ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದ ಆರೋಗ್ಯ ಇಲಾಖೆಯ ಆರೋಗ್ಯವೇ ಕೆಟ್ಟುಹೋಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ 2,000 ವೈದ್ಯರ ಹುದ್ದೆ ಖಾಲಿ ಇವೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಡೆಂಘೀ ಪ್ರಕರಣಗಳು 25,000 ಗಡಿ ದಾಟಿದೆ.
ಬಿಲ್ ಪಾವತಿ ಮಾಡಲಾಗದೆ 14 ಜಿಲ್ಲಾಸ್ಪತ್ರೆಗಳಲ್ಲಿ CT, MRI ಸ್ಕ್ಯಾನಿಂಗ್ ಸ್ಥಗಿತವಾಗಿದೆ ಎಂದು ಸರ್ಕಾರದ ವಿರುದ್ಧ ಅವರು ಕಿಡಿ ಕಾರಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವರಕ್ಷಕ ಔಷಧಿಗಳ ಅನುದಾನ 40% ಕಟ್. 3,500 ಆಂಬುಲೆನ್ಸ್ ಚಾಲಕರಿಗೆ 3 ತಿಂಗಳಿಂದ ಸಂಬಳ ಇಲ್ಲ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನ ಮೂವರು ಗರ್ಭಿಣಿ ಮಹಿಳೆಯರ ಸಾವು ಕಂಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ 250ಕ್ಕೂ ಹೆಚ್ಚು ಔಷಧಿಗಳು No Stock ಲಿಸ್ಟ್ ನಲ್ಲಿವೆ. ಇಷ್ಟೆಲ್ಲಾ ಎಡವಟ್ಟುಗಳ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ದರ 20% ಹೆಚ್ಚಳವಾಗಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಂದು ವೇಳೆ ಸಂಪುಟ ಪುನಾರಚನೆ ಆದರೆ ಬಹುಶಃ ಮೊದಲು ತಲೆದಂಡ ಆಗಬೇಕಾಗಿರುವುದು ಆರೋಗ್ಯ ಸಚಿವರದೇ! ಎಂದು ಅವರು ವ್ಯಂಗ್ಯವಾಡಿದ್ದಾರೆ.