ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೇಂದ್ರದ ಎನ್ ಡಿಎ ಮೈತ್ರಿ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದ್ದು ಕರ್ನಾಟಕದ 9 ಸಾಧಕರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದು ಅವರೆಲ್ಲರಿಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಎಲ್ಲಾ ಕನ್ನಡಿಗ ಸಾಧಕರಿಗೆ ಕುಮಾರಸ್ವಾಮಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿರುವ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಅವರು (ಕಲೆ), ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿರುವ ಎ. ಸೂರ್ಯ ಪ್ರಕಾಶ್ ಅವರು (ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ), ಅನಂತ ನಾಗ್ ಅವರು (ಕಲೆ), ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿರುವ ಶ್ರೀಮತಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಕಲೆ), ಹಾಸನ ರಘು (ಕಲೆ), ಪ್ರಶಾಂತ್ ಪ್ರಕಾಶ್ (ಕೈಗಾರಿಕೆ ಮತ್ತು ವಾಣಿಜ್ಯ), ರಿಕಿ ಕೇಜ್ (ಕಲೆ), ವೆಂಕಪ್ಪ ಅಂಬಾನಿ ಸುಗಟೇಕರ್, ಶ್ರೀಮತಿ ವಿಜಯಲಕ್ಷ್ಮೀ ದೇಶಮನೆ ಅವರುಗಳಿಗೆ ಕೇಂದ್ರ ಸಚಿವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕನ್ನಡಾಂಬೆಯ ಕೀರ್ತಿ ಕಿರೀಟಕ್ಕೆ ಪದ್ಮಗರಿಗಳನ್ನು ಮೂಡಿಸಿರುವ ಎಲ್ಲಾ ಸಾಧಕರ ಯಶಸ್ಸಿನ ಮಾರ್ಗ ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಕುಮಾರಸ್ವಾಮಿ ಅವರು ನಮಿಸಿದ್ದಾರೆ.

