ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದೂರ ಪ್ರಯಾಣ ಮಾಡುವವರಿಗೆ ಯಾವುದೇ ರೀತಿಯ ಸೋಂಕು ಹರಡದಂತೆ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್ ತಿಳಿಸಿದರು.
ಹಜ್ ಯಾತ್ರಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಎಂ.ಕೆ.ಪ್ಯಾಲೇಸ್ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
೧೦೨ ಹಜ್ ಯಾತ್ರಾರ್ಥಿಗಳಿಗೆ ಪೋಲಿಯೋ ಮಾದರಿ ಹನಿ ಹಾಗೂ ಲಸಿಕೆ ನೀಡುವುದರಿಂದ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಭಾರತ ಸರ್ಕಾರ ಔಷಧಿಗಳನ್ನು ಪೂರೈಸುತ್ತಿದೆ. ಗರ್ಭಕಂಠದ ಕ್ಯಾನ್ಸ್ರ್ ತಡೆಗಟ್ಟುವುದಕ್ಕಾಗಿ ಮುಂಜಾಗ್ರತೆಯಾಗಿ ಹದಿನಾಲ್ಕು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ. ಲಸಿಕೆ ಕೊಡಲಾಗುತ್ತಿದೆ. ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿದ್ದು, ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ ಹೆಚ್.ಪಿ.ವಿ. ಲಸಿಕೆ ತೆಗೆದುಕೊಂಡರೆ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ ಎಂಬುದಾಗಿ ಕೆಲವರು ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಯಾರು ಇದಕ್ಕೆ ಕಿವಿಗೊಡುವುದು ಬೇಡ. ಗರ್ಭಕಂಠದ ಕ್ಯಾನ್ಸ್ರ್ ಬಾರದಂತೆ ಹದಿನಾಲ್ಕು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಪ್ರತಿಯೊಬ್ಬರು ಇದಕ್ಕೆ ಕೈಜೋಡಿಸುವಂತೆ ವಿನಂತಿಸಿದರು.
ಆರ್.ಸಿ.ಹೆಚ್.ಅಧಿಕಾರಿ ಡಾ.ಅಭಿನವ್ ಮಾತನಾಡುತ್ತ ಹಜ್ ಯಾತ್ರಾರ್ಥಿಗಳಿಗೆ ಪೋಲಿಯೋ ಮಾದರಿ ಹನಿ, ಮೆದುಳು ಜ್ವರ ಬಾರದಂತೆ, ವಯಸ್ಸಾದವರಿಗೆ ಶ್ವಾಸಕೋಶದ ತೊಂದರೆಯಾಗಬಾರದೆಂದು ಮೂರು ಹಂತದಲ್ಲಿ ಲಸಿಕೆ ನೀಡಲಾಗುವುದು. ಹದಿನಾಲ್ಕು ವರ್ಷದೊಳಗಿನ ಹೆಣ್ಣು ಮಕ್ಕಳು ಗರ್ಭಕಂಠ ಕ್ಯಾನ್ಸ್ರ್ ವಿರುದ್ದ ಮುಂಜಾಗ್ರತೆಯಾಗಿ ಹೆಚ್.ಪಿ.ವಿ. ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿ ಹಜ್ಯಾತ್ರೆ ಸುಖಕರವಾಗಿರಲೆಂದು ಶುಭ ಹಾರೈಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಧರ್ಮಗುರುಗಳಾದ ಮುಜಾಫರ್ ಶಕೀಲ್, ಬಶೀರ್ ಅಹಮದ್, ಎಜಾಜ್, ಹಜ್ ಕಮಿಟಿ ಕಾರ್ಯದರ್ಶಿ ಹಾಜಿ ಆರ್.ದಾದಾಪೀರ್, ಹಾದಿಲ್, ಸಾಧಿಕ್, ಅಕ್ಬರ್, ಡಾ.ಸುಹೇಲ್, ಜಿಲ್ಲಾ ವಕ್ಪ್ ಅಧಿಕಾರಿ ಅಮ್ಜದ್, ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಆರೋಗ್ಯ ನಿರಿಕ್ಷಣಾಧಿಕಾರಿ ಗಂಗಾಧರ್, ಲಸಿಕಾ ವ್ಯವಸ್ಥಾಪಕ ವೀರೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಕೃಷ್ಣನಾಯ್ಕ, ಮೂಗಪ್ಪ, ಕ್ಷಯ ರೋಗ ಮೇಲ್ವಿಚಾರಕರುಗಳಾದ ಮಹೇಂದ್ರ, ಮಾರುತಿ ಇವರುಗಳು ವೇದಿಕೆಯಲ್ಲಿದ್ದರು.

