ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಮ್ಮಲ್ಲಿ ಭಿನ್ನಮತವಿಲ್ಲ. ನಾವೆಲ್ಲ ಒಂದೇ ಎಂಬ ಜಪ ಮಾಡಿದ್ದರೂ ಸಿಎಂ-ಡಿಸಿಎಂ ಅವರ ಆಪ್ತರು ಮಾತ್ರ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು ಮೇಲಿಂದ ಮೇಲೆ ಪಕ್ಷದ ಶಿಸ್ತು ಉಲ್ಲಂಘನೆ ಆಗುತ್ತಲೇ ಇದೆ. ಕಾಂಗ್ರೆಸ್ ಪಕ್ಷದ ಆಂತರಿಕ ಕದನ ಉಲ್ಬಣವಾಗಿದೆ.
ಈ ಮೂಲಕ ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹೈಕಮಾಂಡ್ ಮನೆಯ ಕದ ತಟ್ಟುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುತ್ತಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ವರಿಷ್ಠರ ಅಂಗಳದಲ್ಲಿ ಕುರ್ಚಿ ಕದನದ ಚರ್ಚೆ?
ದೆಹಲಿಯಲ್ಲಿ ಮತಗಳ್ಳತನ ವಿರುದ್ಧ ಕಾಂಗ್ರೆಸ್ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಆ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಸಿಎಂಗಿಂತ ಮುಂಚಿತವಾಗಿ ದೆಹಲಿಗೆ ತೆರಳಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಜ್ಜಾಗಿ ನಿಂತಿದ್ದಾರೆ.
ಡಿಕೆ ಶಿವಕುಮಾರ್ ಅವರು ದೆಹಲಿಗೆ ಶನಿವಾರ ತೆರಳಿದ್ದು ಮತಗಳ್ಳತನ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ದೆಹಲಿಯಲ್ಲೇ ಮೂರು ದಿನ ಉಳಿದುಕೊಳ್ಳಲಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ವೋಟ್ ಚೋರಿ ಪ್ರತಿಭಟನೆ ಕೂಡ ಒಂದು. ಈ ಮಧ್ಯೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರ ವಿಚಾರಣೆಗೂ ಡಿಕೆ ಸಹೋದರರು ಹಾಜರಾಗಲಿದ್ದಾರೆ. ಮೂರು ದಿನ ರಾಷ್ಟ್ರ ರಾಜಕಾರಣದ ಹೆಡ್ ಕ್ವಾಟ್ರಸ್ನಲ್ಲಿಯೇ ಉಳಿಯಲಿರುವ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನೂ ಭೇಟಿ ಆಗಲಿದ್ದಾರೆ ಎನ್ನಲಾಗಿದೆ. ಒಂದೊಳ್ಳೆ ಸಮಯ ಒದಗಿ ಬಂದರೆ, ನಾಯಕತ್ವದ ವಿಚಾರವನ್ನೂ ಪ್ರಸ್ತಾಪ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ದೆಹಲಿಗೆ ಹೊರಟ ಮಂಡ್ಯ ಕಾಂಗ್ರೆಸ್ ನಾಯಕರು–
ಮಂಡ್ಯದ ಕಾಂಗ್ರೆಸ್ ನಾಯಕರು ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ವೋಟ್ ಚೋರಿ ನೆಪದಲ್ಲಿ ಹೋಗುತ್ತಿರುವ ನಾಯಕರು, ವರಿಷ್ಠರ ಮುಂದೆ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಸಿಎಂ ಬದಲಿಸುವಂತೆ ಒತ್ತಡ ಹೇರಲು ತಂತ್ರ ನಡೆಸಿದ್ದಾರೇ ಎಂಬ ಪ್ರಶ್ನೆ ರಾಜಕಾರಣದ ಪಡಸಾಲೆಯಲ್ಲಿ ಮೂಡಿದೆ.

