ಚಂದ್ರವಳ್ಳಿ ನ್ಯೂಸ್, ಹೊಸಕೋಟೆ (ಬೆಂ.ಗ್ರಾಮಾಂತರ):
ಲಾರಿ ಮತ್ತು ಬಸ್ ಮಧ್ಯ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಓವರ್ಟೇಕ್ ಮಾಡುವ ಭರದಲ್ಲಿ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶದ ಸಾರಿಗೆ ಬಸ್ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಹೊಸಕೋಟೆ ಗೊಟ್ಟಿಪುರ ಗೇಟ್ ಬಳಿ ಇಂದು ಮುಂಜಾನೆ ದುರ್ಘಟನೆ ಸಂಭವಿಸಿದೆ.
ತಿರುಪತಿಯಿಂದ ಬೆಂಗಳೂರಿನತ್ತ ಆಂಧ್ರಪ್ರದೇಶದ ಬಸ್ ಬರುತ್ತಿತ್ತು. ಈ ವೇಳೆ ಚಾಲಕ ಓವರ್ಟೇಕ್ ಮಾಡಲು ಮುಂದಾಗಿದ್ದು, ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಸ್ನ ಮುಂಭಾಗ ಮತ್ತು ಒಂದು ಬದಿ ಸಂಪೂರ್ಣ ಜಖಂ ಆಗಿದೆ. ಘಟನೆಯಲ್ಲಿ ಬಸ್ನಲ್ಲಿದ್ದ ಕೇಶವರೆಡ್ಡಿ (44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಹಾಗೂ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಯಾಣಿಕ ಮದನ್ ಮೋಹನ್ ರೆಡ್ಡಿ, ನಾವು ಚಿತ್ತೂರಿನಲ್ಲಿ ಬಸ್ ಹತ್ತಿದೆವು.
9 ಗಂಟೆಗೆ ಬರಬೇಕಿದ್ದ ಬಸ್ 11 ಗಂಟೆಗೆ ಚಿತ್ತೂರಿಗೆ ಬಂತು. ಎಲ್ಲರೂ ಮಲಗಿದ್ದಾಗ ಮುಂಜಾನೆ ಸಮಯದಲ್ಲಿ ದೊಡ್ಡದ್ದಾಗಿ ಶಬ್ದ ಬಂತು. ಎಚ್ಚರಗೊಂಡು ನೋಡಿದಾಗ ಬಸ್ಸಿನ ಮೇಲ್ಭಾಗ ಸೇರಿದಂತೆ ಒಂದು ಬದಿ ಸಂಪೂರ್ಣ ಜಖಂಗೊಂಡಿತ್ತು. ನನ್ನ ಪತ್ನಿಯ ಕಾಲಿಗೂ ಗಾಯವಾಗಿದೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಾಗಿತು ಎಂದರು.