ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ನಾಡು ಹಾಗೂ ದೇಶ ಕಟ್ಟುವಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅನನ್ಯ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ವಿಶ್ವಾಮಿತ್ರ 50 ನೇ ವರ್ಷದ ಬ್ರಾಹ್ಮಣ ಮಹಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಬ್ರಾಹ್ಮಣ ಸಮುದಾಯ ಕೇವಲ ಆಚಾರ ವಿಚಾರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ, ಇವತ್ತು ಇಡೀ ವಿಶ್ವದಲ್ಲಿ ಭಾರತೀಯರು ಪಸರಿಸಿ ತಮ್ಮ ಮೇಧಾವಿತನವನ್ನು ಸಾಬೀತುಪಡಿಸುವಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾವಂತರ ಕೊಡುಗೆ ಅನನ್ಯವಾದುದು. ಭಾರತದ ಹೆಗ್ಗಳಿಕೆಯ ಕೀರ್ತಿಯ ಕಿರೀಟ ತೊಡಿಸುವಲ್ಲಿ ಬ್ರಾಹ್ಮಣ ಸಮುದಾಯದ ಸಮರ್ಪಣೆ ಚಾರಿತ್ರಿಕವಾದುದು ಎಂದು ಅವರು ತಿಳಿಸಿದ್ದಾರೆ.
ಭಾರತ ಭಾರತವಾಗಿ ಉಳಿದಿರುವುದಕ್ಕೆ ಆಚಾರ್ಯತ್ರಯರು ಅವತರಿಸಿ ಬಂದು ಮನುಕುಲದ ಕಣ್ಣು ತೆರೆಸಿ, ಸನಾತನ ಧರ್ಮದ ಮಹಿಮೆ ತಿಳಿಸಿ ಭಾರತವನ್ನು ಉಳಿಸಿ, ಆಧ್ಯಾತ್ಮದ ಬೆಳಕನ್ನು ಪ್ರಜ್ವಲಿಸಿ ಹೋಗಿದ್ದಾರೆ. ಸನಾತನ ಧರ್ಮ-ಭಾರತದ ಉಸಿರು, ಸಂಸ್ಕೃತಿಯ ಹಸಿರು, ಇದನ್ನು ಉಳಿಸಿ ಬೆಳೆಸುವಲ್ಲಿ ಬ್ರಾಹ್ಮಣ ಸಮುದಾಯದ ತ್ಯಾಗ, ಪರಿಶ್ರಮ ಹಾಗೂ ತಪಸ್ವೀ ಮನಸ್ಸಿನ ಕೊಡುಗೆಗಳನ್ನು ಸ್ಮರಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದ ಶ್ರೀಗಳು, ಸಮುದಾಯದ ವಿವಿಧ ಪರಮಪೂಜ್ಯ ಗುರುವರ್ಯರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಕೇಂದ್ರ ಸಹಾಯಕ ಸಚಿವರಾದ ಶೋಭಾ ಕರಂದ್ಲಾಜೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಶಾಸಕರಾದ ಟಿ.ಎಸ್.ಶ್ರೀವತ್ಸ, ಸಿ.ಕೆ.ರಾಮಮೂರ್ತಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಬಂಧುಗಳು ಉಪಸ್ಥಿತರಿದ್ದರು.