ಚಿತ್ರದುರ್ಗದಲ್ಲಿ 10 ಕೋಟಿ ವೆಚ್ಚದ ಕೋಲ್ಡ್ ಸ್ಟೋರೇಜ್-ಸಂಸದ ಕಾರಜೋಳ
ಗಮನ ಸೆಳೆಯುತ್ತಿರುವ ಫಲ–ಪುಷ್ಪ ಪ್ರದರ್ಶನ ನೋಡಲು ನೂಕುನುಗ್ಗಲು
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ರೈತರು ಬೆಳೆದ ಬೆಳೆ ಸಂಗ್ರಹಿಸಿಡಲು ರೂ.10 ಕೋಟಿ ವೆಚ್ಚದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅಧಿಕಾರಿಗಳು ಪ್ರಸ್ತಾವ ಸಲ್ಲಿಸುವಂತೆ ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.
ನಗರದ ವಿ.ಪಿ.ಬಡಾವಣೆಯಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 32ನೇ ಫಲ–ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಬಾರ್ಡ್ ಅಥವಾ ಸಿಎಸ್ಆರ್ ಅನುದಾನದಲ್ಲಿ ರೂ.10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಸ್ತಾವನೆಗಳನ್ನು ಸಿದ್ದಪಡಿಸಿ, ಸಲ್ಲಿಸುವ ಕೆಲಸವಾಗಬೇಕು ಎಂದು ಹೇಳಿದರು.
ಫಲ–ಪುಷ್ಪ ಪ್ರದರ್ಶನ ರೈತ ಸ್ನೇಹಿ ಕಾರ್ಯಕ್ರಮವಾಗಿದ್ದು, ತೋಟಗಾರಿಕೆ ಇಲಾಖೆಯ ವಿವಿಧ ವಿಷಯ ತಜ್ಞರನ್ನು ಆಹ್ವಾನಿಸಿ, ರೈತರಿಗೆ ತರಬೇತಿ ನೀಡಬೇಕು. ಸಾವಿರಾರು ಕೋಟಿ ಖರ್ಚು ಮಾಡಿ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದು, ಹೊಸ ಹೊಸ ತಳಿಗಳ ಸಂಶೋಧನೆ ಮಾಡಬೇಕಿರುವುದು ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶ. ರೈತರಿಗೆ ಕಡಿಮೆ ವೆಚ್ಚದಲ್ಲಿ ವ್ಯವಸಾಯ ಮಾಡುವ ನಿಟ್ಟಿನಲ್ಲಿ ತಯಾರು ಮಾಡಬೇಕು ಎಂದರು.
ದೇಶದ ಪರಂಪರೆಯಂತೆ ಕೊಟ್ಟಿಗೆ ಗೊಬ್ಬರ ಸೇರಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹಾಗಾಗಿ ರೈತರನ್ನು ಈ ವಿಚಾರದಲ್ಲಿ ಅಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಮಾರಾಟ ಮಾಡುವುದರಿಂದ ಜನರಿಗೆ ವಿಷ ನೀಡಿದಂತಾಗುತ್ತದೆ. ಹಾಗಾಗಿ ರೈತರಿಗೆ ಜಾಗೃತಿ ಮೂಡಿಸಬೇಕಾಗಿದ್ದು, ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಬಿಡುವ ಮುನ್ನ ಸಂಪೂರ್ಣವಾಗಿ ಹಣ್ಣು ಆದ ನಂತರವೇ ಮಾರುಕಟ್ಟೆಗೆ ಬಿಡಬೇಕು ಎಂದು ತಿಳಿಸಿದ ಅವರು, ಭೂಮಿ ಮತ್ತು ನೀರಿನ ಮೇಲೆ ರೈತರ ಶ್ರೀಮಂತಿಕೆ ನಿಂತಿದೆ ಎಂದರು.
ಜಿಲ್ಲೆಯು ಒಣ ಬೇಸಾಯದಿಂದ ಕೂಡಿದ್ದು, ಒಣ ಬೇಸಾಯದಲ್ಲಿ ಉತ್ತಮ ಹಣ್ಣಿನ ಬೆಳೆ ಬೆಳೆಯಲು ಸಾಧ್ಯವಿದೆ. ಇದರ ಜೊತೆಗೆ ಹಣ್ಣಿನ ರುಚಿಯು ಅತ್ಯುತ್ತಮವಾಗಿರಲಿದೆ. ಬಿಜಾಪುರ ಜಿಲ್ಲೆಯಲ್ಲಿ ಬೆಳೆದ ದಾಳಿಂಬೆ, ದ್ರಾಕ್ಷಿ, ಬಾಳೆಹಣ್ಣು ಯಾವ ಜಿಲ್ಲೆಯಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಅಲ್ಲಿನ ಹವಾಮಾನ ಹಾಗೂ ಬಿಸಿಲು. ಚಿತ್ರದುರ್ಗ ಜಿಲ್ಲೆಯಲ್ಲಿಯೂ ತೋಟಗಾರಿಕೆ ಬೆಳೆ ಹೆಚ್ಚು ಮಾಡಲು ಸಾಧ್ಯವಿದೆ ಎಂದು ಹೇಳಿದರು.
66 ಲಕ್ಷ ಹೆಕ್ಟೇರ್ಗೆ ನೀರಾವರಿ ಮಾಡುವಷ್ಟು ಸಾಮಾಥ್ರ್ಯದ ನೀರು ರಾಜ್ಯದಲ್ಲಿ ಇದೆ. ಕೃಷ್ಣ ನ್ಯಾಯಾಧೀಕರಣ, ಕಾವೇರಿ ನ್ಯಾಯಾಧೀಕರಣದಲ್ಲಿ ಹಂಚಿಕೆಯಾದ ನೀರನ್ನು ಉಪಯೋಗ ಮಾಡಿಕೊಂಡು ಸುಮಾರು ಮೇಜರ್ ಇರಿಗೇಷನ್ನಿಂದ 30 ಲಕ್ಷ ಹೆಕ್ಟೇರ್ ನೀರಾವರಿ ಮತ್ತು ಮೈನರ್ ಇರಿಗೇಷನ್ನಿಂದ 7 ಲಕ್ಷ ಹೆಕ್ಟೇರ್ ನೀರಾವರಿ ಮಾಡಲಾಗಿದೆ. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆಬಾವಿ, ಹಳ್ಳ, ಕೊಳ್ಳ ನೀರಿನ ಮೂಲಗಳಿಂದ 16 ಲಕ್ಷ ಹೆಕ್ಟೇರ್ ನೀರಾವರಿ ಮಾಡಿಕೊಂಡಿದ್ದಾರೆ. ಇನ್ನೂ 13 ಲಕ್ಷ ಹೆಕ್ಟೇರ್ ನೀರಾವರಿ ಮಾಡುವ ಅವಕಾಶ ಇದ್ದು, ಇನ್ನೂ ಷ್ಟು ನೀರು ಲಭ್ಯವಿದೆ. ಕೃಷ್ಣ ನ್ಯಾಯಾಧೀಕರಣ–2ರಲ್ಲಿ 173 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದು ತಿಳಿಸಿದ ಅವರು, ರೈತರಿಗೆ ನೀರು ಬಹಳ ಮುಖ್ಯವಾಗಿದ್ದು, ಹಳ್ಳ, ಕೊಳ್ಳ, ಕೆರೆಕಟ್ಟೆಗಳನ್ನು ಒತ್ತುವರಿ ಮಾಡದೇ ಅವುಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಂಸದರು ರೈತರಿಗೆ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲೆಯ ರೈತರು ಉತ್ತಮ ಸಾಧನೆ ತೋರಿದ್ದು, ತೋಟಗಾರಿಕೆ ಬೆಳೆಗಳಲ್ಲಿ ಮುಂಚೂಣಿಯಲ್ಲಿದಾರೆ. ಚಿತ್ರದುರ್ಗ ಜಿಲ್ಲೆಯ ಬೆಂಗಳೂರಿಗೆ ಬಹಳ ಹತ್ತಿರ ಇರುವುದರಿಂದ ತೋಟಗಾರಿಕೆ ಬೆಳೆಗಳಲ್ಲಿ ರೈತರು ಪ್ರಯತ್ನ ಮಾಡಿದರೆ ಕೇವಲ 2 ರಿಂದ 3 ಗಂಟೆಯೊಳಗೆ ಬೆಂಗಳೂರು ಮಾರುಕಟ್ಟೆ ತಲುಪಬಹುದು. ಹಾಗಾಗಿ ಇತ್ತೀಚಿಗೆ ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವಂತಹದನ್ನು ನೋಡುತ್ತಿದ್ದೇವೆ. ಅದೇ ರೀತಿ ಸರ್ಕಾರದ ನೆರವಿನ ಅಗತ್ಯವೂ ಇದೆ ಎಂದು ಹೇಳಿದರು.
ಚಳ್ಳಕೆರೆಯಲ್ಲಿ ಎರಡು ಖಾಸಗಿ ಕೋಲ್ಡ್ ಸ್ಟೋರೇಜ್ ಬಿಟ್ಟರೆ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿಯೂ ಕೋಲ್ಡ್ ಸ್ಟೋರೇಜ್ ಇಲ್ಲ. ಸಂಸದರ ಸೂಚನೆಯಂತೆ ರೂ.10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಪ್ರಸ್ತಾವ ಸಿದ್ದಪಡಿಸಬೇಕು.ಇದರಿಂದ ಜಿಲ್ಲೆಯ ರೈತರು ಬೆಳೆದ ಎಲ್ಲ ಬೆಳೆಗಳಿಗೆ ಒಳ್ಳೆಯ ಮೌಲ್ಯವರ್ಧನೆಗೆ ಸಹಾಯಕವಾಗಲಿದೆ ಎಂದು ಹೇಳಿದರು.
ಇಡೀ ದೇಶದಲ್ಲಿ ಕರ್ನಾಟಕ ಅತೀ ಹೆಚ್ಚು ತೋಟಗಾರಿಕೆ ಬೆಳೆಯನ್ನು ಬೆಳೆಯುವ ರಾಜ್ಯಗಳಲ್ಲಿ (ಭೂಪ್ರದೇಶ–ವಿಸ್ತೀರ್ಣದಲ್ಲಿ) ನಂ.1 ಸ್ಥಾನದಲ್ಲಿದೆ. ಆದರೆ ಪ್ರೋಡಕ್ಷನ್ನಲ್ಲಿ 7ನೇ ಸ್ಥಾನದಲ್ಲಿದೆ. ಹಾಗಾಗಿ ಇದರ ಬಗ್ಗೆ ಅಲೋಚನೆ ಮಾಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಹಾಗೂ ಆದಾಯ ಪಡೆಯಲು ಬಹಳಷ್ಟು ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಇದರಿಂದ ಭೂಮಿಯು ವಿಷವಾಗಲಿದ್ದು, ಎಲ್ಲರೀತಿಯಿಂದಲೂ ವ್ಯತಿರಿಕ್ತವಾಗಲಿದೆ. ತೋಟಗಾರಿಕೆ ಬೆಳೆ ಬೆಳೆಯುವ ಪೂರ್ವದಲ್ಲಿ ತೋಟಗಾರಿಕೆ ಕಚೇರಿ, ಹಾರ್ಟಿಕ್ಲಿನಿಕ್ಗಳಿಗೆ ಭೇಟಿ ನೀಡಿ, ಮಾಹಿತಿ ಪಡೆಯಬೇಕು. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಜಲತಜ್ಞ ದೇವರಾಜರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಕೊರತೆಯೇ ದೊಡ್ಡ ಸವಾಲು. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆಬೀಳುವ ಪ್ರದೇಶ ಚಿತ್ರದುರ್ಗ. ಕಳೆದ 3 ವರ್ಷಗಳಿಂದ ಮೂರು ಪಟ್ಟು ಮಳೆ ಜಾಸ್ತಿಯಾಗಿದೆ. 100 ವರ್ಷಗಳ ಮಳೆ ವರದಿ ನೋಡಿದಾಗ ಇದರಲ್ಲಿ 70 ವರ್ಷಕಾಲ ಬರ, 30 ವರ್ಷ ಮಳೆ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರತಿ ಹನಿ ಮಳೆ ನೀರನ್ನು ಸಂಗ್ರಹಿಸುವ, ಭೂಮಿಗೆ ಇಂಗಿಸುವ ಕೆಲಸ ಬಹಳ ಮುಖ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗುವಂತೆ ಕೊಳವೆಬಾವಿ ಕೊರೆಸುತ್ತಾ ಬಂದಿದ್ದೇವೆ. ಶೇ.80ರಷ್ಟು ಅಂತರ್ಜಲ ನಿಕ್ಷೇಪಗಳು ಬರಿದಾಗಿವೆ. ಹಾಗಾಗಿ ಬೀಳುವ ಮಳೆ ನೀರಿನ ಬಗ್ಗೆ ಅಲೋಚನೆ ಮಾಡಬೇಕಿದೆ ಎಂದು ತಿಳಿಸಿದ ಅವರು, ಓಡುವ ನೀರು ನಡೆಯುವಂತೆ, ನಡೆಯುವ ನೀರು ನಿಲ್ಲುವಂತೆ, ನಿಂತ ನೀರು ಭೂಮಿಗೆ ಇಂಗಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಣ್ಮನ ಸೆಳೆದ ಕಲಾಕೃತಿಗಳು: ಗುಲಾಬಿ, ಬಿಳಿ ಸೇವಂತಿ ಪುಷ್ಪಗಳಿಂದಲೇ ಸಿದ್ಧಪಡಿಸಿದ ಹೆಣ್ಣಿಗೆ ಗೌರವ ಸೂಚಿಸುವ ಕಲಾಕೃತಿ, ಸ್ವಾವಲಂಬಿ ರೈತ, ಮಯೂರ ವರ್ಮನ ಕಲಾಕೃತಿ, ವಾಣಿವಿಲಾಸ ಸಾಗರ ಅಣೆಕಟ್ಟಿನ ಕಲಾಕೃತಿ ಸೇರಿದಂತೆ ಆಕರ್ಷಕ ಬಣ್ಣದ ವಿವಿಧ ಜಾತಿಯ ಹೂಗಳಿಂದ ಹಲವಾರು ಕಲಾಕೃತಿಗಳು ಅರಳಿ ನಿಂತಿದ್ದು, ಈ ಕಲಾಕೃತಿಗಳು ಜನರ ಕಣ್ಮನ ಸಳೆಯುತ್ತಿವೆ.
ವಿವಿಧ ಜಾತಿಯ ಹೂವು, ಹಣ್ಣುಗಳು, ತರಕಾರಿ, ಅಲಂಕಾರಿಕ ಗಿಡಗಳ ಪ್ರದರ್ಶನ ಜನರನ್ನು ಆಕರ್ಷಿಸಿದವು. ಫಲ–ಪುಷ್ಪಗಳ ನಡುವೆ ಜನರನ್ನು ಆಕರ್ಷಿಸಲು ಗ್ರಾಮೀಣ ಸೊಗಡು, ತರಕಾರಿ ಮನೆ, ಔಷಧೀಯ ಸಸ್ಯಗಳು ಸೇರಿ ಒಟ್ಟಾರೆ ಫಲ–ಪುಷ್ಪ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡಿತ್ತಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ತಹಶೀಲ್ದಾರ್ ಡಾ.ನಾಗವೇಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ಜಿಲ್ಲಾ ತೋಟಗಾರಿಕೆ ಸಲಹಾ ಸಮಿತಿ ಅಧ್ಯಕ್ಷ ಜಿ.ಎಸ್.ಉಜ್ಜಿನಪ್ಪ, ಖಜಾಂಚಿ ನಾಗರಾಜ್ ಬೇದ್ರೆ, ನಿರ್ದೇಶಕರಾದ ಶ್ವೇತಾ, ರೀನಾ, ಎಸ್.ಆರ್.ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.