಾತನೆ ಅನುಭವಿಸುವಂತೆ ಮಾಡಿ ರಾಜಧಾನಿಯ ಗೌರವ ಕುಸಿಯುವಂತೆ ಮಾಡಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಅಧಿಕಾರಕ್ಕೇರಿ ಎರಡು ವರುಷ ಕಳೆದರೂ ಒಂದೇ ಒಂದೂ ಅಭಿವೃದ್ಧಿ ಯೋಜನೆ ಜಾರಿ ಮಾಡದೇ, ಯಾವುದೇ ಆಶ್ವಾಸನೆಗಳನ್ನು ಈಡೇರಿಸದೇ, ನಿತ್ಯವೂ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ರಾಜ್ಯ ಸರ್ಕಾರ ಮಳೆಯಿಂದ ಸಂಕಷ್ಟಿತರಾಗಿರುವ ಜನರ ಕಷ್ಟ ಆಲಿಸುವ ಬದಲು ಆಡಂಬರದ ಜಾಹಿರಾತುಗಳು ಹಾಗೂ ಸಮಾವೇಶದ ಮೂಲಕ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಜನ ವಿರೋಧಿ ನಡೆಯಲ್ಲದೇ ಬೇರೇನೂ ಅಲ್ಲ.
ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿದ್ದ ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿಗಳು ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗದೆ ಬೆಂಗಳೂರು ಜನರಿಗೆ ನಿತ್ಯ ನರಕ ನಗರವಾಗಿಸಿದ್ದಾರೆ. ಇನ್ನಾದರೂ ಸಂಕಷ್ಠಿತ ಜನರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ದಪ್ಪ ಚರ್ಮದ ಭ್ರಷ್ಟ ಸರ್ಕಾರ ಮುಂದಾಗಲಿ ಎಂದು ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಎಂ.ಸತೀಶ್ ರೆಡ್ಡಿ, ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.